
ಬಾಗಲಕೋಟೆ : ಸ್ಥಳೀಯ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಅನ್ನಭಾಗ್ಯ ಯೊಜನೆ ಪಡಿತರ ಅಕ್ಕಿ ಅಕ್ರಮ ಮಾರಾಟ ವ್ಯವಹಾರ ಅವ್ಯಾಹತವಾಗಿ ನಡೆದಿರುವುದಕ್ಕೆ ಕಡಿವಾಣ ಹಾಕಲು ಅಧಿಕಾರಿಗಳು ಹೆಣಗಾಡುತ್ತಿದ್ದಾರೆ. ಎಪಿಎಂಸಿ ಆವರಣದಲ್ಲಿನ ಅಂಗಡಿ ಮೇಲೆ ದಾಳಿ ಮಾಡಿದ ಆಹಾರ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಅಕ್ರಮ ದಾಸ್ತಾನು ಮಾಡಿದ್ದ ಪಡಿತರ ಅಕ್ಕಿ ಚೀಲಗಳನ್ನು ವಶ ಪಡಿಸಿಕೊಂಡ ಘಟನೆ ವಾರದ ಹಿಂದೆ ನಡೆದಿದೆ. ಇಂತಹ ಘಟನೆ ಮೇಲಿಂದ ಮೇಲೆ ನಡೆಯುತ್ತಿರುವುದು ಸಾಮಾನ್ಯವಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಅಧಿಕಾರಿಗಳು ಕಾಳಸಂತೆಯಲ್ಲಿ ಅಕ್ರಮ ಪಡಿತರ ಮಾರಾಟಕ್ಕೆ ಬ್ರೇಕ್ ಹಾಕಲು ಶ್ರಮ ವಹಿಸುತ್ತಿದ್ದಾರೆ. ಆದರೂ ಅಕ್ರಮ ಪಡಿತರ ಅಕ್ಕಿ ವ್ಯವಹಾರ ಎಗ್ಗಿಲ್ಲದೆ ಸಾಗಿರುವುದು ಜನ ಹುಬ್ಬೆರಿಸುವಂತೆ ಮಾಡಿದೆ. ಸರ್ಕಾರ ಬಡವರಿಗೆ ಉಚಿತವಾಗಿ ನೀಡುವ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಖರೀದಿಸುತ್ತಿರುವುದು ಗಜೇಂದ್ರಗಡ ಪಟ್ಟಣ, ಸುತ್ತಲಿನ ಗ್ರಾಮದಲ್ಲಿ ನಡೆದಿದೆ. ಸರ್ಕಾರ ಬಡವರಿಗೆ ಉಚಿತವಾಗಿ ಅಕ್ಕಿ ವಿತರಣೆ ಮಾಡುತ್ತಿದ್ದರೆ, ಆ ಅಕ್ಕಿಯನ್ನು ಹೆಚ್ಚಿನ ಬೆಲೆಯ ಆಸೆ ತೋರಿಸಿ ಖರೀದಿಸುತ್ತಿರುವುದು ಅಲ್ಲಲ್ಲಿ ಕಂಡುಬಂದಿದೆ. ವಿಶೇಷವಾಗಿ ಹಳ್ಳಿಗಳಲ್ಲಿ ಸುತ್ತಾಡುವ ಕೆಲ ಜನರ ಗುಂಪು, ಪ್ರತಿ ಕೆಜಿಗೆ 10 ರೂ. ರಿಂದ 15 ರೂ.ವರೆಗೆ ಹಣ ನೀಡಿ ಖರೀದಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

ಅಕ್ರಮವಾಗಿ ಅಕ್ಕಿ ದಾಸ್ತಾನು ಹಾಗೂ ಸಾಗಣೆ ಮೇಲೆ ದಾಳಿ ನಡೆಸಿರುವ ಆಹಾರ ಸರಬರಾಜು ನಿಗಮದ ಅಧಿಕಾರಿಗಳು, ಪ್ರಕರಣ ದಾಖಲಿಸಿಕೊಂಡು ಅಕ್ಕಿ ವಶಪಡಿಸಿಕೊಳ್ಳಲಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಅಧಿಕಾರಿ ಶಕುಂತಲಾ ಚವಡಿ ಹೇಳಿದ್ದಾರೆ. ಗ್ರಾಮಸ್ಥರ ಮನೆಗೆ ತೆರಳುವ ಈ ಗುಂಪು, ರೇಷನ್ ಅಕ್ಕಿ ಖರೀದಿಸಲಾಗುವುದು ಎಂದು ಹೇಳುತ್ತಾರೆ. ಮನೆ ಬಾಗಿಲಿನಲ್ಲಿಯೇ ಅಕ್ಕಿಯ ತೂಕ ನೋಡಿ, ಹಣ ನೀಡಿ ವಾಹನದಲ್ಲಿ ಹಾಕಿಕೊಂಡು ಸಾಗುತ್ತಾರೆ. ಹೀಗೆ ಸಂಗ್ರಹಿಸಿದ ಅಪಾರ ಪ್ರಮಾಣದ ಅಕ್ಕಿಯನ್ನು ಕೆಲ ದಲ್ಲಾಳಿಗಳಿಗೆ ಮರು ಮಾರಾಟ ಮಾಡುತ್ತಾರೆ. ಅವರು ಅದನ್ನು ಡೀಲರ್ಸ್ ಮುಖಾಂತರ ಲಾರಿಗಳಲ್ಲಿ ಬೇರೆ ಕಡೆಗೆ ಸಾಗಿಸುತ್ತಾರೆ ಎಂಬ ದೂರುಗಳು ಕೇಳಿಬರುತ್ತಿವೆ.

ಯಾವುದೇ ಭಯವಿಲ್ಲದೇ ಅಕ್ರಮವಾಗಿ ಅಕ್ಕಿ ಖರೀದಿ ಹಾಗೂ ಸಾಗಣೆ ಮಾಡುತ್ತಿದ್ದರೂ ಕ್ರಮ ಇಲ್ಲದಂತಾಗಿದೆ. ಬಡವರ ಹೊಟ್ಟೆ ತುಂಬಿಸಲು ಸರ್ಕಾರ ಉಚಿತವಾಗಿ ಅಕ್ಕಿ ನೀಡಿದರೆ ಅದು ಅಕ್ರಮ ದಂಧೆಗೆ ಬಳಕೆಯಾಗುತ್ತಿದೆ. ಕೂಡಲೇ ಸರ್ಕಾರ ಮತ್ತು ಆಹಾರ ಇಲಾಖೆ ಕ್ರಮ ಕೈಗೊಳ್ಳಬೇಕು ಎಂಬುದು ಪ್ರಜ್ಞಾವಂತರ ಆಗ್ರಹವಾಗಿದೆ. ಪಡಿತರ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡುವವರು ಮತ್ತು ಅಕ್ಕಿ ಕೊಳ್ಳುವವರು ಸಿಕ್ಕರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಪ್ರಕರಣ ದಾಖಲು ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಗಜೇಂದ್ರಗಡ ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಎಚ್ಚರಿಸಿದ್ದಾರೆ.