
ಚಿಕ್ಕಬಳ್ಳಾಪುರ : ಪ್ರಸಿದ್ಧ ಪ್ರವಾಸಿ ತಾಣ ತಾಲ್ಲೂಕಿನ ಶ್ರೀನಿವಾಸ ಸಾಗರದಲ್ಲಿ ಬುಧವಾರ ಮುಳುಗಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಈ ಮೂಲಕ ಮೃತ್ಯುಕೂಪ ಎನ್ನುವ ಕುಖ್ಯಾತಿ ಪಡೆದಿರುವ ಶ್ರೀನಿವಾಸ ಸಾಗರದಲ್ಲಿ ಈ ವರ್ಷ ನಡೆದ ಮೊದಲ ಸಾವಿನ ಪ್ರಕರಣ ಇದಾಗಿದೆ. ಚಿಕ್ಕಬಳ್ಳಾಪುರದ 17ನೇ ವಾರ್ಡ್ ಬಷೀರಾ (43), ಫರೀನಾ ಬೇಗಂ (40), ಇಮ್ರಾನ್ (40) ಮೃತರು. ಮಮತಾ ರೇಡಿಯೊ ಹೌಸ್ ಎಂದೇ ಈ ಕುಟುಂಬ ನಗರದಲ್ಲಿ ಪರಿಚಿತ.ಇದೇ ಕುಟುಂಬದ ಇಮ್ರಾನ್ ಕೆಲಸದ ನಿಮಿತ್ತ ಬೆಂಗಳೂರಿನ ಮುನಿರೆಡ್ಡಿ ಪಾಳ್ಯದಲ್ಲಿ ವಾಸಿಸುತ್ತಿದ್ದರು. ರಂಜಾನ್ ಪ್ರಯುಕ್ತ ಚಿಕ್ಕಬಳ್ಳಾಪುರಕ್ಕೆ ಕುಟುಂಬ ಸಮೇತ ಬಂದಿದ್ದರು. ಹಬ್ಬ ಪೂರ್ಣವಾಗಿದ್ದರೂ ಸಂಭ್ರಮದಲ್ಲಿ ಇದ್ದರು.

ಬುಧವಾರ ಮನೆ ಮಂದಿ ಶ್ರೀನಿವಾಸ ಸಾಗರಕ್ಕೆ ಪ್ರವಾಸ ಹೋಗಿದ್ದರು. ಈಜಲು ನೀರಿಗೆ ಇಳಿದಿದ್ದು ಈ ವೇಳೆ ಅವಘಡ ಸಂಭವಿಸಿದೆ. ಎಂಟತ್ತು ಮಂದಿ ಶ್ರೀನಿವಾಸ ಸಾಗರಕ್ಕೆ ತೆರಳಿದ್ದರು. ಇವರಲ್ಲಿ ಮಕ್ಕಳೂ ಇದ್ದರು. ನೀರಿಗೆ ಇಳಿದ ಈ ಮೂವರು ಮುಳುಗಿದ್ದಾರೆ. ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಶವಗಳ ಮರಣೋತ್ತರ ಪರೀಕ್ಷೆಗೆ ನಡೆಸಲಾಯಿತು. ಈ ವೇಳೆ ಕುಟುಂಬ ಸದಸ್ಯರ ಅಕ್ರಂದನ ತೀವ್ರವಾಗಿತ್ತು. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು. 2025ರಲ್ಲಿ ಶ್ರೀನಿವಾಸ ಸಾಗರದಲ್ಲಿ ಮುಳುಗಿ ಮೃತಪಟ್ಟ ಮೊದಲ ಪ್ರಕರಣ ಇದಾಗಿದೆ. ರಮಣೀಯ ಮತ್ತು ಜಲವೈಭವದ ಕಾರಣದಿಂದ ಶ್ರೀನಿವಾಸ ಸಾಗರ ಜಲಾಶಯ ಜಿಲ್ಲೆಯ ಜನರನ್ನಷ್ಟೇ ಅಲ್ಲ ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಗಳ ಅಪಾರ ಸಂಖ್ಯೆಯ ಪ್ರವಾಸಿಗರನ್ನು ಸೆಳೆಯುತ್ತಿದೆ. ಎಚ್.ಎನ್.ವ್ಯಾಲಿ ನೀರಾವರಿ ಯೋಜನೆಗೆ ಒಳಪಡುವ ಜಲಾಶಯಕ್ಕೆ ಬೆಂಗಳೂರಿನ ಕೊಳಚೆ ನೀರನ್ನು ಸಂಸ್ಕರಿಸಿ ಹರಿಸಲಾಗುತ್ತದೆ. ಇಂತಹ ಜಲಸಿರಿಯ ಶ್ರೀನಿವಾಸ ಸಾಗರ ಮೃತ್ಯುಕೂಪವಾಗುತ್ತಿದೆ.