
ಮೈಸೂರು : ಮೇಲ್ವಿಚಾರಣೆ ಕೊರತೆ ಕಾರಣಕ್ಕೆ ಸ್ಥಳೀಯ ಸಂಸ್ಥೆಗಳಾದ ಪಾಲಿಕೆ, ಪುರಸಭೆ, ನಗರಸಭೆ, ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನೋಂದಣಿಯಾಗಿರುವ ಆಸ್ತಿಗಳಿಗೆ ಇ-ಖಾತೆ, ಬಿ-ಖಾತೆ ಮಾಡಿಕೊಡುವ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ. ಇದರಿಂದಾಗಿ ಸಾರ್ವಜನಿಕರು ಅನಗತ್ಯವಾಗಿ ಕಚೇರಿಗಳಿಗೆ ಅಲೆಯುವಂತಾಗಿದೆ. ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಡಿಜಿಟಲೈಜೇಷನ್ ಮಾಡುವ ಉದ್ದೇಶದಿಂದ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನೋಂದಣಿಯಾಗಿರುವ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ ಇ-ಖಾತೆ ಮಾಡಿಕೊಡಲಾಗುತ್ತಿದೆ. ಇದಲ್ಲದೇ ರಿಜಿಸ್ಟರ್ ಆಗಿರುವ ದಾಖಲೆ ಇದ್ದು, ಬಡಾವಣೆ ನಿರ್ಮಾಣ ಮಾಡಿದವರ ಕೆಲವೊಂದು ದೋಷಗಳಿಂದ ಖಾತೆ ಮಾಡದೇ ತಡೆ ಹಿಡಿಯಲಾಗಿರುವ ಆಸ್ತಿಗಳಿಗೆ ಬಿ-ಖಾತೆ ಮಾಡಲು ಸರಕಾರ ಅನುಮತಿ ನೀಡಿದೆ. ಈ ಎರಡೂ ಸೇವೆಗಾಗಿ ಸಾವಿರಾರು ಮಂದಿ ನಾಗರಿಕರು ಸಂಬಂಧಿಸಿದ ಸ್ಥಳೀಯ ಸಂಸ್ಥೆಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಮೂಲ ಸೌಲಭ್ಯ, ಸಿಬ್ಬಂದಿ ಕೊರತೆ, ಹಿರಿಯ ಅಧಿಕಾರಿಗಳಿಂದ ಮೇಲ್ವಿಚಾರಣೆ ಮಾಡದಿರುವುದು ಸೇರಿದಂತೆ ನಾನಾ ಕಾರಣಗಳಿಗೆ ಇ-ಖಾತೆ, ಬಿ-ಖಾತೆ ಮಾಡಿಸಿಕೊಳ್ಳಲು ತೊಡಕಾಗುತ್ತಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಶೇ. 80ರಷ್ಟು ಖಾತೆ ಮಾಡುವ ಜವಾಬ್ದಾರಿಯನ್ನು ಆಯಾ ವಲಯ ಕಚೇರಿಗಳಿಗೆ ನೀಡಲಾಗಿದೆ. ಮುಡಾ ವ್ಯಾಪ್ತಿಯಲ್ಲಿದ್ದ ಬಡಾವಣೆಗಳನ್ನು ಪಾಲಿಕೆಗೆ ಹಸ್ತಾಂತರ ಇ-ಖಾತೆ, ಬಿ-ಖಾತೆ ಮಾಡುವ ಜವಾಬ್ದಾರಿಯನ್ನು ಪಾಲಿಕೆ ವಲಯ ಕಚೇರಿ, ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಕಚೇರಿಗಳಿಗೆ ವಹಿಸಲಾಗಿದೆ. ಆದರೆ, ಇಲ್ಲಿಗೆ ಬರುವ ಸಾರ್ವಜನಿಕರಿಗೆ ಹಾಗೂ ಸಿಬ್ಬಂದಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಇಲ್ಲ. ಕುಡಿಯುವ ನೀರು ಇರುವುದಿಲ್ಲ. ಸರ್ವರ್ ಸಮಸ್ಯೆ ತಲೆದೋರುತ್ತಿದೆ. ರೆವಿನ್ಯೂ ಇನ್ಸ್ಪೆಕ್ಟರ್ ಒಬ್ಬರೇ ಇರುತ್ತಾರೆ. ಎರಡರಿಂದ ಮೂರು ಪಂಚಾಯಿತಿಗೆ ಒಬ್ಬ ಎಂಜಿನಿಯರ್ ಇದ್ದಾರೆ. ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲು ಬೇಕಾದ ವ್ಯವಸ್ಥೆಯನ್ನು ಕಲ್ಪಿಸಿಲ್ಲ. ಹತ್ತಾರು ಬಾರಿ ಅಲೆದರೂ ಕೆಲಸವಾಗುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ.

ನಾಗರಿಕರಿಗೆ ಇ-ಖಾತೆ, ಬಿ-ಖಾತೆ ನೀಡುವುದು ಒಂದು ಪ್ರಮುಖ ಸೇವೆಯಾಗಿದೆ. ಇದನ್ನು ಜಾರಿಗೊಳಿಸಲು ಸೂಕ್ತ ವ್ಯವಸ್ಥೆಗಳಿವೆಯೇ? ಅಗತ್ಯ ಸಿಬ್ಬಂದಿ ಇದ್ದಾರೆಯೇ? ಮೂಲ ಸೌಲಭ್ಯ, ಸಕಾಲಕ್ಕೆ ಸೇವೆ ನೀಡಲಾಗುತ್ತಿದೆಯೇ? ಭ್ರಷ್ಟಾಚಾರ, ಮಧ್ಯವರ್ತಿಗಳ ಹಾವಳಿ ಇದೆಯೇ ಎಂಬುದನ್ನು ಹಿರಿಯ ಅಧಿಕಾರಿಗಳು ಪರಿಶೀಲಿಸಿ ಮೇಲ್ವಿಚಾರಣೆ ಮಾಡಬೇಕಿದೆ. ಆದರೆ, ಖಾತೆ ಮಾಡಿಕೊಡುವ ವಲಯ ಕಚೇರಿಗಳು ಅವ್ಯವಸ್ಥೆಯ ಆಗರವಾಗಿದ್ದು, ಇದನ್ನು ಕೇಳುವವರೇ ಇಲ್ಲದಂತಾಗಿದೆ. ಮುಡಾದಿಂದ ಬಡಾವಣೆಗಳನ್ನು ನಿರ್ಮಿಸಿ ಅವುಗಳ ನಿರ್ವಹಣೆ ಜವಾಬ್ದಾರಿಯನ್ನು ಸಂಬಂಧಿಸಿದ ಸ್ಥಳೀಯ ಸಂಸ್ಥೆಗೆ ವಹಿಸಲಾಗಿದೆ. ಈ ಸಂದರ್ಭದಲ್ಲಿ ಸಾರ್ವಜನಿಕರು ತಮ್ಮ ಆಸ್ತಿ ವರ್ಗಾವಣೆಗಾಗಿ ಅರ್ಜಿಸಲ್ಲಿಸುತ್ತಾರೆ. ಆಗ ಆಸ್ತಿಗೆ ಸಂಬಂಧಿಸಿದ ಸಿಡಿ ವರದಿ, ಲೇಔಟ್ ಪ್ಲಾನ್ ಸೇರಿದಂತೆ ಕೆಲ ದಾಖಲೆಗಳನ್ನು ಅರ್ಜಿದಾರರ ಬಳಿ ಕೇಳಲಾಗುತ್ತಿದೆ. ಈ ದಾಖಲೆಗಳನ್ನು ಬಡಾವಣೆ ಹಸ್ತಾಂತರ ವೇಳೆ ಮುಡಾದಿಂದ ಸಂಬಂಧಿಸಿದ ಸ್ಥಳೀಯ ಸಂಸ್ಥೆಗಳಿಗೆ ನೀಡಲಾಗಿರುತ್ತದೆ. ಅವುಗಳನ್ನೇ ಬಳಕೆ ಮಾಡಿಕೊಳ್ಳುವ ಬದಲಿಗೆ ದಾಖಲೆ ನೀಡುವಂತೆ ಆಸ್ತಿದಾರರ ಮೇಲೆ ಒತ್ತಡ ಹೇರಲಾಗುತ್ತಿದೆ.