
ರಾಯಚೂರು: ಹಟ್ಟಿ ಪೊಲೀಸ್ ಠಾಣೆ ಆವರಣದಲ್ಲಿ ನೆಟ್ಟಿರುವ ತೆಂಗಿನ ಸಸಿಗಳು ಒಣಗುತ್ತಿವೆ. 5 ಸಾವಿರ ವೆಚ್ಚದಲ್ಲಿ 35ಕ್ಕೂ ಅಧಿಕ ಸಸಿಗಳನ್ನು ಠಾಣೆಯ ಕಾಂಪೌಡ್ ಸುತ್ತ ನೆಡಲಾಗಿದೆ. ಅಧಿಕಾರಿಗಳಿಗೆ ಸಸಿ ನೆಡುವಾಗ ಇದ್ದ ಪರಿಸರ ಪ್ರೇಮ ಈಗ ಇಲ್ಲವಾಗಿದೆ ಎನ್ನುವುದು ಪರಿಸರ ಪ್ರೇಮಿಗಳ ಅಸಮಾಧಾನ.

ತೆಂಗಿನ ಸಸಿಗಳಿಗೆ ಯಾವುದೇ ಬೇಲಿ ಇಲ್ಲದ್ದರಿಂದ ಕುರಿ, ಮೇಕೆ, ಆಕಳುಗಳು ಎಲೆಗಳನ್ನು ತಿನ್ನುತ್ತಿವೆ. ಸಿಬ್ಬಂದಿ ಕಣ್ಣಿದ್ದು ಕುರುಡರಂತೆ ಇದ್ದಾರೆ ಎನ್ನುತ್ತಾರೆ ಇಲ್ಲಿನ ಜನ. ಸಸಿ ರಕ್ಷಣೆ ನಿರ್ವಹಣೆಗೆ ನೀರು ಹಾಗೂ ತಂತಿಯ ಜಾಲರಿ ಒದಗಿಸಿಕೊಡಿ ಎಂದು ಗಣಿ ಕಂಪನಿ ಅಧಿಕಾರಿಗಳಿಗೆ ಪತ್ರ ಬರೆದರೂ ಇದುವರೆಗೂ ಯಾವುದೇ ಉತ್ತರ ನೀಡಿಲ್ಲ ಎಂದು ಇಲ್ಲಿನ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಠಾಣೆಯ ಕಾಂಪೌಡ್ನಲ್ಲಿ ಈ ಹಿಂದೆ ಗಣಿ ಕಂಪನಿ ವತಿಯಿಂದ ನೀರಿನ ನಳದ ವ್ಯವಸ್ಥೆ ಮಾಡಲಾಗಿದ್ದು ನೀರೂ ಸತತವಾಗಿ ಬರುತ್ತದೆ. ಇಲ್ಲಿಂದಲೇ ಜನ ಕುಡಿಯಲು ನೀರು ತೆಗೆದುಕೊಂಡು ಹೋಗುತ್ತಾರೆ. ಆದರೂ ಅಧಿಕಾರಿಗಳು ಕಾಲಹರಣ ಮಾಡುತ್ತಾ ತೆಂಗಿನ ಸಸಿ ಒಣಗಳು ಕಾರಣರಾಗಿದ್ದಾರೆ. ಪೊಲೀಸ್ ಠಾಣೆಯ ಅಂದ ಹೆಚ್ಚಿಸಲು ಹಣ ಖರ್ಚು ಮಾಡಿ ಸಸಿಗಳನ್ನು ನೆಟ್ಟರೂ ಸರಿಯಾದ ನಿರ್ವಹಣೆ ಇಲ್ಲದೆ ಸಸಿಗಳು ಒಣಗುತ್ತಿವೆ. ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎನ್ನುವುದು ಜನರ ದೂರು.