
ಶಿವಮೊಗ್ಗ ಹಾಲು ಒಕ್ಕೂಟವು (ಶಿಮುಲ್) ತನ್ನ ಹಾಲು ಉತ್ಪಾದಕ ರೈತರು, ಸಂಘಗಳು ಮತ್ತು ಏಜೆನ್ಸಿಗಳಿಗೆ ರಾಜ್ಯದ 16 ಹಾಲು ಒಕ್ಕೂಟಗಳಲ್ಲೇ ಅತಿ ಹೆಚ್ಚು ಧಾರಣೆಯನ್ನು ನೀಡುತ್ತಿದೆ. ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಶಿಮುಲ್ ಹಾಲು ಉತ್ಪಾದಕ ರೈತರಿಗೆ ಪ್ರತಿ ಲೀಟರ್ಗೆ 34.97 ರೂಪಾಯಿ ಧಾರಣೆ ಕೊಡುತ್ತಿದೆ. ಈ ಮೂಲಕ ರಾಜ್ಯದಲ್ಲೇ ಹೆಚ್ಚಿನ ದರ ನೀಡುತ್ತಿದೆ.
ಹಾಲು ಉತ್ಪಾದಿಸುವ ರೈತರಿಗೆ ಉತ್ಪಾದನಾ ವೆಚ್ಚವೂ ಬರುತ್ತಿಲ್ಲ ಎಂಬ ಬೇಸರದ ನಡುವೆ ಶಿವಮೊಗ್ಗ ಹಾಲು ಒಕ್ಕೂಟವು (ಶಿಮುಲ್) ತನ್ನ ಹಾಲು ಉತ್ಪಾದಕ ರೈತರು, ಸಂಘಗಳು ಮತ್ತು ಏಜೆನ್ಸಿಗಳಿಗೆ ರಾಜ್ಯದ 16 ಹಾಲು ಒಕ್ಕೂಟಗಳಲ್ಲೇ ಅತಿ ಹೆಚ್ಚು ಧಾರಣೆಯನ್ನು ಕೊಡುತ್ತಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಶಿಮುಲ್ನಲ್ಲಿ ಹಾಲು ಉತ್ಪಾದಕ ರೈತರಿಗೆ ಪ್ರತಿ ಲೀಟರ್ಗೆ 34.97 ರೂ. ಧಾರಣೆ ನೀಡಲಾಗುತ್ತಿದೆ. 2ನೇ ಸ್ಥಾನದಲ್ಲಿರುವ ದಕ್ಷಿಣ ಕನ್ನಡ ಹಾಲು ಒಕ್ಕೂಟವು ಪ್ರತಿ ಲೀಟರ್ಗೆ 32.87 ರೂ. ನೀಡುತ್ತಿದೆ. ಅಂದರೆ ದಕ್ಷಿಣ ಕನ್ನಡ ಹಾಲು ಒಕ್ಕೂಟದ ರೈತರು ಪಡೆಯುತ್ತಿರುವ ಧಾರಣೆಗಿಂತಲೂ 2.10 ರೂ, ಮತ್ತೊಂದು ಕಡೆ ಕಲಬುರಗಿ ಹಾಲು ಒಕ್ಕೂಟದ (ಲೀಟರ್ಗೆ 28.76 ರೂ.) ರೈತರಿಗಿಂತಲೂ 6.10 ರೂ. ಹೆಚ್ಚುವರಿ ಧಾರಣೆಯನ್ನು ಶಿಮುಲ್ ರೈತರು ಪಡೆದುಕೊಳ್ಳುತ್ತಿದ್ದಾರೆ.
ಹಾಲಿನ ಗುಣಮಟ್ಟ ಕಾಪಾಡಿಕೊಳ್ಳುವುದರಲ್ಲಿ ಮೊದಲ ಸ್ಥಾನದಲ್ಲಿರುವ ಶಿಮುಲ್, ರೈತರಿಂದ ಹಾಲು ಸಂಗ್ರಹಿಸಿ ಒಕ್ಕೂಟಕ್ಕೆ ರವಾನಿಸುವ ಕೆಲಸ ಮಾಡುತ್ತಿರುವ ಸಂಘಗಳಿಗೂ ಹಾಸನ ಒಕ್ಕೂಟದ ಬಳಿಕ ಅಧಿಕ ಶೇಖರಣ ದರ ನೀಡುತ್ತಿದೆ. ಹಾಸನ ಒಕ್ಕೂಟವು ಪ್ರತಿ ಲೀಟರ್ಗೆ 1.89 ರೂ. ಶೇಖರಣ ದರ ನೀಡಿದರೆ, ಶಿಮುಲ್ 1.86 ರೂ. ನೀಡುತ್ತಿದೆ. ಇದೇ ಕಾರಣದಿಂದ ಶಿಮುಲ್ ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರ ಸಂಘಗಳು ಆರ್ಥಿಕವಾಗಿ ಸದೃಢವಾಗಿರುವುದಲ್ಲದೆ, ಹಾಲಿನ ಉತ್ಪಾದನೆ ಪ್ರೋತ್ಸಾಹಿಸಲು ಪ್ರತ್ಯೇಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳುತ್ತಿವೆ.
ಶಿವಮೊಗ್ಗ ಹಾಲು ಒಕ್ಕೂಟವು ಕೇವಲ ಹಾಲು ಉತ್ಪಾದಿಸುವ ರೈತರಿಗೆ ಅಲ್ಲದೆ ಹಾಲನ್ನು ಗ್ರಾಹಕರಿಗೆ ತಲುಪಿಸುವ ಏಜೆನ್ಸಿಗಳಿಗೂ ರಾಜ್ಯದ ಬೇರಾವುದೆ ಒಕ್ಕೂಟ ನೀಡದಷ್ಟು ಕಮಿಷನ್ ನೀಡುತ್ತಿದೆ. ರಾಜ್ಯದೆಲ್ಲೆಡೆ ಅತ್ಯಧಿಕ ಮಾರಾಟವಾಗುವ ಟೋನ್ಡ್ ಹಾಲಿಗೆ ಎಲ್ಲ ಒಕ್ಕೂಟಗಳು 1.95 ರೂ. ಕಮಿಷನ್ ನೀಡಿದರೆ (ಬೆಳಗಾವಿ ಮಾತ್ರ 2 ರೂ.) ಶಿಮುಲ್ 1 ರೂ. ಹೆಚ್ಚುವರಿ ಸೇರಿಸಿ 2.95 ರೂ. ಕಮಿಷನ್ ನೀಡುತ್ತಿದೆ. ಖಾಸಗಿ ಹಾಲು ಕಂಪನಿಗಳ ಅಬ್ಬರವನ್ನು ತಡೆಯುವ ಸಲುವಾಗಿಯೆ ಏಜೆನ್ಸಿಗಳಿಗೆ ಅಧಿಕ ಕಮಿಷನ್ ನೀಡಲಾಗುತ್ತಿದೆ.
ಶಿವಮೊಗ್ಗ ಹಾಲು ಒಕ್ಕೂಟವು ಪ್ರತಿದಿನ 6.30 ಲಕ್ಷ ಲೀಟರ್ ಹಾಲು ಸಂಗ್ರಹಿಸುತ್ತಿದ್ದು ಇದರಲ್ಲಿ 3.30 ಲಕ್ಷ ಲೀಟರ್ ಹಾಲು, ಮೊಸರು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಧಾರವಾಡ, ಕಲಬುರಗಿ, ವಿಜಯಪುರ, ದಕ್ಷಿಣ ಕನ್ನಡ ಹಾಲು ಒಕ್ಕೂಟಗಳು ಮತ್ತು ಮದರ್ ಡೈರಿಗೆ ನಿತ್ಯ 1.30 ಲಕ್ಷ ಲೀಟರ್ ಹಾಲು ರವಾನಿಸುತ್ತಿದೆ. ಉಳಿದ 1.70 ಲಕ್ಷ ಲೀಟರ್ ಹಾಲನ್ನು ಪೌಡರ್ ಪರಿವರ್ತನೆಗೆ ಬಳಸುತ್ತಿದೆ.

ಬೇರೆಲ್ಲಾ ಒಕ್ಕೂಟಗಳಿಗಿಂತಲೂ ಅಧಿಕ ಧಾರಣೆ, ಕಮಿಷನ್ ಮತ್ತು ಶೇಖರಣ ದರ ನೀಡಿದ ಬಳಿಕವೂ ಶಿಮುಲ್ ನಿರಂತರವಾಗಿ ಲಾಭದಲ್ಲೇ ಮುನ್ನಡೆಯುತ್ತಿದೆ. ಆದರೆ, ಕಳೆದ ವರ್ಷ ನಿರಂತರ ಮಳೆ, ಜಾನುವಾರುಗಳಿಗೆ ತಗುಲಿದ ಚರ್ಮಗಂಟು ಕಾಯಿಲೆ ಬಳಿಕ ಹಾಲಿನ ಉತ್ಪಾದನೆ ತೀವ್ರ ಕುಸಿತವಾಗಿತ್ತು. ಇದೇ ಸಮಯದಲ್ಲಿ ಲಾಭದಲ್ಲಿ ಮುನ್ನಡೆಯುತ್ತಿದ್ದ ಒಕ್ಕೂಟವು ತನ್ನ ಪೂರ್ಣ ಪ್ರಮಾಣದ ಲಾಭಾಂಶವನ್ನು ರೈತರಿಗೆ ಮರಳಿಸುವ ಸಲುವಾಗಿ ಜನವರಿಯಲ್ಲಿ ಲೀಟರ್ಗೆ 2 ರೂ. ಹೆಚ್ಚಳ ಮಾಡಿತ್ತು. ಆದರೆ, ಇದರ ಹೊರೆಯನ್ನು ಗ್ರಾಹಕರ ಮೇಲೆ ಹಾಕದೆ ತಾನೇ ಹೊತ್ತುಕೊಂಡಿತ್ತು.
ಇದರಿಂದಾಗಿ 2023ನೇ ಜುಲೈ ಅಂತ್ಯಕ್ಕೆ ಅಂದಾಜು 12 ಕೋಟಿ ರೂ. ಕ್ರೋಢೀಕೃತ ತಾತ್ಕಾಲಿಕ ನಷ್ಟ ಅನುಭವಿಸಿದೆ. ಶಿಮುಲ್ ಹಿಂದಿನಿಂದಲೂ ಗುಣಮಟ್ಟವನ್ನು ಕಾಯ್ದುಕೊಂಡು ಬಂದಿರುವುದರಿಂದ ಕೇರಳ, ಹೊಸದಿಲ್ಲಿ, ಮಧ್ಯ ಪ್ರದೇಶ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರಿ ಬೇಡಿಕೆ ಇದೆ. ಹೊರ ರಾಜ್ಯಗಳಲ್ಲಿ ಹಾಲಿನ ದರ 8 ರಿಂದ 16 ರೂ.ನಷ್ಟು ಅಧಿಕವಾಗಿದೆ. ಹೊರ ರಾಜ್ಯಗಳಿಗೆ ಹಾಲನ್ನು ಪೂರೈಕೆ ಮಾಡುವ ಮೂಲಕ ತಾತ್ಕಾಲಿಕ ನಷ್ಟವನ್ನು ತುಂಬಿಕೊಳ್ಳಲು ಶಿಮುಲ್ ನಿರ್ಧರಿಸಿದೆ.
ರೈತರು, ಸಂಘಗಳು ಮತ್ತು ಏಜೆನ್ಸಿಗಳಿಗೆ ಅಧಿಕ ದರ ನೀಡುತ್ತಿರುವುದರಿಂದ ಶಿಮುಲ್ ತಾತ್ಕಾಲಿಕ ನಷ್ಟದಲ್ಲಿದೆ. ಶಿಮುಲ್ ಹಾಲಿಗೆ ಹೊರ ರಾಜ್ಯಗಳಲ್ಲಿ ಭಾರಿ ಬೇಡಿಕೆ ಇದೆ. ನಮ್ಮಲ್ಲಿನ ಹೆಚ್ಚುವರಿ ಹಾಲನ್ನು ಕಳುಹಿಸಿದರೆ ಒಕ್ಕೂಟಕ್ಕೆ ದೊಡ್ಡ ಲಾಭವಾಗಲಿದೆ. ಅದಕ್ಕಾಗಿ ಕೆಎಂಎಫ್ನಿಂದ ಅನುಮತಿ ಪಡೆಯುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ ಎನ್.ಎಚ್. ಶ್ರೀಪಾದರಾವ್ ಹೇಳಿದ್ದಾರೆ.