
ಉಡುಪಿ: ಶೃಂಗೇರಿ ಶಾರದಾ ಪೀಠದ 14ನೇ ಪೀಠಾಧಿಪತಿ ಹಾಲಾಡಿ ಒಡೆಯರೆಂದೇ ಖ್ಯಾತರಾಗಿದ್ದ ಜಗದ್ಗುರು ನರಸಿಂಹ ಭಾರತಿ ಸ್ವಾಮೀಜಿ (ಕ್ರಿ.ಶ. 1389-1418) ಅವರು ತೀರ್ಥಮುತ್ತೂರು ಮಠದ ಜ್ಞಾನೇಂದ್ರಭಾರತಿ ಗುರುಗಳಿಗೆ ಭೂದಾನ ನೀಡಿರುವ ಶಿಲಾಶಾಸನ ತಾಲ್ಲೂಕಿನ ಶಂಕರನಾರಾಯಣ ಗ್ರಾಮದ ಹೆರವಳ್ಳಿಯ ಪ್ರಶಾಂತ್ ಹೆಗ್ಡೆ ಅವರ ಮನೆ ಅಂಗಳದಲ್ಲಿ ಪತ್ತೆಯಾಗಿದೆ.

ಕ್ರಿ.ಶ 1399 ಮೇ 1 ಬುಧವಾರದ ಕಾಲಘಟ್ಟಕ್ಕೆ ಸರಿಹೊಂದುವ ಶಾಸನ ಇದಾಗಿದೆ. ಶಾಸನದ ಮೇಲ್ಬಾಗದಲ್ಲಿ ಸೂರ್ಯ-ಚಂದ್ರ ಕೆತ್ತನೆ, ಬಲಭಾಗದಲ್ಲಿ ಭಕ್ತನ ಚಿತ್ರದ ಕೆತ್ತನೆ, ದೀಪದ ಕಂಬ, ಮಧ್ಯಭಾಗದಲ್ಲಿ ಶಿವಲಿಂಗ, ಎಡಭಾಗದಲ್ಲಿ ಕರುವಿಗೆ ಹಾಲುಣಿಸುವ ಗೋವಿನ ಚಿತ್ರದ ಕೆತ್ತನೆ ಇದೆ. ಕನ್ನಡ ಭಾಷೆ, ಲಿಪಿಯಲ್ಲಿ ಶಾಸನವಿದ್ದು, 5 ಅಡಿಗಿಂತ ಹೆಚ್ಚು ಎತ್ತರವಿದೆ. ವಿಜಯನಗರದ ಅರಸ ಇಮ್ಮಡಿ ಹರಿಹರರಾಯನ ಕಾಲಘಟ್ಟದ ಶಾಸನವಾಗಿದ್ದು, ‘ಹಾರದವಳ್ಳಿ’ ಎಂದು ಉಲ್ಲೇಖಿಸಲಾಗಿದ್ದು, ಪ್ರಸ್ತುತ ಈ ಊರನ್ನು ಹೆರವಳ್ಳಿ ಎಂದು ಕರೆಯಲಾಗುತ್ತಿದೆ. ಶಾಸನದಲ್ಲಿ 35 ಸಾಲುಗಳು ಮೇಲ್ಬಾಗದಲ್ಲಿ ಕಂಡು ಬಂದಿವೆ. ಬೊಮ್ಮಣ್ಣ, ಸಿಂಗಸೆಟ್ಟಿ, ಗೋವಿಂದ ಭಟ್ಟ, ಕೃಷ್ಣ ಸೇನಾಭೋವ, ಶಂಕರನಾರಾಯಣ ಎಂಬ ಸ್ಥಳದ ಹೆಸರುಗಳ ಉಲ್ಲೇಖವಿದೆ ಎಂದು ಶಾಸನತಜ್ಞ ಬೆಂಗಳೂರಿನ ಎಸ್. ಕಾರ್ತಿಕ್ ತಿಳಿಸಿದ್ದಾರೆ.