
ದಾವಣಗೆರೆ : ಮಧ್ಯ ಆಫ್ರಿಕಾದ ಗಬಾನ್ದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ನಗರದ ಹಕ್ಕಿಪಿಕ್ಕಿಯ (Hakkipikki) ಒಟ್ಟು 22 ಜನರು ಸುರಕ್ಷಿತವಾಗಿ ಸ್ವಗ್ರಾಮಕ್ಕೆ ವಾಪಸ್ಸ್ ಆಗಿದ್ದಾರೆ. ಜಿಲ್ಲೆಯ ಚನ್ನಗಿರಿ ತಾಲೂಕಿನ ಗೋಪನಾಳ್ ಗ್ರಾಮದ ಹತ್ತು ನಿವಾಸಿಗಳು ಸೇರಿ ಶಿವಮೊಗ್ಗದ 12 ಜನರು ಗಬಾನ್ ರಾಜಧಾನಿ ಲಿಬ್ರೆವಿಲ್ಲೆನಲ್ಲಿ ಗಿಡಮೂಲಿಕೆ ಔಷಧಿ ಮಾರಾಟ ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕಿದ್ದರು. ಹೊಸ ಸರ್ಕಾರ ಬಂದ ಹಿನ್ನೆಲೆ ವಲಸಿಗರನ್ನ ಹೊರಹಾಕಲು ಆದೇಶಿಸಲಾಗಿತ್ತು. ಹೀಗಾಗಿ ಹಕ್ಕಿಪಿಕ್ಕಿಗಳು ಸ್ವದೇಶಕ್ಕೆ ವಾಪಸ್ಸಾಗಿದ್ದಾರೆ. ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಗೋಪನಾಳ್ ಹಾಗೂ ಅಸ್ತಾಪನಹಳ್ಳಿ ಗ್ರಾಮದ 22 ಜನರು ಇತ್ತೀಚೆಗೆ ಮಂಬೈಗೆ ಆಗಮಿಸಿದ್ದರು. ಇಂದು ತಮ್ಮ ಸ್ವಗ್ರಾಮಕ್ಕೆ ಬಂದು ತಲುಪಿದ್ದಾರೆ. ಆಫ್ರೀಕಾದ ಗಬಾನ್ ರಾಷ್ಟ್ರದ ರಾಜಧಾನಿಯಲ್ಲಿ ರಾಜಕೀಯ ಹೊಸ ನೀತಿಯಿಂದ ವಿದೇಶಿಗರನ್ನು ದೇಶ ಬಿಟ್ಟು ಹೋಗುವಂತೆ ತಾಕೀತು ಮಾಡಿತ್ತು ಹಾಗಾಗಿ ಹಕ್ಕಿಪಿಕ್ಕಿಗಳು ಸಂಕಷ್ಟಕ್ಕೆ ಸಿಲುಕಿದ್ದರು. ಪಾಸ್ ಪೋರ್ಟ್ ಕಸಿದುಕೊಂಡು ಅಲ್ಲಿನ ಪೊಲೀಸರು ತೊಂದರೆ ಮಾಡಿದ್ದರು. ಬಳಿಕ ಭಾರತೀಯ ರಾಯಭಾರಿ ಕಚೇರಿಗೆ ಮಾಹಿತಿ ನೀಡಲಾಗಿತ್ತು. ಆ ಮೂಲಕ ಇದೀಗ ಹಕ್ಕಿಪಿಕ್ಕಿಗಳು ಸುರಕ್ಷಿತವಾಗಿ ತಮ್ಮ ತಮ್ಮ ಊರಿಗೆ ಮರಳಿದ್ದಾರೆ.

ದಾವಣಗೆರೆಯ ಜಿಲ್ಲಾ ಬುಡಕಟ್ಟು ಅಧಿಕಾರಿ ನವೀನ್ ಮಠದ ಅವರ ಪ್ರಕಾರ, ಹಕ್ಕಿಪಿಕ್ಕಿ ಸಮುದಾಯವು ಗಿಡಮೂಲಿಕೆ ಔಷಧಿ ಮಾರಾಟ ಮಾಡಲು ವಿದೇಶಗಳಿಗೆ ಪ್ರಯಾಣಿಸುವುದು ಅವರ ದೀರ್ಘಕಾಲದ ಸಂಪ್ರದಾಯವಾಗಿದೆ. ಹಾಗಾಗಿ ಅವರು ಸುಮಾರು ಎರಡ್ಮೂರು ತಿಂಗಳ ಹಿಂದೆ ಮಧ್ಯ ಆಫ್ರಿಕಾದ ದೇಶವಾದ ಗಬಾನ್ಗೆ ಹೋಗಿದ್ದರು ಎಂದು ಹೇಳಿದ್ದಾರೆ. ಜೀವನೋಪಾಯಕ್ಕಾಗಿ ವಿದೇಶಗಳಿಗೆ ಪ್ರಯಾಣಿಸುವ ಬುಡಕಟ್ಟು ಸಮುದಾಯಗಳ ದುರ್ಬಲತೆಯ ಬಗ್ಗೆ ಈ ಘಟನೆ ಕಳವಳ ಉಂಟುಮಾಡಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಉತ್ತಮ ಜಾಗೃತಿ ಮತ್ತು ಸೂಕ್ತ ವ್ಯವಸ್ಥೆಗಳನ್ನು ಒದಗಿಸುವಂತೆ ಹಕ್ಕಪಿಕ್ಕಿ ಸಮುದಾಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ನಾವು ಈಗಾಗಲೇ ನಮ್ಮ ಉನ್ನತ ಅಧಿಕಾರಿಗಳಿಗೆ ತಿಳಿಸಿದ್ದೇವೆ. ನಾವು ಅವರಿಗೆ ಹೇಗೆ ಸಹಾಯ ಮಾಡಬಹುದೆಂದು ತಿರ್ಮಾನಿಸುತ್ತೇವೆ ಎಂದು ನವೀನ್ ಮಠದ ಹೇಳಿದ್ದಾರೆ.