
ಚಾಮರಾಜನಗರ: ಹುಲಿ ದಾಳಿಯಿಂದ ಹಸು ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆಯ ಬಂಡೀಪುರ ಅಭಯಾರಣ್ಯದ ಬಫರ್ ಜೋನ್ ವ್ಯಾಪ್ತಿಯ ಪಡಗೂರು ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಪಡಗೂರು ಗ್ರಾಮದ ತರಕಾರಿ ಮಹೇಶ್ ಅವರ ಹಸು ಮೃತಪಟ್ಟಿರುವುದು. ಜಮೀನಿನಲ್ಲಿ ಮೇಯಿಸುತ್ತಿದ್ದಾಗ ಹುಲಿ ದಾಳಿ ನಡೆಸಿ ಹಸುವಿನ ಕುತ್ತಿಗೆ ಭಾಗದಲ್ಲಿ ಕಚ್ಚಿ ಕೊಂದು ಹಾಕಿದೆ. ಮೂರು ವರ್ಷದ ಸುಮಾರು 55 ರಿಂದ 60 ಸಾವಿರ ಬೆಲೆ ಬಾಳುವ ಹಸು ಇದಾಗಿತ್ತು ಎಂದು ಮಾಲೀಕರು ತಿಳಿಸಿದ್ದಾರೆ.
ಸೂಕ್ತ ಪರಿಹಾರ ನೀಡಿ: ಹುಲಿ ದಾಳಿಗೆ ಮೃತಪಟ್ಟ ಹಸು ಮಾಲೀಕರಿಗೆ ಅಧಿಕ ನಷ್ಟವಾಗಿದ್ದು, ಕಂಗಾಲಾಗಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಕೂಡಲೇ ಸೂಕ್ತ ಪರಿಹಾರ ಕೊಡಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.