
ಬೀದರ್: ಔರಾದ್ ತಾಲ್ಲೂಕಿನ ಕೌಠಾದಿಂದ ವಡಗಾಂವ್ ವರೆಗಿನ ರಸ್ತೆ ತೀರಾ ಕೆಟ್ಟು ನಿಂತು ಪ್ರಯಾಣಿಕರು ಪರದಾಡುತ್ತಿದ್ದಾರೆ. ಹತ್ತಾರು ಗ್ರಾಮ ಹಾಗೂ ತಾಂಡಾಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಕಳೆದ ಆರು ತಿಂಗಳಿನಿಂದ ದೊಡ್ಡ ದೊಡ್ಡ ತಗ್ಗುಗಳು ಬಿದ್ದು, ಪ್ರಯಾಣಿಕರು ಹೊಂಡಗಳ ನಡುವೆ ರಸ್ತೆ ಹುಡುಕಬೇಕಾದ ಪರಿಸ್ಥಿತಿ ಇದೆ.

ಕೌಠಾ ಹಾಗೂ ವಡಗಾಂವ್ ನಡುವೆ ಅರಣ್ಯ ಪ್ರದೇಶವಿದೆ. ಈ ನಡುವೆ ಕೆಟ್ಟ ರಸ್ತೆಯಿಂದಾಗಿ ವಾಹನ ಓಡಿಸಲು ಆಗದೆ ಪ್ರಾಣಿಗಳ ಭೀತಿ ಎದುರಾಗಿದೆ. ವಿದ್ಯಾರ್ಥಿಗಳಿಗೆ ಶಾಲೆ ಕಾಲೇಜಿಗೆ ಸಮಯಕ್ಕೆ ಸರಿಯಾಗಿ ಹೋಗಲು ಆಗುತ್ತಿಲ್ಲ. ಆದರೂ ಸಂಬಂಧಿತರು ಕನಿಷ್ಠ ಗುಂಡಿ ಮುಚ್ಚುವ ಕೆಲಸ ಮಾಡುತ್ತಿಲ್ಲ’ ಎಂದು ಸಾಮಾಜಿಕ ಕಾರ್ಯಕರ್ತ ಸಂಜುಕುಮಾರ ಬೇಲೂರ ಆಕ್ರೋಶ ಹೊರಹಾಕಿದ್ದಾರೆ. ರಸ್ತೆ ಮೇಲೆ ಸಂಚರಿಸುವಾಗ ಅನೇಕ ಬೈಕ್ ಸವಾರರು ಕೈಕಾಲು ಮುರಿದುಕೊಂಡಿದ್ದಾರೆ. ರಸ್ತೆ ಸುಧಾರಣೆ ಮಾಡುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಅನೇಕ ಸಲ ಹೇಳಿದರೂ ಪ್ರಯೋಜನವಾಗಿಲ್ಲ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯ ಚೆನ್ನಬಸಪ್ಪ ಬಿರಾದಾರ ಕಿಡಿ ಕಾರಿದ್ದಾರೆ. ಆದಷ್ಟು ಬೇಗ ರಸ್ತೆ ಅಭಿವೃದ್ಧಿ ಪಡಿಸದಿದ್ದರೆ ನಾವೇ ಜನರೊಂದಿಗೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.