
ಚನ್ನಪಟ್ಟಣ: ತಾಲ್ಲೂಕಿನ ತಿಟ್ಟಮಾರನಹಳ್ಳಿ ಬಳಿ ಬೆಂಗಳೂರು-ಮೈಸೂರು ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಗುರುವಾರ ಸರಕು ಸಾಗಣೆ ಟೆಂಪೊ ಮತ್ತು ಕಾರಿನ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಕಾರಿನಲ್ಲಿದ್ದ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಟೆಂಪೊ ಚಾಲಕ ಹಾಗೂ ಕಾರಿನಲ್ಲಿದ್ದವರು ಸೇರಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ತಾಲ್ಲೂಕಿನ ಮಂಗಾಡಹಳ್ಳಿಯ ಶಿವಪ್ರಕಾಶ್ (37), ಪುಟ್ಟಗೌರಮ್ಮ (72) ಹಾಗೂ ಶಿವರತ್ನ (50) ಮೃತರು. ಗಂಭೀರವಾಗಿ ಗಾಯಗೊಂಡಿರುವ ಕಾರಿನಲ್ಲಿದ ನಟರಾಜು ಮತ್ತು ಸುಮಾ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಟೆಂಪೊ ಚಾಲಕ ನಾಗೇಶ್ ಅವರ ಕಾಲು ಮುರಿದಿದ್ದು, ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಡ್ಯದಲ್ಲಿ ಸಂಬಂಧಿಕರೊಬ್ಬರ ಕಾರ್ಯಕ್ರಮಕ್ಕಾಗಿ ಶಿವಪ್ರಕಾಶ್ ಕಾರಿನಲ್ಲಿ ಕುಟುಂಬದೊಂದಿಗೆ ತೆರಳುತ್ತಿದ್ದರು. ತಿಟ್ಟಮಾರನಹಳ್ಳಿ ಸರ್ವೀಸ್ ರಸ್ತೆಯಲ್ಲಿ ಬೆಳಗ್ಗೆ 10ರ ಸುಮಾರಿಗೆ ಹೋಗುವಾಗ ಎದುರುಗಡೆಯಿಂದ ವೇಗವಾಗಿ ಬಂದ ಹೆಂಚುಗಳುನ್ನು ತುಂಬಿದ್ದ ಟೆಂಪೊ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ಹೇಳಿದರು.
ಡಿಕ್ಕಿಯ ತೀವ್ರತೆಗೆ ಶಿವಪ್ರಕಾಶ್, ಪಟ್ಟಗೌರಮ್ಮ ಹಾಗೂ ಶಿವರತ್ನ ಸ್ಥಳದಲ್ಲೇ ಮೃತಪಟ್ಟರು. ಉಳಿದಿಬ್ಬರು ಗಂಭೀರವಾಗಿ ಗಾಯಗೊಂಡರೆ, ಟೆಂಪೊ ಚಾಲಕ ನಾಗೇಶ್ ಕಾಲು ಮುರಿಯಿತು. ವಿಷಯ ತಿಳಿದು ಸ್ಥಳಕ್ಕೆ ತೆರಳಿ, ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಪೊಲೀಸರು ತಿಳಿಸಿದರು.
ಘಟನೆಯಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಟೆಂಪೊ ಮುಂಭಾಗ ಹಾನಿಯಾಗಿದೆ. ಮೂವರ ಶವಗಳನ್ನು ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ, ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ಹಸ್ತಾಂತರಿಸಲಾಯಿತು ಎಂದು ಪೊಲೀಸರು ಹೇಳಿದರು.