
ಕೋಲಾರ: ವಿಶೇಷ ಘಟಕ ಯೋಜನೆಯಡಿ ನಗರದಲ್ಲಿ ಕಳೆದ ತಿಂಗಳು ಎರಡು ದಿನ ನಡೆದಿದ್ದ ರಾಜ್ಯಮಟ್ಟದ ಜನಪರ ಉತ್ಸವದಲ್ಲಿ ವಿವಿಧ ಪ್ರದರ್ಶನ ನೀಡಿದ ಕಲಾವಿದರಿಗೆ ಸರಿಯಾಗಿ ಸಂಭಾವನೆಯೇ ತಲುಪಿರಲಿಲ್ಲ.

ತಿಂಗಳಾದರೂ ಹಣ ತಲುಪಿಲ್ಲವೆಂದು ಸ್ಥಳೀಯರು ಸೇರಿದಂತೆ ವಿವಿಧ ಜಿಲ್ಲೆಗಳ ಕೆಲ ಕಲಾವಿದರು ಅಳಲು ತೋಡಿಕೊಂಡಿದ್ದರು. ಆದರೆ, ಬಹುತೇಕ ಕಲಾವಿದರು ಬ್ಯಾಂಕ್ ಅಕೌಂಟ್ ಸೇರಿದಂತೆ ಅಪೂರ್ಣ ಮಾಹಿತಿ ನೀಡಿರುವುದೇ ವಿಳಂಬಕ್ಕೆ ಕಾರಣ ಎಂದು ತಿಳಿದು ಬಂದಿದೆ. ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಕಲಾವಿದರ ಮಾಹಿತಿ ಸಂಗ್ರಹಕ್ಕೆ ಪರದಾಡುತಿದ್ದಾರೆ.
ಜನಪರ ಉತ್ಸವಕ್ಕೆ ರಾಜ್ಯ ಸರ್ಕಾರದಿಂದ ₹93 ಲಕ್ಷ ಬಿಡುಗಡೆ ಆಗಿದ್ದು, ಈಗಾಗಲೇ ಜಿಲ್ಲಾಧಿಕಾರಿ ಖಾತೆಗೆ ತಲುಪಿದೆ. ಇದರಲ್ಲಿ ಸುಮಾರು ₹55 ಲಕ್ಷ ಮೊತ್ತವನ್ನು ಕಲಾವಿದರಿಗೆ ಸಂಭಾವನೆ ನೀಡಲು ಮೀಸಲಿರಿಸಲಾಗಿದೆ. ಇನ್ನುಳಿದ ಹಣ ಊಟ, ವಾಸ್ತವ್ಯ, ವೇದಿಕೆ, ಸಂಚಾರ, ನಿರ್ವಹಣೆ ಹಾಗೂ ಇತರ ಖರ್ಚುಗಳಿಗೆ ಹೋಗಿದೆ.
ಉತ್ಸವದಲ್ಲಿ ಪಾಲ್ಗೊಂಡಿದ್ದ ಕಲಾವಿದರಿಗೆ ಒಂದು ಅರ್ಜಿ ನೀಡಿ ಭರ್ತಿ ಮಾಡಲು ಹೇಳಲಾಗಿತ್ತು. ಆದರೆ, ಹೆಚ್ಚಿನವರು ಅರ್ಧಂಬರ್ಧ ಮಾಹಿತಿ ನೀಡಿದ್ದಾರೆ. ಬ್ಯಾಂಕ್ ಅಕೌಂಟ್ ಸಂಖ್ಯೆ ನೀಡಿದ್ದರೂ ಐಎಫ್ಎಸ್ಸಿ ಕೋಡ್ ನೀಡಿಲ್ಲ. ಮೊಬೈಲ್ ಸಂಖ್ಯೆಯನ್ನೇ ಕೆಲವರು ತಪ್ಪಾಗಿ ನಮೂದಿಸಿದ್ದಾರೆ. ಹೀಗಾಗಿ, ಬಿಲ್ ಮಾಡಲು ಸಾಧ್ಯವಾಗಿಲ್ಲ. ಇದಲ್ಲದೇ, ಪ್ರತಿ ಕಲಾವಿದರಿಗೆ ಐ.ಡಿ ಸೃಷ್ಟಿಸಬೇಕಿದೆ. ಸಂಬಂಧಿಸಿದ ಜಿಲ್ಲೆಗಳಲ್ಲಿನ ಇಲಾಖೆಯ ಸಹಾಯಕ ನಿರ್ದೇಶಕರ ಜೊತೆಗೂ ಸಂಪರ್ಕದಲ್ಲಿದ್ದೇವೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ಕಾರ್ಯದರ್ಶಿ ವಿಜಯಲಕ್ಷ್ಮಿ ಪ್ರತಿಕ್ರಿಯಿಸಿದರು.