
ಮಂಗಳೂರು : ವಂದೇ ಭಾರತ್ ರೈಲು ರದ್ದು ಮಾಡಕೂಡದು ಎಂಬ ಉಡುಪಿ ಸಂಸದ ಶ್ರೀನಿವಾಸ ಮನವಿಗೆ ಕೇಂದ್ರ ರೈಲ್ವೆ ಸಚಿವರು ಸ್ಪಂದಿಸಿದ್ದಾರೆ. ಮಂಗಳೂರು-ಮಡಗಾಂವ್ ವಂದೇ ಭಾರತ್ ರೈಲು ರದ್ದುಗೊಳಿಸುವ ಇರಾದೆ ಅರಿತು ಸಂಸದರು ಸಲ್ಲಿಸಿದ ಮನವಿಯನ್ನು ಪರಿಗಣಿಸಿದ ರೈಲ್ವೆ ಸಚಿವರು ವಂದೇ ಭಾರತ್ ರೈಲನ್ನು ಸದ್ಯಕ್ಕೆ ರದ್ದು ಮಾಡದಂತೆ ಮತ್ತು ಮಂಗಳೂರು-ಮಡಗಾಂವ್ ವಂದೇ ಭಾರತ್ ರೈಲನ್ನು ಮುಂಬಯಿಗೆ ವಿಸ್ತರಿಸುವಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ವಂದೇ ಭಾರತ್ ಸ್ಲೀಪರ್ ರೈಲು ಮಂಗಳೂರು-ಮುಂಬಯಿ ನಡುವೆ ಆದ್ಯತೆ ಮೇರೆಗೆ ಓಡಿಸಬೇಕು, ಮಡಗಾಂವ್ -ಮಂಗಳೂರು ವಂದೇ ಬಾರತ್ ರದ್ದು ಮಾಡಬಾರದು. ಹಾಗೂ ಅದನ್ನು ಮುಂಬಯಿಗೆ ವಿಸ್ತರಿಸಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು-ಉಡುಪಿ ಭಾಗದ ಆರ್ಥಿಕ ಸಾಮಾಜಿಕ ಹಾಗೂ ಸಾರಿಗೆ ಸಂಪರ್ಕಗಳ ವರದಿ ಸಚಿವರಿಗೆ ಮಾ.12 ರಂದು ಸಲ್ಲಿಸಿದ್ದರು.

ಸದ್ಯಕ್ಕೆ ಮಡಗಾಂವ್ -ಮಂಗಳೂರು ರೈಲು ರದ್ದುಗೊಳಿಸದೆ ಮುಂಬಯಿಗೆ ವಿಸ್ತರಿಸುವ , ವಂದೇ ಭಾರತ್ ಸ್ವೀಪರ್ ರೈಲು ಬಂದಾಗ ಆದ್ಯತೆ ಮೇರೆಗೆ ಮಂಗಳೂರು-ಮುಂಬಯಿ ಮಧ್ಯೆ ಆರಂಭಿಸುವ ಬಗ್ಗೆ ಸಚಿವರು ಭರವಸೆ ನೀಡಿರುವುದು ಸಂತಸ ನೀಡಿದೆ ಎಂದಿದ್ದಾರೆ ಸಂಸದ ಕೋಟ ಶ್ರೀನಿವಾಸ ಪೂಜಾರಿ. ಕರಾವಳಿ ಮತ್ತು ಮುಂಬಯಿ ನಗರಗಳ ನಡುವೆ ಪ್ರೀಮಿಯಂ ರೈಲುಗಳು ಬೇಕು ಎಂಬ ಸಮಿತಿಯ ಬೇಡಿಕೆಯನ್ನು ಸಚಿವರು ಮುಂದಿಟ್ಟ ಸಂಸದರು ಅದನ್ನು ಕಾರ್ಯಗತಗೊಳಿಸುವಲ್ಲಿ ಸಫಲರಾಗಿದ್ದಾರೆ. ಸಂಸದರ ಈ ವಿಶೇಷ ಪ್ರಯತ್ನಕ್ಕೆ ಧನ್ಯವಾದ ಸಲ್ಲಿಸುತ್ತೇವೆ. ಎಂದಿದ್ದಾರೆ ಗಣೇಶ್ ಪುತ್ರನ್, ಅಧ್ಯಕರು, ಕುಂದಾಪುರ, ರೈಲ್ವೆ ಪ್ರಯಾಣಿಕರ ಹಿತರಕ್ಷಣಾ ಸಮಿತಿ. ಒಟ್ಟಿನಲ್ಲಿ ಉಡುಪಿ, ಮಂಗಳೂರು ಭಾಗದ ಜನರಿಗೆ ಸಿಹಿಸುದ್ದಿ ಸಿಕ್ಕಿದೆ. ಪ್ರತಿನಿತ್ಯದ ವಾಣಿಜ್ಯ ಉದ್ದೇಶದ ಓಡಾಟಕ್ಕೆ, ವ್ಯಾಪಾರ ವಹಿವಾಟುಗಳ ಹೆಚ್ಚಳಕ್ಕೆ ಈ ರೈಲು ಸಂಪರ್ಕ ನೆರವಾಗಲಿದೆ.