
ಬೆಂಗಳೂರು : ಕರ್ನಾಟಕ ಕೇಡರ್ನ ಹಲವು ಐ.ಎ.ಎಸ್ ಅಧಿಕಾರಿಗಳು ಕೇಂದ್ರ ಸರ್ಕಾರದ ಸೇವೆಗೆ ನಿಯೋಜನೆಗೊಂಡಿದ್ದು, ಹಲವಾರು ಮಹತ್ವದ ಹುದ್ದೆಗಳಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಈಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟದ ನೇಮಕಾತಿ ಸಮಿತಿ ಕರ್ನಾಟಕ ಕೇಡರ್ನ ಐ.ಎ.ಎಸ್ ಅಧಿಕಾರಿ ಅಜಯ್ ಸೇಠ್ ಅವರನ್ನು ಪ್ರಮುಖ ಹುದ್ದೆಗೆ ನೇಮಕ ಮಾಡುವ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಲಾಗಿದೆ. ಸಂಪುಟ ನೇಮಕಾತಿ ಸಮಿತಿಯು ಅಜಯ್ ಸೇಠ್, ಐ.ಎ.ಎಸ್ (IAS) (ಕೆ.ಎನ್ : 1987), ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ, ಅವರನ್ನು ಹಣಕಾಸು ಸಚಿವಾಲಯಕ್ಕೆ ಹಣಕಾಸು ಕಾರ್ಯದರ್ಶಿಯಾಗಿ ನೇಮಕ ಮಾಡುವ ಪ್ರಸ್ತಾಪಕ್ಕೆ ಅನುಮೋದನೆ ನೀಡಿದೆ ಎಂದು ಹೇಳಿದೆ. ಅಜಯ್ ಸೇಠ್ ಕರ್ನಾಟಕ ಕೇಡರ್ನ 1987ನೇ ಬ್ಯಾಚ್ ಐಎಎಸ್ ಅಧಿಕಾರಿ. ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಅಜಯ್ ಸೇಠ್ ಅವರಿಗೆ ಕೆಲವು ದಿನಗಳ ಹಿಂದೆ ಕಂದಾಯ ಇಲಾಖೆಯ ಕಾರ್ಯದರ್ಶಿಯ ಹೆಚ್ಚುವರಿ ಪ್ರಭಾರವನ್ನು ಸಹ ನೀಡಿ ಆದೇಶವನ್ನು ಹೊರಡಿಸಲಾಗಿತ್ತು.

ಕರ್ನಾಟಕ ಕೇಡರ್ನ ಐ.ಎ.ಎಸ್ ಅಧಿಕಾರಿ ಅಜಯ್ ಸೇಠ್ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಪ್ರಸ್ತುತ ಅವರನ್ನು ಹಣಕಾಸು ಕಾರ್ಯದರ್ಶಿಯಾಗಿ ನೇಮಿಸಲಾಗಿದೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ತಿಳಿಸಿದೆ. ಅಜಯ್ ಸೇಠ್ ಪ್ರಸ್ತುತ ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಹುದ್ದೆಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಮಾರ್ಚ್ 1 ರಿಂದ ಅವರಿಗೆ ಕಂದಾಯ ಕಾರ್ಯದರ್ಶಿಯ ಹೆಚ್ಚುವರಿ ಹೊಣೆಯನ್ನು ಸಹ ನೀಡಲಾಗಿತ್ತು. 1987ರ ಬ್ಯಾಚ್ನ ಒಡಿಶಾ ಕೇಡರ್ನ ಐಎಎಸ್ ಅಧಿಕಾರಿ ತುಹಿನ್ ಕೆ ಪಾಂಡೆ ಅವರನ್ನು ಹಣಕಾಸು ಸಚಿವಾಲಯದಿಂದ ವರ್ಗಾವಣೆ ಮಾಡಿ, ಕಳೆದ ತಿಂಗಳು ಭಾರತೀಯ ಭದ್ರತಾ ಮತ್ತು ವಿನಿಮಯ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಬಳಿಕ ಹಣಕಾಸು ಕಾರ್ಯದರ್ಶಿ ಹುದ್ದೆ ಖಾಲಿಯಾಗಿತ್ತು. ಈ ಹುದ್ದೆಗೆ ಅಜಯ್ ಸೇಠ್ ನೇಮಕಗೊಂಡಿದ್ದಾರೆ. ಅಜಯ್ ಸೇಠ್ ಮೆಕ್ಯಾನಿಕಲ್ ಇಂಜಿನಿಯರಿಂಗ್ನಲ್ಲಿ ಬಿಟೆಕ್ ಪದವಿ ಮತ್ತು ಎಂಬಿಎ ಪದವಿಯನ್ನು ಪಡೆದಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿವಿಧ ಹುದ್ದೆಗಳಲ್ಲಿ ಅವರು ಕಾರ್ಯ ನಿರ್ವಹಣೆ ಮಾಡಿದ್ದಾರೆ. 2021ರಲ್ಲಿ ಅಜಯ್ ಸೇಠ್ ಕೇಂದ್ರ ಸೇವೆಗೆ ನಿಯೋಜನೆಗೊಂಡಿದ್ದರು. ಕೇಂದ್ರ ಸೇವೆಗೆ ತೆರಳುವ ಮೊದಲು ಅವರು ಬೆಂಗಳೂರಿನ ನಮ್ಮ ಮೆಟ್ರೋ ಯೋಜನೆ ನಿರ್ವಹಣೆ ಮಾಡುವ ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು.
2018 ರಿಂದ ಅಜಯ್ ಸೇಠ್ ಬಿಎಂಆರ್ಸಿಎಲ್ ಎಂಡಿಯಾಗಿದ್ದರು. ನಮ್ಮ ಮೆಟ್ರೋ 2-ಎ, ನಮ್ಮ ಮೆಟ್ರೋ 3-ಬಿ, ವಿಮಾನ ನಿಲ್ದಾಣದ ಮೆಟ್ರೋ ಸಂಪರ್ಕ ಯೋಜನೆಗಳನ್ನು ಅವರ ಅವಧಿಯಲ್ಲಿಯೇ ವಿನ್ಯಾಸಗೊಳಿಸಲಾಗಿದೆ. ಬಿಎಂಆರ್ಸಿಎಲ್ನ ಹಣಕಾಸು ಸ್ಥಿತಿಯನ್ನು ಸುಧಾರಿಸಲು ಅಜಯ್ ಸೇಠ್ ಹಲವಾರು ಕ್ರಮಗಳನ್ನು ಕೈಗೊಂಡಿದ್ದರು. ಖಾಸಗಿ ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಂಡು ಯೋಜನೆಯನ್ನು ಜಾರಿಗೊಳಿಸುವ ತೀರ್ಮಾನದ ಹಿಂದೆ ಅಜಯ್ ಸೇಠ್ ಶ್ರಮವಿತ್ತು ಎಂದು ಅಧಿಕಾರಿಗಳು ನೆನಪಿಸಿಕೊಳ್ಳುತ್ತಾರೆ. ಕರ್ನಾಟಕ ಕೇಡರ್ನ ಐಎಎಸ್ ಅಧಿಕಾರಿಗಳಾದ ಸಿ. ಶಿಖಾ, ಡಾ. ಅಜಯ್ ನಾಗಭೂಷಣ್ ಸೇರಿದಂತೆ ವಿವಿಧ ಅಧಿಕಾರಿಗಳು ಈಗಾಗಲೇ ಕೇಂದ್ರ ಸೇವೆಗೆ ನಿಯೋಜನೆಗೊಂಡಿದ್ದು, ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.