
ಉತ್ತರ ಕನ್ನಡ: ಮುಂಡಗೋಡ ತಾಲ್ಲೂಕು ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಒಂದೆಡೆಯಾದರೇ, ಹೊರಗುತ್ತಿಗೆ ಮೇಲೆ ನೇಮಕಗೊಂಡವರು, ಒಂದು ವರ್ಷ ಅವಧಿ ಮುಗಿಯುವುದರೊಳಗೆ ರಾಜೀನಾಮೆ ನೀಡುತ್ತಿದ್ದಾರೆ. ಇದರಿಂದ ಕಾಯಂ ತಜ್ಞ ವೈದ್ಯರ ಕೊರತೆಯಿಂದ, ತಾಲ್ಲೂಕಿನ ಬಡರೋಗಿಗಳು ಖಾಸಗಿ ಆಸ್ಪತ್ರೆಗಳನ್ನೇ ಅವಲಂಬಿಸಬೇಕಾಗಿದೆ.

J3tvkannada.in
ಕಳೆದ ನಾಲೈದು ವರ್ಷಗಳಿಂದ ಇಲ್ಲಿನ ತಾಲ್ಲೂಕು ಆಸ್ಪತ್ರೆಯು ತಜ್ಞ ವೈದ್ಯರ ಕೊರತೆ, ಇರುವ ವೈದ್ಯರುಗಳ ನಡುವೆ ಸಮನ್ವಯದ ಕೊರತೆ, ಸಣ್ಣ ಸಮಸ್ಯೆಗೂ ಹುಬ್ಬಳ್ಳಿಗೆ ಕಳಿಸಿಕೊಡುವ ಪದ್ಧತಿ, ರಾತ್ರಿ ಸಮಯದಲ್ಲಿ ವೈದ್ಯರು ಸಿಗದಿರುವುದು, ಹಲವು ವರ್ಷಗಳಿಂದ ಒಂದೇ ಕಡೆ ಬೀಡು ಬಿಟ್ಟಿರುವ ಸಿಬ್ಬಂದಿ. ಇವೆಲ್ಲ ಕಾರಣಗಳಿಂದ ಆಸ್ಪತ್ರೆ ವ್ಯವಸ್ಥೆ ನಲುಗುತ್ತಿದೆ ಎನ್ನುವ ಆರೋಪ ಸಾರ್ವತ್ರಿಕವಾಗಿದೆ.
ಔಷಧಿ ಲಭ್ಯವಿದ್ದರೂ ಚಿಕಿತ್ಸೆಗೆ ಬಳಸುವ ಬಗ್ಗೆ ನಿಷ್ಕಾಳಜಿ ತೋರಿದ್ದರಿಂದ, ಅಂಗನವಾಡಿಯಲ್ಲಿ ಹಾವು ಕಡಿದಿದ್ದ ಬಾಲಕಿ ಮೃತಪಟ್ಟ ಘಟನೆ ಕೆಲವು ತಿಂಗಳ ಹಿಂದೆ ನಡೆದಿತ್ತು. ಆ ಸಮಯದಲ್ಲಿ ಕರ್ತವ್ಯದಲ್ಲಿದ್ದ ವೈದ್ಯೆ ರಾಜೀನಾಮೆ ನೀಡಿದರು. ಇದರಿಂದ ಮೃತ ಬಾಲಕಿಯ ಕುಟುಂಬಕ್ಕೆ ನ್ಯಾಯ ಸಿಗದಿರುವುದು ಒಂದೆಡೆಯಾದರೆ, ಇದ್ದ ಒಬ್ಬ ವೈದ್ಯ ತಾಲ್ಲೂಕು ಆಸ್ಪತ್ರೆಯಿಂದ ಸಾರ್ವಜನಿಕ ಸೇವೆಯಿಂದ ದೂರವಾದರು. ಅಂತಿಮವಾಗಿ ಇದರ ಪರಿಣಾಮ ಬೀರಿರುವುದ್ದು ತಾಲ್ಲೂಕಿನ ಬಡರೋಗಿಗಳ ಮೇಲೆಯೇ.