
ಬೀದರ್: ಗುರುನಾನಕ ಪಬ್ಲಿಕ್ ಶಾಲೆ 50 ವರ್ಷ ಪೂರೈಸಿದ್ದರಿಂದ ಗುರುನಾನಕ ಶಿಕ್ಷಣ ಸಂಸ್ಥೆಯಿಂದ ನಗರದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಏಳು ಜನ ಸಾಧಕ ಮಹಿಳೆಯರಿಗೆ ಕಲ್ಯಾಣ ಕರ್ನಾಟಕ ನಾರಿ ಶಕ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕರ್ನಾಟಕ ಉನ್ನತ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಶಶಿಕಲಾ ಸಿ. ಕೆ.ಕೆ.ಆರ್.ಡಿ.ಬಿ ಉಪ ನಿರ್ದೇಶಕಿ ಸುಜಾತಾ ಕಾಳಗಿ, ಗುರುನಾನಕ ಶಾಲೆಯ ಮುಖ್ಯಶಿಕ್ಷಕಿ ಆರೀಫ್ ಹಾದಿ, ಹುಮನಾಬಾದ್ ಡಿಸಿಸಿ ಬ್ಯಾಂಕ್ ಶಾಖಾ ವ್ಯವಸ್ಥಾಪಕಿ ರೇಣುಕಾ ಎನ್. ಕಟ್ಟಿಮನಿ, ಭಾರತೀಯ ವಾಯು ಪಡೆ ಸ್ತ್ರೀರೋಗ ತಜ್ಞೆ ವಿಂಗ್ ಕಮಾಂಡರ್ ಜ್ಯೋತಿ ಎರೋಳಕರ್, ಔರಾದ್ (ಬಿ) ಶಾಲೆಯ ಶಿಕ್ಷಕಿ ಮಹಾನಂದ ಬಲರಾಜ ಎಂಡೆ ಹಾಗೂ ಹೈದರಾಬಾದ್ ಪ್ರೆಸೆಡೆನ್ಸಿ ಬಾಲಕಿಯರ ಪ್ರೌಢಶಾಲೆಯ ಪ್ರಾಂಶುಪಾಲೆ ಅರಣದತ್ತಿ ಕುಲಕರ್ಣಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಡಾ. ಜಾನಕಿ ಆರ್. ತೋರವಿ ಪ್ರಶಸ್ತಿ ಪ್ರದಾನ ಮಾಡಿ, ‘ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ತಾಯಿಯಾಗಿ ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಟ್ಟು, ಸತ್ಪಪ್ರಜೆಗಳಾಗಿ ರೂಪಿಸುವಲ್ಲೂ ಮಹತ್ವದ ಕೆಲಸ ಮಾಡುತ್ತಿದ್ದಾರೆ’ ಎಂದರು.