
ರಾಯಚೂರು : ವಿವಿಧ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ವೈಟಿಪಿಎಸ್ ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ. ಹೀಗಾಗಿ ಲೋಡ್ ಶೆಡ್ಡಿಂಗ್ ಆಗುವ ಭಯ ನಿರ್ಮಾಣವಾಗಿದೆ. ದೀಪದ ಕೆಳಗೆ ಕತ್ತಲು ಅನ್ನೋ ಹಾಗೆ ರಾಯಚೂರಿನ ಯರಮರಸ್ ಸೂಪರ್ ಕ್ರಿಟಿಕಲ್ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಸುಮಾರು 1500 ಗುತ್ತಿಗೆ ಕಾರ್ಮಿಕರು ಸರಿಯಾದ ವೇತನ ಭತ್ಯೆಗಳು ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾರ್ಮಿಕರು ಕಳೆದ ಎರಡು ವರ್ಷಗಳಿಂದ ಮನವಿ ಸಲ್ಲಿಸುತ್ತಿದ್ದರೂ ಕೂಡ ಕೆಪಿಸಿಎಲ್ ಹಾಗೂ ಆರ್ಪಿಸಿಎಲ್ನಿಂದ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಏಕಾಏಕಿ ವಿದ್ಯುತ್ ಕೇಂದ್ರದ ಕಾರ್ಮಿಕರು ಅಧಿಕಾರಿಗಳಿಗೆ ಮಾಹಿತಿ ನೀಡದೆ ಕೆಲಸಕ್ಕೆ ಗೈರಾಗಿ ಪ್ರತಿಭಟನೆ ಮಾಡುವ ಮೂಲಕ ಶಾಕ್ ಕೊಟ್ಟಿದ್ದಾರೆ. ವೈಟಿಪಿಎಸ್ ನಿರ್ವಹಣೆ ಗುತ್ತಿಗೆ ಪಡೆದಿರುವ ಹೈದರಾಬಾದ್ ಮೂಲದ ಪವರ್ ಕಾರ್ಪೊರೇಟ್ ಕಂಪನಿ ವಿರುದ್ಧ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಕಾರ್ಮಿಕ ಮುಖಂಡ ಜೆವಿಎಲ್ ರೆಡ್ಡಿ, ‘ಕಾರ್ಮಿಕರಿಗೆ ಕನಿಷ್ಠ ವೇತನ ನೀಡುತ್ತಿಲ್ಲ. ಸರಿಯಾದ ರಜೆಗಳಿಲ್ಲ. ಇಲ್ಲಿ ಒಟ್ಟು 1500 ಕಾರ್ಮಿಕರಿದ್ದಾರೆ. ಈ ಹಿಂದೆ ಮುಷ್ಕರ ಮಾಡಿದ್ದೆವು. ಈಗ ಮತ್ತೆ ಹೋರಾಟ ಮಾಡುತ್ತಿದ್ದೇವೆ. ಅವರು ನಮ್ಮನ್ನು ಕರೆದು ಮಾತಾಡಿ ಬಗೆಹರಿಸಿಕೊಂಡರೆ ಒಳ್ಳೆಯದು. ಇವರೇನು ಮನೆಯಿಂದ ನಮಗೆ ದುಡ್ಡು ಕೊಡುವುದಿಲ್ಲ. ಕೆಪಿಸಿಎಲ್ ಕೊಟ್ಟ ಹಣವನ್ನು ನಮಗೆ ಕಳುಹಿಸುತ್ತಾರೆ. ಬೇಡಿಕೆ ಈಡೇರದೇ ಇದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಹೇಳಿದ್ದಾರೆ’. ಕಾರ್ಮಿಕರ ಈ ಒಂದು ದಿನದ ಹೋರಾಟಕ್ಕೆ ರಾಯಚೂರು ಪವರ್ ಕಾರ್ಪೊರೇಷನ್ ಲಿಮಿಟೆಡ್ ಅಧಿಕಾರಿಗಳು ತತ್ತರಿಸಿದ್ದಾರೆ. 1500 ಕಾರ್ಮಿಕರು ಒಟ್ಟಿಗೆ ನಿರಂತರ ಹೋರಾಟಕ್ಕೆ ಇಳಿದಿದ್ದಾರೆ. ಇದರಿಂದಾಗಿ ವಿದ್ಯುತ್ ಕೇಂದ್ರದಲ್ಲಿ ವಿದ್ಯುತ್ ಉತ್ಪಾದನೆ ನಿಲ್ಲುವ ಭಯ ಶುರುವಾಗಿದೆ.

1600 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನಾ ಸಾಮಾರ್ಥ್ಯದ ವೈಟಿಪಿಎಸ್ ವಿದ್ಯುತ್ ಕೇಂದ್ರದಲ್ಲಿ ಸದ್ಯಕ್ಕೆ ಕೇವಲ 800 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಈಗಾಗಲೇ ತಾಂತ್ರಿಕ ಸಮಸ್ಯೆ, ದುರಸ್ಥಿ ಕಾರ್ಯಗಳ ಕಾರಣಕ್ಕೆ ರಾಜ್ಯದಲ್ಲಿ ಅನಧಿಕೃತ ಲೋಡ್ಶೆಡ್ಡಿಂಗ್ ನಡೆದಿದೆ. ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ. ಒಂದಿಷ್ಟು ಕಾಲಾವಕಾಶ ಬೇಕು ಎಂದು ವೈಟಿಪಿಎಸ್ ಕಾರ್ಯವಿರ್ವಾಹಕ ನಿರ್ದೇಶಕ ಗಂಗಾಧರ್ ಹೇಳಿದ್ದಾರೆ. ‘ಇದು ಮಿಷಿನರಿ. ಇವತ್ತು ಇದ್ದಂತೆ ನಾಳೆ ಇರೋದಿಲ್ಲ. ಅನಿರೀಕ್ಷಿತ ಸಮಸ್ಯೆಗಳು ಬಂದೇ ಬರುತ್ತವೆ. ಕಾರ್ಮಿಕರ ಹೋರಾಟದ ಬಗ್ಗೆ ಸಹಾನುಭೂತಿ ಇದೆ. ಯಾಕೆಂದರೆ ಅವರು ನಮ್ಮಂತೆ ಮನುಷ್ಯರು. ನಮಗಿಂತ ಹೆಚ್ಚು ಕಷ್ಟಗಳು ಅವರಿಗಿದೆ. ಆದರೆ ಯಾವುದೇ ವಿಷಯವನ್ನು ಯೋಗ್ಯ ರೀತಿಯಲ್ಲಿ ತೆಗೆದುಕೊಂಡು ಹೋಗಬೇಕು. ಇಲ್ಲ ಅಂದರೆ ಎಲ್ಲರಿಗೂ ಕಷ್ಟವಾಗುತ್ತದೆ’ ಎಂದಿದ್ದಾರೆ ಗಂಗಾಧರ್. ಬೇಸಿಗೆ ಹಿನ್ನಲೆ ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ವಿದ್ಯುತ್ ಕ್ಷಾಮ ಎದುರಾಗದಿರಲಿ ಎಂದು ಕಾರ್ಮಿಕರು ಒಂದು ವಾರದ ಗಡುವು ನೀಡಿದ್ದಾರೆ. ಒಂದು ವಾರದಲ್ಲಿ ಕಾರ್ಮಿಕರಿಗೆ ಗುತ್ತಿಗೆ ಕಂಪನಿ ಸರಿಯಾಗಿ ಸ್ಪಂದಿಸದೇ ಇದ್ದರೆ ಕೆಲಸಕ್ಕೆ ಗೈರಾಗಿ, ಅನಿರ್ಧಿಷ್ಟಾವಧಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ