
ಚಿತ್ರದುರ್ಗ: ಕೋಟೆ, ಕೊತ್ತಲ, ಕಣಿವೆ, ಬುರುಜು, ಬತೇರಿಗಳಿಗೆ ಹೆಸರುವಾಸಿಯಾಗಿರುವ ಚಿತ್ರಕಲ್ಲುಗಳ ದುರ್ಗ (ಚಿತ್ರದುರ್ಗ) ತನ್ನ ಸುತ್ತಮುತ್ತಲೂ ಹಸಿರು ಪರಿಸರವನ್ನೇ ಮೈದುಂಬಿಕೊಂಡಿದೆ. ನಗರದ ಅಂಚಿನಲ್ಲಿರುವ ಸಾಲು ಗಿರಿಧಾಮಗಳು, ಮೀಸಲು ಅರಣ್ಯ ಪ್ರದೇಶ, ವನ್ಯಧಾಮ, ಕಿರು ಮೃಗಾಲಯ, ಸಣ್ಣ ಜಲಪಾತ, ಕೆರೆ-ಕಟ್ಟೆ, ಹೊಂಡಗಳು ದುರ್ಗದ ವಾಸಿಗಳಿಗೆ ಸ್ವಚ್ಛಂದ ಪರಿಸರವನ್ನು .ಉಡುಗೊರೆಯಾಗಿ ಕೊಟ್ಟಿವೆ.
ಬಂಗಾರ, ತಾಮ್ರ, ಮ್ಯಾಂಗನೀಸ್, ಕಬ್ಬಿಣದ ಅದಿರು, ಗ್ರಾನೈಟ್ ಖನಿಜಗಳನ್ನು ಒಡಲಾಳದಲ್ಲಿ ಹುದುಗಿಸಿಟ್ಟುಕೊಂಡಿರುವ ಚಿತ್ರದುರ್ಗ ಜಿಲ್ಲೆ ಪ್ರಾಕೃತಿಕ ಸಂಪನ್ಮೂಲಗಳು ಗಣಿಯಾಗಿ ಗುರುತಿಸಿಕೊಂಡಿದೆ. ಮಲೆನಾಡನ್ನೇ ನಾಚಿಸುವಂತ ಗಿರಿಧಾಮಗಳು ಪ್ರವಾಸಿಗರಿಗೆ ಕಾಶ್ಮೀರಕ್ಕೆ ಬಂದಂತಹ ಅನುಭವ ಕೊಡುತ್ತವೆ. ಏಷ್ಯಾಖಂಡದಲ್ಲೇ ಅತೀಹೆಚ್ಚು ವೇಗದ ಗಾಳಿ ಬೀಸುವ ಪ್ರದೇಶ ಎಂದು ಗುರುತಿಸಿಕೊಂಡಿರುವ ಕಾರಣದಿಂದಲೇ ಈ ಭಾಗದಲ್ಲಿ ಅತೀ ಹೆಚ್ಚು ಪವನ ಉತ್ಪಾದನೆಯಾಗುತ್ತಿದೆ.

ಮಲೆನಾಡು ಭಾಗ ನಿತ್ಯಹರಿದ್ವರ್ಣ ಕಾಡಿನಿಂದ ಹೆಸರುವಾಸಿಯಾಗಿದ್ದರೆ ಮಧ್ಯಕರ್ನಾಟಕ ಬಯಲು ಪ್ರದೇಶವು ಒಣ ಪರ್ಣಪಾತಿ ಕಾಡು, ಪೊದೆಸಸ್ಯಗಳಿಂದ ಆವೃತಗೊಂಡಿದೆ. ಅಪರೂಪದ ಕರಡಿಗಳ ವಾಸಸ್ಥಳವೂ ಆಗಿರುವ ದುರ್ಗದ ಅರಣ್ಯ ಪ್ರದೇಶ ಅಪರೂಪದ ಔಷಧ ಸಸ್ಯಗಳಿಂದ ಆವೃತವಾಗಿದೆ. ನಗರದಿಂದ ಕೇವಲ 2 ಕಿ.ಮೀ ದೂರ ಸಾಗಿದರೆ ಜೋಗಿಮಟ್ಟಿ ಮೀಸಲು ಅರಣ್ಯ ಪ್ರದೇಶ ಆರಂಭವಾಗುತ್ತದೆ. ಅಲ್ಲಿಂದ ಆರಂಭವಾಗುವ ಗಿರಿಗಳ ಸಾಲು ನೋಡುಗರಿಗೆ ಆನಂದ ತುಂಬುತ್ತದೆ.
ಕ್ರಮೇಣ ಅರಣ್ಯ ಪ್ರದೇಶ ಒತ್ತುವರಿಯಾಗಿ ತೆಂಗು, ಅಡಿಕೆ ತೋಟಗಳಾಗಿ ಬದಲಾದ ನಂತರ ಹುಲಿಗಳು ಇಲ್ಲಿ ವಾಸಿಸುವುದು ಕಡಿಮೆಯಾಯಿತು. ತಂಪನ್ನೇ ಬಯಸುವ ಹುಲಿಗಳು ಬಿಸಿಲು ಹೆಚ್ಚಿರುವ ಈ ಭಾಗದಿಂದ ಬೇರೆಡೆಗೆ ತೆರಳಿದವು ಎಂಬ ಮಾಹಿತಿ ದೊರೆಯುತ್ತದೆ. ಆದರೂ ಪಶ್ಚಿಮಘಟ್ಟಗಳ ಚಾಚಿನಲ್ಲಿ ಚಿತ್ರದುರ್ಗದ ಗಿರಿಧಾಮವೂ ಸೇರಿಕೊಂಡಿರುವುದು ಸ್ಥಳೀಯರಿಗೆ ಹೆಮ್ಮೆಯ ಸಂಗತಿಯಾಗಿದೆ.
ಆನೆ ಕಾರಿಡಾರ್: ಕರ್ನಾಟಕ ರಾಜ್ಯದ ಬಹುಮುಖ್ಯ ಆನೆ ಕಾರಿಡಾರ್ನ ಹಾದಿಯಲ್ಲಿ ಚಿತ್ರದುರ್ಗ ಜಿಲ್ಲೆಯ ಹಲವು ಅರಣ್ಯ ಪ್ರದೇಶಗಳು ಹರಡಿಕೊಂಡಿವೆ. ಬನ್ನೇರುಘಟ್ಟ, ನಾಗರಹೊಳೆ, ಬಂಡಿಪುರ ಭಾಗದಿಂದ ಬರುವ ಆನೆಗಳು ದಾವಣಗೆರೆ ಜಿಲ್ಲೆಯ ಜಗಳೂರು, ಹೊಳಲ್ಕೆರೆ ಸಮೀಪದ ರಾಮಗಿರಿ, ಲೋಕದೊಳಲು ಮೂಲಕ ಹಿರಿಯೂರು ತಾಲ್ಲೂಕಿನ ವಿವಿ ಸಾಗರ ಜಲಾಶಯಕ್ಕೆ (ಮಾರಿಕಣಿವೆ) ಬರುತ್ತವೆ. ಅದೇ ಹಾದಿಯಲ್ಲಿ ವಾಪಸ್ ತೆರಳುತ್ತವೆ.
ಶತಮಾನಗಳಿಂದಲೂ ಆನೆಗಳು ಈ ಭಾಗಕ್ಕೆ ಬರುತ್ತಿದ್ದು, ಇಲ್ಲಿ ಹರಡಿರುವ ಅರಣ್ಯವೇ ಅವುಗಳಿಗೆ ಸ್ವಾಗತ ಕೋರುತ್ತಿದೆ. ಆದರೆ ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿಗಳ ಹೆಸರಿನಲ್ಲಿ ಆನೆಗಳ ಹಾದಿಗೆ ಹಲವು ಅಡ್ಡಿ, ಆತಂಕಗಳೂ ಎದುರಾಗಿವೆ. ಆದರೂ ಆನೆಗಳು ಅದೇ ಮಾರ್ಗದಲ್ಲಿ ಮಾರಿಕಣಿವೆಯತ್ತ ಬರುತ್ತಿರುವ ಪ್ರಕ್ರಿಯೆ ಈಗಲೂ ಮುಂದುವರಿದಿದೆ.

ಕರ್ನಾಟಕದ ಊಟಿ: ಸಾಲು ಗಿರಿಧಾಮ ಜೋಗಿಮಟ್ಟಿ ವನ್ಯಜೀವಿಧಾಮ ಕರ್ನಾಟಕ ಊಟಿ ಎಂದೇ ಪ್ರಸಿದ್ದಿ ಪಡೆದಿದೆ. ಚಿತ್ರದುರ್ಗ, ಹೊಳಲ್ಕೆರೆ ಮತ್ತು ಹಿರಿಯೂರು ತಾಲ್ಲೂಕುಗಳಲ್ಲಿ 10,000 ಹೆಕ್ಟೇರ್ ಪ್ರದೇಶದಲ್ಲಿ ಜೋಗಿಮಟ್ಟಿ ಗಿರಿಧಾಮ ವ್ಯಾಪಿಸಿದೆ. ಇದೇ ವ್ಯಾಪ್ತಿಯಲ್ಲಿ ಆಡುಮಲ್ಲೇಶ್ವರ ಎಂಬ ಕಿರು ಮೃಗಾಲಯವೂ ಇದೆ. ಇದೇ ಪ್ರದೇಶದಲ್ಲಿ ಹಿಮವತ್ ಕೇದಾರ ಅಥವಾ ಹಿಮವತ್ ಕೆದ್ರ ಎಂಬ ಸಣ್ಣ ಜಲಪಾತಗಳಿದ್ದು ಮಳೆಗಾಲದಲ್ಲಿ ದರ್ಶನ ಭಾಗ್ಯ ನೀಡುತ್ತವೆ.
ಉತ್ತರೆ ಗುಡ್ಡದ ಸೌಂದರ್ಯ: ಜೋಗಿಮಟ್ಟಿ ಹಾಗೂ ವಾಣಿವಿಲಾಸ ಜಲಾಶಯದಂಚಿನುದ್ದಕ್ಕೂ ಮೈಚಾಚಿಕೊಂಡಿರುವ
ಹಿರಿಯೂರು ತಾಲ್ಲೂಕಿನ ಉತ್ತರೆ ಗುಡ್ಡಗಳು ಪರಿಸರ ಪ್ರಿಯರಿಗೆ ಮಲೆನಾಡಿನ ಅನುಭವ ನೀಡುತ್ತವೆ. ಉತ್ತರೆ ಗುಡ್ಡ (ಉತ್ತಾರೆ) ಅರಣ್ಯ ಪ್ರದೇಶವನ್ನು 2022ರಲ್ಲಿ ವನ್ಯಜೀವಿ ಧಾಮ ಎಂದು ಸರ್ಕಾರ ಘೋಷಿಸಿದೆ. ಈ ಪ್ರದೇಶ ಪರಿಸರ ಪ್ರಿಯರಿಗೆ, ಚಾರಣಿಗರಿಗೆ ಹೇಳಿ ಮಾಡಿಸಿದಂತಿವೆ. ಹಿರಿಯೂರು ಅರಣ್ಯ ವಲಯವು ಮಾರಿಕಣಿವೆ ಮೀಸಲು ಅರಣ್ಯ ಹೊಂದಿದ್ದು, ಜೋಗಿಮಟ್ಟಿ-ಬುಕ್ಕಾಪಟ್ಟಣ ವನ್ಯಧಾಮಗಳ ಮಧ್ಯದಲ್ಲಿದೆ.
ಮೊಳಕಾಲ್ಮುರು ತಾಲ್ಲೂಕಿನಲ್ಲಿ ಸ್ವಚ್ಛ ವಾತಾವರಣ ಸೃಷ್ಟಿಸಿರುವ ಬಾಂಡ್ರಾವಿ ಮೀಸಲು ಅರಣ್ಯ ಪ್ರದೇಶವು ಸಾಕಷ್ಟು ಹಸಿರನ್ನು ಹೊದ್ದುಕೊಂಡಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿರುವ ರಾಂಪುರದಿಂದ ಸಂತೇಗುಡ್ಡ ರಸ್ತೆಯಲ್ಲಿ 15 ಕಿ.ಮೀ ದೂರ ಸಾಗಿದರೆ ಬಾಂಡ್ರಾವಿ ಅರಣ್ಯ ಎದುರಾಗುತ್ತದೆ. ಮುಂಗಾರು ಹಂಗಾಮಿನಲ್ಲಿ ಬಾಂಡ್ರವಿ ವೀಕ್ಷಣೆ ಅದ್ಭುತ ಅನುಭವ ನೀಡುತ್ತದೆ.
1,306 ಹೆಕ್ಟೇರ್ ವಿಸ್ತೀರ್ಣ ಹೊಂದಿರುವ ಈ ಅರಣ್ಯವು ನಿಸರ್ಗ ಸೌಂದರ್ಯವನ್ನು ಹೊಂದಿದೆ. ಇಲ್ಲಿ ಅರಣ್ಯ ರಕ್ಷಕರಾಗಿ ಸೇವೆಗೆ ಬಂದಿದ್ದ ನಾಗಪ್ಪ ಮೇಟಿ ಅವರ ಶ್ರಮದಿಂದ ಅರಣ್ಯ ಹೆಚ್ಚು ಹಸಿರನ್ನು ಹೊದ್ದುಕೊಳ್ಳಲು ಕಾರಣವಾಯಿತು. ಇಲ್ಲಿ ಪ್ರಮುಖವಾಗಿ ಕಮರ ಮರಗಳನ್ನು ಕಾಣಬಹುದು. ಇತರೆ ಹತ್ತಾರು ಕಾಡುಜಾತಿ ಮರಗಳು ಬೆಳೆದು ನಿಂತಿವೆ. ಕರಡಿ, ಚಿರತೆ, ಮುಳ್ಳುಹಂದಿ, ಕಾಡುಹಂದಿ, ಮೊಲ, ನವಿಲು, ಉಡ, ಕಾಡುಬೆಕ್ಕು ಮುಂತಾದ ಪ್ರಾಣಿಗಳ ವಾಸಸ್ಥಳವೂ ಆಗಿದೆ.