ಚಿಂತಾಮಣಿ : 07 ಫೆಬ್ರವರಿ 2025 ರಂದು ಚಿಂತಾಮಣಿ ತಾಲ್ಲೂಕು ಪಾಪತಿಮ್ಮನಹಳ್ಳಿ ಗ್ರಾಮದ ಸುಮಾರು 82 ವರ್ಷದ ವಯಸ್ಸಿನ ಲಕ್ಷ್ಮೀದೇವಮ್ಮ ಎಂಬುವವರು ಊರಿಗೆ ಹೋಗಲು ಚಿಂತಾಮಣಿ ನಗರದಲ್ಲಿ ಸಿವಿಲ್ ಬಸ್ ಸಿಗದ ಕಾರಣ ಸಿವಿಲ್ ನಿಲ್ದಾಣದಿಂದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಕಡೆ ನಡೆದುಕೊಂಡು ಹೋಗುತ್ತಿದ್ದಾಗ 35-40 ವರ್ಷದ ಅಪರಿಚಿತ ವ್ಯಕ್ತಿಯೊಬ್ಬ ಬಂದು ಲಕ್ಷ್ಮೀದೇವಮ್ಮಳನ್ನು ನಿಮಗೆ ಮೋದಿ ಹಣ ಕೊಡುತ್ತಿದ್ದಾರೆ ಬಾ 5000 ರೂ ಹಣ ಕೊಡುತ್ತೇನೆ ಎಂದು ಹೇಳಿ ನಂಬಿಸಿ ಕರೆದುಕೊಂಡು ಹೋಗಿದ್ದಾನೆ.

ಬಳಿಕ ಆಕೆಯಾ ಕತ್ತಿನಲ್ಲಿದ್ದ ಸುಮಾರು 25 ಗ್ರಾಂ ತೂಕದ ಎರಡು ಲಕ್ಷ ರೂಗಳು ಬೆಲೆ ಬಾಳುವ ಬಂಗಾರದ ಮಾಂಗಲ್ಯ ಚೈನ್ ಕಳವು ಮಾಡಿಕೊಂಡು ಪರಾರಿಯಾಗಿದ್ದ. ಘಟನೆ ಕುರಿತು ಚಿಂತಾಮಣಿ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿಯ ಪತ್ತೆಗಾಗಿ ಜಿಲ್ಲಾ ರಕ್ಷಣಾಧಿಕಾರಿಗಳಾದ ಕುಶಾಲ್ ಚೌಕ್ಸೆ, ಎ.ಎಸ್.ಪಿ ರಜಾ ಇಮಾಮ್ ಖಾಸಿಂ, ಚಿಂತಾಮಣಿ ಉಪ ವಿಭಾಗದ ಡಿ.ವೈ.ಎಸ್ಪಿ ಮುರುಳಿಧರ್, ನಗರ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ವೀಜಿ ಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ಆ ತಂಡ ನಗರದಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳ ಪರಿಶೀಲನೆ ನಡೆಸಿ ಆರೋಪಿಯ ಗುರುತನ್ನು ಪತ್ತೆ ಹಚ್ಚಿ ಕಳವು ಪಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಮಂಜೇಶ್ ಅಲಿಯಾಸ್ ಹೊಟ್ಟೆ ಮಂಜ(40 ವರ್ಷ) ತರಬಹಳ್ಳಿ ಪೋಸ್ಟ್, ನೆಲಮಂಗಲ ತಾಲ್ಲೂಕು,ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವನನ್ನು ಬಂಧಿಸಿ ಕಳವಾಗಿದ್ದ ಸುಮಾರು 2 ಲಕ್ಷ ಬೆಲೆ ಬಾಳುವ 24 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಚೈನ್ ವಶಪಡಿಸಿಕೊಂಡಿದ್ದಾರೆ. ಜಿಲ್ಲಾ ವರಿಷ್ಟಾಧಿಕಾರಿಗಳಾದ ಕುಶಾಲ್ ಚೌಕ್ಸೆರವರು ಪ್ರಶಂಸೆ ಪತ್ರವನ್ನು ನೀಡಿ ತಂಡವನ್ನು ಅಭಿನಂದಿಸಿದ್ದಾರೆ.