
ದಾವಣಗೆರೆ: ವರದಕ್ಷಿಣೆಗಾಗಿ ಪತಿಯೇ, ಪತ್ನಿಯ ಕತ್ತನ್ನು ಸೀರೆಯಿಂದ ಬಿಗಿದು ಉಸಿರುಗಟ್ಟಿಸಿ ಕೊಂದ ಅಮಾನವೀಯ ಘಟನೆ ಹರಿಹರ ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿ ನಡೆದಿದೆ.

ನೇತ್ರಾವತಿ(26) ಕೊಲೆಯಾದ ಮಹಿಳೆ. ಕಳೆದ 7 ವರ್ಷದ ಹಿಂದೆ ಕುಟುಂಬಸ್ಥರು ಹರಳಹಳ್ಳಿ ಗ್ರಾಮದ ದೇವೇಂದ್ರಪ್ಪನ ಜೊತೆ ನೇತ್ರಾವತಿಯವರನ್ನು ಮದುವೆ ಮಾಡಿಕೊಟ್ಟಿದ್ದರು. ಮದುವೆ ಸಂದರ್ಭದಲ್ಲಿ ಕುಟುಂಬಸ್ಥರು ವರದಕ್ಷಿಣೆಯಾಗಿ 10 ತೊಲ ಬಂಗಾರ 1 ಲಕ್ಷ ರೂ. ನಗದು ಹಾಗೂ ಬೈಕ್ ಕೊಡಿಸಿದ್ದರು. ಮೃತ ನೇತ್ರಾವತಿ ಒಂದು ಗಂಡು ಮತ್ತು ಹೆಣ್ಣು ಮಗುವನ್ನು ಹೊಂದಿದ್ದರು. ಆದರೆ ಪಾಪಿ ಗಂಡ, ಪ್ರತಿನಿತ್ಯ ನೇತ್ರಾವತಿಯೊಂದಿಗೆ ಜಗಳವಾಡುತ್ತಿದ್ದ. ಸಾಲದ್ದಕ್ಕೆ ಮನಬಂದಂತೆ ಹಲ್ಲೆ ನಡೆಸಿ, ಹಣಕ್ಕಾಗಿ ಪೀಡಿಸುತ್ತಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಹಾಗೂ ಕೊಲೆ ಪ್ರಕರಣ ದಾಖಲಾಗಿದೆ. ಪೊಲೀಸರು ನೇತ್ರಾವತಿ ಮೃತದೇಹವನ್ನು ದಾವಣಗೆರೆ ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನಿಸಿದ್ದಾರೆ.