
ಬೆಳಗಾವಿ: ನಟ ಸಾರ್ವಭೌಮ ಡಾ. ರಾಜ್ಕುಮಾರ್ ಅವರೇ ಹೇಳಿದಂತೆ, ಮನಸೊಂದಿದ್ದರೆ ಮಾರ್ಗವು ಉಂಟು ಕೆಚ್ಚೆದೆ ಇರಬೇಕೆಂದೆಂದು ಎಂಬ ಮಾತಿನಂತೆ ಕಾಯಕ ಮಾಡೋ ಮನಸಿದ್ದರೆ ಸಕ್ಸಸ್ ಅನ್ನೋದು ಸಿಕ್ಕೇ ಸಿಗುತ್ತದೆ. ಅದೇ ಮಾತಿನಂತೆ ಆ ಊರಲ್ಲಿ ರೈತರಿಗೆ ಭೂಮಿ ಏನು ಕಮ್ಮಿ ಇಲ್ಲ. ಹಾಗೆಯೇ ಭೂಮಿ ಹೊಂದಿರುವ ರೈತರಿಗೆ ನೀರಾವರಿ ಅನುಕೂಲವೂ ಇದೆ. ಆದರೆ ಆ ರೈತರು ತಮ್ಮ ಗದ್ದೆಯಲ್ಲಿ ವರ್ಷದ ಬೆಳೆಗಳನ್ನು ಬೆಳೆಯೋದೆ ಇಲ್ಲ. ಬದಲಾಗಿ ಅವರು ದಿನ ಆದಾಯ ಬರುವ ಬೇರೆ ಕಸಬು ಕಂಡುಕೊಂಡಿದ್ದಾರೆ. ನಾಲ್ಕು ರಾಜ್ಯಗಳ ರೈತರೊಂದಿಗೆ ವಹಿವಾಟು ನಡೆಸಿ ತಿಂಗಳಿಗೆ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ. ಅಷ್ಟಕ್ಕೂ ಆ ಗ್ರಾಮದ ರೈತರು ಮಾಡಿರೋ ಪ್ಲ್ಯಾನ್ ಎಂತಹದು? ಅವರು ಯಾಕೆ ವರ್ಷದ ಬೆಳೆ ಬೆಳೆಯೊಲ್ಲ ಅಂತೀರಾ? ಕರ್ನಾಟಕದ ಬೀದರ್, ಹಾವೇರಿ, ವಿಜಯಪುರ, ಬಾಗಲಕೋಟೆ, ದಾವಣಗೆರೆ, ಬೆಳಗಾವಿ ಜಿಲ್ಲೆ ಸೇರಿದಂತೆ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ರಾಜ್ಯಗಳಿಗೂ ಶಿಂಧಿಕುರುಬೇಟ್ ಮತ್ತು ಅರಭಾಂವಿ ಸಸಿಗಳು ರವಾನೆಯಾಗುತ್ತಿವೆ. ಗುಣಮಟ್ಟಕ್ಕೆ ಇಲ್ಲಿನ ಸಸಿಗಳು ಹೆಸರುವಾಸಿಯಾಗಿದೆ. ಬಹುತೇಕ ರೈತರು ಆರು ತಿಂಗಳು ಮತ್ತು ವರ್ಷದ ಬೆಳೆಗಳನ್ನು ಬೆಳೆಯುತ್ತಾರೆ. ಆದರೆ, ಇಲ್ಲಿನ ರೈತರು ಅಂತಹ ಬೆಳೆಗಳಿಗೆ ಅಂಟಿಕೊಂಡು ಕುಳಿತಿಲ್ಲ. ನರ್ಸರಿ ಕೃಷಿಯತ್ತ ಮುಖ ಮಾಡಿದ್ದಾರೆ. ರೈತರಿಗೆ ಬೇಕಾದ ಎಲ್ಲಾ ಸಸಿಗಳನ್ನು ತಯಾರಿಸಿ, ಮಾರಾಟ ಮಾಡಿ, ಅದರಿಂದ ಬಂದ ಆದಾಯದಿಂದ ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ.
