
ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಹಾಲು ಒಕ್ಕೂಟವು (ಚಿಮುಲ್) ಜಿಲ್ಲೆಯ ಹಾಲು ಉತ್ಪಾದಕರಿಗೆ ಯುಗಾದಿ ಹಬ್ಬಕ್ಕೆ ಭರ್ಜರಿ ಸಿಹಿಸುದ್ದಿ ನೀಡಿದೆ. ಹಾಲು ಒಕ್ಕೂಟವು ಕೆಲವೇ ತಿಂಗಳಲ್ಲಿ ಭರ್ಜರಿ ಲಾಭ ಕಂಡಿರುವ ಹಿನ್ನೆಲೆ ಯುಗಾದಿ ಕೊಡುಗೆಯಾಗಿ ತನ್ನ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿನ ಮೇಲೆ ಹೆಚ್ಚುವರಿ ಹಣ ನೀಡಲು ನಿರ್ಧರಿಸಿದೆ. ಅದರಂತೆ ಈಗಾಗಲೇ ಮಾರ್ಚ್ 15ರಿಂದ ಮೇ 15ರವರೆಗೂ ಸುಮಾರು ಎರಡು ತಿಂಗಳ ಕಾಲ ರೈತರು ಉತ್ಪಾದಿಸುವ ಹಾಲಿಗೆ ಪ್ರತಿ ಲೀಟರ್ಗೆ 1 ರೂಪಾಯಿ ಹೆಚ್ಚುವರಿಯಾಗಿ ಕೊಡಲು ತೀರ್ಮಾನಿಸಿದೆ. ಇತ್ತೀಚೆಗಷ್ಟೇ ಹಾಲು ಒಕ್ಕೂಟವು ಕೋಲಾರದಿಂದ ಪ್ರತ್ಯೇಕಗೊಂಡು ಚಿಕ್ಕಬಳ್ಳಾಪುರ ಹಾಲು ಒಕ್ಕೂಟವಾಗಿತ್ತು. ಇದಾದ ಕೆಲವೇ ತಿಂಗಳಲ್ಲಿ ಒಕ್ಕೂಟವು ಲಾಭದ ಹಾದಿಯಲ್ಲಿ ಸಾಗಿದೆ. ಈ ಹಿನ್ನೆಲೆ ಒಕ್ಕೂಟಕ್ಕೆ ಬರುವ ಲಾಭದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಹಾಲು ಉತ್ಪಾದಕರಿಗೂ ಪಾಲು ನೀಡಲು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಮತ್ತೊಂದೆಡೆ ಬೇಸಿಗೆ ಶುರುವಾಗಿರುವುದರಿಂದ ಸಾಮಾನ್ಯವಾಗಿ ಈ ಅವಧಿಯಲ್ಲಿ ಹಾಲಿನ ಉತ್ಪಾದನೆ ಕೂಡ ಕಡಿಮೆಯಾಗುತ್ತೆ. ಈ ಸಮಯದಲ್ಲಿ ಹಾಲು ಉತ್ಪಾದಕರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದಲೂ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ.

ಮಾರ್ಚ್ 15ರಿಂದ ಮುಂದಿನ ಮೇ 15ರವರೆಗೂ ಸುಮಾರು 60 ದಿನಗಳವರೆಗೆ ಹೈನುಗಾರರು ಉತ್ಪಾದಿಸುವ ಪ್ರತಿ ಲೀಟರ್ ಹಾಲಿಗೆ ಒಂದು ರೂಪಾಯಿ ಹೆಚ್ಚುವರಿಯಾಗಿ ಸಿಗಲಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ದಿನಕ್ಕೆ 4 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಇದರಿಂದಲೇ ಸಾವಿರಾರು ಮಂದಿ ಹೈನುಗಾರರ ಬದುಕು ಕೂಡ ಸಾಗುತ್ತಿದೆ. ಈ ಕೊಡುಗೆಯಾಗಿ ನೀಡುವ ಹಣವು ಸುಮಾರು ಎರಡೂವರೆ ಕೋಟಿ ರೂಪಾಯಿಗೂ ಹೆಚ್ಚು ಎನ್ನಲಾಗಿದೆ. ಈ ವಿಚಾರ ತಿಳಿದು ಜಿಲ್ಲೆಯ ಹೈನುಗಾರರಲ್ಲಿ ಸಂತಸ ಮನೆ ಮಾಡಿದೆ. ಇತ್ತೀಚೆಗೆ ವೈರಲ್ ಆಗಿದ್ದ ವಿಡಿಯೋದಲ್ಲಿ ಹಾಲಿನ ಡೈರಿಗಳ ಸಿಬ್ಬಂದಿ ಶುದ್ಧ ಹಾಲಿಗೆ ನೀರು ಮಿಶ್ರಣ ಮಾಡುತ್ತಿದ್ದು, ಈ ಮೂಲಕ ಹಾಲಿನ ಒಕ್ಕೂಟ ಹಾಗೂ ನಂದಿನಿ ಹಾಲಿನ ಗ್ರಾಹಕರಿಗೆ ವಂಚನೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಚಿಂತಾಮಣಿ ತಾಲ್ಲೂಕಿನ ಮಾಡಿಕೆರೆ ಹಾಲಿನ ಡೈರಿ ಸಿಬ್ಬಂದಿ ಹಾಲಿನ ಟ್ಯಾಂಕ್ಗೆ ನೀರು ಕಲಬೆರಕೆ ಮಾಡಿದ್ದಾರೆ ಎಂದು ದೂರಲಾಗಿತ್ತು. ಹಾಲಿನ ಟ್ಯಾಂಕ್ ಮೂಲಕ ಚಿಕ್ಕಬಳ್ಳಾಪುರ ಜಿಲ್ಲಾ ಡೈರಿಗೆ ಸರಬರಾಜು ಮಾಡುವಾಗ ಇವರು ಸಿಕ್ಕಿಬಿದ್ದಿದ್ದರು. ಡೈರಿ ಸಿಬ್ಬಂದಿ ಕಳ್ಳಾಟದ ವಿಡಿಯೋ ವೈರಲ್ ಆಗಿ ಹಿರಿಯ ಅಧಿಕಾರಿಗಳ ಗಮನಕ್ಕೂ ಬಂದಿತ್ತು. ಈ ವಿಚಾರ ಬಯಲಾಗುತ್ತಿದ್ದಂತೆ ಚಿಮುಲ್ ಎಚ್ಚೆತ್ತುಕೊಂಡು, ಡೈರಿಯ ಸಹಾಯಕ ಚೇತನ್ ಎಂಬಾತನನ್ನು ಕೆಲಸದಿಂದ ವಜಾ ಮಾಡಿತ್ತು. ಅಲ್ಲದೆ ಹಾಲಿಗೆ ನೀರು ಮಿಕ್ಸ್ ಮಾಡಿರುವ ಸಂಬಂಧ ತನಿಖೆ ನಡೆಸಲು ಸಮಿತಿಯೊಂದನ್ನೂ ರಚಿಸಿತ್ತು.