ಮಂಗಳೂರು: ಕರ್ನಾಟಕದ ಕರಾವಳಿ ಭಾಗದ ರೈಲು ಪ್ರಯಾಣಿಕರಿಗೆ ಭಾರತೀಯ ರೈಲ್ವೇ ಇಲಾಖೆಯಿಂದ ಸಿಹಿ ಸುದ್ದಿ ಬಂದಿದೆ. ಮಂಗಳೂರು ಸೆಂಟ್ರಲ್-ಮಡಗಾಂವ್ ವಿಶೇಷ ಎಕ್ಸ್ಪ್ರೆಸ್ ರೈಲು ದರವನ್ನು ಕಡಿಮೆ ಮಾಡಲಾಗಿದೆ. ಮಾರ್ಚ್ 1ರಿಂದಲೇ ಜಾರಿಗೆ ಬರುವಂತೆ ಈ ರೈಲು ಕಾಯ್ದಿರಿಸದ ರೈಲಾಗಿ ಸಂಚಾರವನ್ನು ನಡೆಸಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ರೈಲಿನ ದರ, ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಮಾರ್ಗದಲ್ಲಿ ವಂದೇ ಭಾರತ್ ರೈಲು ಸಂಚಾರವನ್ನು ನಡೆಸುತ್ತಿದೆ.

ಕೋವಿಡ್ ಸಮಯದಲ್ಲಿ ಎಲ್ಲಾ ಕಾಯ್ದಿರಿಸದ ರೈಲುಗಳ ಸಂಚಾರವನ್ನು ಭಾರತೀಯ ರೈಲ್ವೇ ರದ್ದುಗೊಳಿಸಿತ್ತು. ರೈಲುಗಳನ್ನು ಕಾಯ್ದಿರಿಸುವ ವಿಶೇಷ ಸೂಪರ್ ಫಾಸ್ಟ್ ರೈಲಾಗಿ ಪರಿವರ್ತನೆ ಮಾಡಿತ್ತು. ಇದರಿಂದಾಗಿ ದರಗಳು ಹೆಚ್ಚಾಗಿ, ಜನರಿಗೆ ತೊಂದರೆ ಆಗಿತ್ತು. ಕೋವಿಡ್ ಮುಗಿದು ಪರಿಸ್ಥಿತಿ ಸಹಜ ಸ್ಥಿತಿಗೆ ಬಂದರೂ ಸಹ ರೈಲ್ವೇ ಇಲಾಖೆ ಹಲವು ರೈಲುಗಳನ್ನು ಇನ್ನೂ ಕಾಯ್ದಿರಿಸದ ರೈಲಾಗಿ ಪರಿವರ್ತನೆ ಮಾಡಿಲ್ಲ. ಪ್ರಯಾಣಿಕರು ರೈಲನ್ನು ಕಾಯ್ದರಿಸದ ರೈಲಾಗಿ ಪರಿವರ್ತನೆ ಮಾಡಬೇಕು ಎಂದು ಬೇಡಿಕೆ ಇಡುತ್ತಲೇ ಇದ್ದರು. ಈಗ ಮಂಗಳೂರು-ಮಡಗಾಂವ್ ನಡುವೆ ವಂದೇ ಭಾರತ್ ರೈಲುಗಳ ಸಂಚಾರ ಆರಂಭವಾಗಿರುವ ಕಾರಣ ವಿಶೇಷ ಎಕ್ಸ್ಪ್ರೆಸ್ ರೈಲನ್ನು ಕಾಯ್ದಿರಿಸದ ರೈಲಾಗಿ ಪರಿವರ್ತನೆ ಮಾಡಲಾಗಿದೆ.
ಮಂಗಳೂರು ಸೆಂಟ್ರಲ್-ಮಡಗಾಂವ್-ಮಂಗಳೂರು ಸೆಂಟ್ರಲ್ ವಿಶೇಷ ಎಕ್ಸ್ಪ್ರೆಸ್ ರೈಲು ಸಂಖ್ಯೆ 56616/ 615 ಸಂಪೂರ್ಣ ಕಾಯ್ದಿರಿಸದ ರೈಲಾಗಿ ಸಂಚಾರವನ್ನು ನಡೆಸುತ್ತದೆ. ಕೊಂಕಣ ರೈಲ್ವೇ ಮತ್ತು ದಕ್ಷಿಣ ರೈಲ್ವೇ ಜಂಟಿಯಾಗಿ ಮಂಗಳೂರು-ಮಡಗಾಂವ್ ರೈಲನ್ನು ಸಂಪೂರ್ಣ ಕಾಯ್ದಿರಿಸದ ರೈಲಾಗಿ ಚಲಾಯಿಸಲು ಒಪ್ಪಿಗೆ ಕೊಟ್ಟಿವೆ. ಇದರಿಂದಾಗಿ ರೈಲಿನ ದರಗಳು ಶೇ 40ರಷ್ಟು ಕಡಿಮೆಯಾಗಲಿದೆ. ಈ ರೈಲು 18 ಬೋಗಿಯನ್ನು ಹೊಂದಿದೆ. ಗೋವಾ-ಮಂಗಳೂರು ಸಂಪರ್ಕಿಸುವ ಪ್ರಮುಖ ರೈಲು ಇದಾಗಿದೆ.
ವಿಶೇಷ ಎಕ್ಸ್ಪ್ರೆಸ್ ರೈಲು ಕಾಯ್ದರಿಸಿದ ರೈಲಾಗಿ ಪರಿವರ್ತನೆ ಆದರೆ ಆಗುವ ಒಂದೇ ಬದಲಾವಣೆ ದರಗಳ ಇಳಿಕೆ. ನಿಲ್ದಾಣ ಮತ್ತು ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ವಿಶೇಷ ಎಕ್ಸ್ಪ್ರೆಸ್ ರೈಲಿನಲ್ಲಿ ಕನಿಷ್ಠ ಪ್ರಯಾಣ ದರ 30 ರೂ. ಇದ್ದರೆ, ಪ್ಯಾಸೆಂಜರ್ ರೈಲಿನಲ್ಲಿ ಅದು 10 ರೂ. ಆಗುತ್ತದೆ.