
ಹಾವೇರಿ: ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಮಾಸೂರ ಗ್ರಾಮದ ರೈತ ಕುಟುಂಬದ 22 ವರ್ಷದ ಸ್ವಾತಿಬ್ಯಾಡಗಿ ಕೊಲೆಯಾಗಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಗಳು ವ್ಯಕ್ತವಾಗುತ್ತಲೇ ಇದೆ. ಈ ಸಂಬಂಧ ರಾಣೆಬೆನ್ನೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಹತ್ತಕ್ಕೂ ಹೆಚ್ಚು ನರ್ಸಿಂಗ್ ಮತ್ತು ಫಾರ್ಮಸಿ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ನಿಷ್ಪಕ್ಷಪಾತ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗುವಂತೆ ಕ್ರಮ ಕೈಗೊಳ್ಳಬೇಕು. ಸ್ವಾತಿ ಹತ್ಯೆಗೈದ ಆರೋಪಿಗಳಾದ ನಯಾಜ್, ದುರ್ಗಾಚಾರಿ, ವಿನಯ್ ಗಲ್ಲಿಗೇರಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕೊಲೆಯಾದ ಸ್ವಾತಿ ಗೆಳತಿ ಅನು ಪ್ರತಿಕ್ರಿಯಿಸಿ, ಕಳೆದ ಐದು ವರ್ಷಗಳ ಹಿಂದೆ ನನಗೆ ಸ್ವಾತಿ ಪರಿಚಯ. ಹಿಂದೂ ಸಂಘಟನೆಯ ಹೋರಾಟ ನೋಡಿ ಪರಿಚಯ ಮಾಡಿಕೊಂಡಿದ್ದಳು.ಅನೇಕ ಕಾರ್ಯಕ್ರಮದಲ್ಲಿ ನನ್ನ ಜೊತೆ ಭಾಗಿಯಾಗಿದ್ದಾಳೆ. ನರ್ಸಿಂಗ್ ಓದುತ್ತಿದ್ದ ವೇಳೆ ಸಂಘಟನೆಯ ಕೆಲಸದಿಂದ ಸ್ವಲ್ಪ ದೂರ ಉಳಿದಳು. ಹೋರಿ ಹಬ್ಬ ಅವಳಿಗೆ ಪಂಚಪ್ರಾಣ. ಪ್ರತೀ ಬಾರಿಯೂ ಹೋರಿ ಹಬ್ಬವನ್ನ ನೋಡಲು ಹೋಗುತ್ತಿದ್ದಳು. ಎಂದು ತನ್ನ ಗೆಳತಿ ಸ್ವಾತಿಯನ್ನು ನೆನೆದು ಕಣ್ಣೀರು ಹಾಕಿದ್ದಾರೆ.