
ತುಮಕೂರು: ತಾಲೂಕಿನ ಸೋರೆಕುಂಟೆಯಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ವಿಳಂಬವಾಗುತ್ತಿದೆ. ನಿರೀಕ್ಷಿಸಿದಂತೆ ಎರಡು ವರ್ಷದಲ್ಲಿ ಪೂರ್ಣಗೊಳ್ಳುವುದು ಕಷ್ಟ. ಇನ್ನೂ ಕ್ರಿಕೆಟ್ ಸ್ಟೇಡಿಯಂಗೆ ‘ಬೌಂಡರಿ’ಯೇ ನಿಗದಿಯಾಗಿಲ್ಲ. 2024ರ ಡಿಸೆಂಬರ್ 2ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಟೇಡಿಯಂಗೆ ಭೂಮಿಪೂಜೆ ನೆರವೇರಿಸುವ ಮೂಲಕ ತಮಕೂರು ಕ್ರಿಕೆಟಿಗರು, ಕ್ರಿಕೆಟ್ ಪ್ರೇಮಿಗಳ 6 ದಶಕದ ಕನಸು ಸಾಕಾರಕ್ಕೆ ಮುನ್ನುಡಿ ಬರೆದಿದ್ದರು. ಆ ವೇಳೆ ಕೆಎಸ್ಸಿಎ 2 ವರ್ಷದಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸುವ ವಿಶ್ವಾಸವೂ ವ್ಯಕ್ತವಾಗಿತ್ತು. ಆದರೆ ಇದೀಗ 4 ತಿಂಗಳು ಕಳೆಯುತ್ತಾ ಬಂದರೂ ಇನ್ನೂ ಸಂಬಂಧಿಸಿದ ಪ್ರಕ್ರಿಯೆಯೇ ಚುರುಕುಗೊಂಡಿಲ್ಲ. ಸರಕಾರ ಮತ್ತು ಕೆಎಸ್ಸಿಎ (ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಶನ್) ನಡುವೆ ಒಪ್ಪಂದ ಆಗಿದೆ. ಆದರೆ ಇನ್ನೂ ಕೆಐಎಡಿಬಿ ಸ್ಟೇಡಿಯಂನ ಬೌಂಡರಿಯನ್ನು ಗುರುತಿಸಿ, ಜಾಗವನ್ನು ಸಮತಟ್ಟು ಮಾಡಿಕೊಡಬೇಕಿದೆ. ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಟೆಂಡರ್ ಕರೆದಿದ್ದು, ಪ್ರಕ್ರಿಯೆ ಹಂತದಲ್ಲಿದೆ. ಅಷ್ಟರೊಳಗೆ ಕೆಐಎಡಿಬಿ ತನ್ನ ಕೆಲಸ ಮುಗಿಸಿ ಕೊಡಬೇಕು. ಕ್ರಿಕೆಟ್ ಸ್ಟೇಡಿಯಂನ ವಿನ್ಯಾಸ ಇನ್ನೂ ಸಿದ್ಧವಾಗಿಲ್ಲ. ಕೆಎಸ್ಸಿಎ ವಿನ್ಯಾಸ ಮಾಡಿಸಿ, ನಿರ್ಮಾಣಕ್ಕೆ ಕೈಹಾಕಬೇಕಿದೆ. ಮಾ.22ರಿಂದ ಮೇ 25ರವರೆಗೆ ಐಪಿಎಲ್ ಹಬ್ಬ. ಸಹಜವಾಗಿ ಈ ಸಂಭ್ರಮ ಮತ್ತು ಕೆಲಸದ ನಡುವೆ ಕ್ರಿಕೆಟ್ ಸ್ಟೇಡಿಯಂ ಪ್ರಕ್ರಿಯೆ ನಿರೀಕ್ಷಿಸಲು ಸಾಧ್ಯವಿಲ್ಲ.

j3tvkannada
ಕೆಎಸ್ಸಿಗೆ 20-25 ಪಿಚ್, ಒಳಾಂಗಣ ಕ್ರೀಡಾಂಗಣ, ಕ್ರಿಕೆಟ್ ಅಕಾಡೆಮಿ ಸ್ಥಾಪಿಸುವ ಯೋಜನೆಯಿದೆ. ಆಸನ ವ್ಯವಸ್ಥೆ, ಪ್ರವೇಶದ್ವಾರಗಳು ಸೇರಿದಂತೆ ಇನ್ನಿತರ ಸಮಗ್ರ ವಿನ್ಯಾಸ ರೂಪಿಸಬೇಕಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ನಡೆಸುವ ಉದ್ದೇಶವೂ ಕೆಎಸ್ಸಿಎಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣವಾದರೆ ಅಂತಾರಾಷ್ಟ್ರೀಯ ಪಂದ್ಯಾವಳಿಗಳು ನಡೆಸಲು ಪೂರಕ ವಾತಾವರಣವೂ ಸೃಷ್ಠಿಯಾಗಬೇಕು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಸ್ತಾಪ ಫಲಪ್ರದವಾದರೆ ಮಾತ್ರ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳನ್ನು ಶೀಘ್ರ ನಿರೀಕ್ಷಿಸಬಹುದು. 1958ರಲ್ಲಿ ಡಾ.ಜಯರಾಂರಾವ್, ಸೀತಾರಾಮ್, ರಾಮಕೃಷ್ಣ ರಾವ್ ಅವರ ನೇತೃತ್ವದಲ್ಲಿ ತುಮಕೂರು ಅಕೇಷನಲ್ಸ್ ಕ್ಲಬ್ ಆರಂಭವಾಯಿತು. ಈ ಕ್ಲಬ್ ಆಟಗಾರರಾಗಿದ್ದ ಜಿ.ವಿ.ಕುಮಾರ್ ರಣಜಿ, ದೇವದರ್ ಟ್ರೋಫಿ, ದಿಲೀಪ್ ಟ್ರೋಫಿ, ಭಾರತ ಇತರೆ ತಂಡವನ್ನು ಹಾಗೂ ಸತೀಶ್ ಚಂದ್ರ, ನರೇಂದ್ರ ತಿರು ಮೊದಲಾದವರು ರಾಜ್ಯವನ್ನು ಪ್ರತಿನಿಧಿಸಿದ್ದಾರೆ. ರಾಜ್ಯ ಬಿ ತಂಡದ ನಾಯಕರೂ ಆಗಿದ್ದರು. ಆರ್. ವಿನಯ್ ಕುಮಾರ್ ತುಮಕೂರು ಝೋನ್ನಿಂದ ಟೀಮ್ ಇಂಡಿಯಾಕ್ಕೆ ಆಡಿದ್ದಾರೆ. ಇನ್ನುಳಿದಂತೆ ಇದುವರೆಗೆ ಯಾರೂ ತುಮಕೂರು ಝೋನ್ನಿಂದ ಭಾರತದ ಪರ ಆಡಲು ಅವಕಾಶ ಸಿಕ್ಕಿಲ್ಲ. ತುಮಕೂರಲ್ಲಿ ಸ್ಟೇಡಿಯಂ ನಿರ್ಮಾಣವಾಗುವುದರಿಂದ ತುಮಕೂರು ಮಾತ್ರವಲ್ಲದೆ ಚಿತ್ರದುರ್ಗ, ದಾವಣಗೆರೆ ಒಳಗೊಂಡ ತುಮಕೂರು ಝೋನ್ ಯುವ ಕ್ರಿಕೆಟಿಗರಿಗೆ ಅನುಕೂಲವಾಗಲಿದೆ.