
ಬಾಗಲಕೋಟೆ : ಕಳ್ಳರ ಕಾಟದಿಂದ ರಕ್ಷಿಸಿಕೊಳ್ಳಲು ಕುರಿಗಾಹಿಗಳ ಸ್ವರಕ್ಷಣೆಗಾಗಿ ಬಂದೂಕು ತರಬೇತಿ ನೀಡಲು ಬಾಗಲಕೋಟೆ ಜಿಲ್ಲೆಯ ಪೊಲೀಸ್ ಇಲಾಖೆ ಮುಂದಾಗಿದ್ದು, ಇದು ರಾಜ್ಯದಲ್ಲೇ ಮೊದಲ ಪ್ರಯೋಗ. ಕಳ್ಳರ ಕಣ್ಣು ಲಕ್ಷಾಂತರ ರೂ. ಬೆಲೆಬಾಳುವ ಕುರಿಗಳ ಮೇಲೆ ಬಿದ್ದಿದ್ದು ಕದಿಯಲು ದಾಳಿ ನಡೆಸುತ್ತಿದ್ದಾರೆ. ಕುರಿಗಾಹಿಗಳ ಹಿತರಕ್ಷಣಾ ಕಾಯಿದೆ ಜಾರಿಗೊಳಿಸಿ ಎಂದು ರಾಜ್ಯದಲ್ಲಿರುವ ಲಕ್ಷಾಂತರ ಕುರಿಗಾಹಿಗಳು ಹಾಗೂ ಆ ಸಮುದಾಯದ ಮುಖಂಡರು ಸರಕಾರದ ಮುಂದೆ ಬೇಡಿಕೆ ಇಡುತ್ತ ಬಂದಿರುವ ಮಧ್ಯೆ ಜಿಲ್ಲೆಯ ಪೊಲೀಸ್ ಇಲಾಖೆ ರಾಜ್ಯದಲ್ಲೇ ಮೊದಲ ಬಾರಿಗೆ ಬಂದೂಕು ತರಬೇತಿ ನೀಡಲು ಮುಂದಾಗಿದೆ. ಇದಕ್ಕಾಗಿ ಅರ್ಜಿಯನ್ನೂ ಕರೆಯಲಾಗಿದೆ.

ಬಾದಾಮಿ ತಾಲೂಕಿನ ಉಗಲವಾಟದಲ್ಲಿ ಮಾರ್ಚ್ 9ರಂದು ಕುರಿಗಾಹಿ ಶರಣಪ್ಪ ಜಮ್ಮನಕಟ್ಟಿ ಅವರು ತಮ್ಮ ದೊಡ್ಡಿಯ ಬಳಿ ಕುರಿ ಕಾಯುತ್ತಿರುವಾಗ ಮೂವರು ಕಳ್ಳರು ದಾಳಿ ನಡೆಸಿದ್ದರು. ಕಳ್ಳತನ ತಡೆಯಲು ಯತ್ನಿಸಿದ ಅವರ ತಲೆಗೆ ಕಲ್ಲಿನಿಂದ ಜಜ್ಜಿ ಘೋರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು. ಈ ಘಟನೆ ಜಿಲ್ಲೆಯಾದ್ಯಂತ ಪ್ರತಿಭಟನೆಗೆ ಕಾರಣವಾಗಿತ್ತು. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ, ಕುರಿಗಾಹಿಗಳಿಗೆ ರಕ್ಷಣೆ ಒದಗಿಸಿ ಎಂದು ನಾನಾ ಸಂಘಟನೆಗಳು ಒತ್ತಾಯಿಸಿದ್ದವು. ಅಲ್ಲದೇ ಕ್ಷೇತ್ರದ ಶಾಸಕ ಭೀಮಸೇನ ಚಿಮ್ಮನಕಟ್ಟಿ ಆರೋಪಿಗಳ ಬಂಧನಕ್ಕೆ ಒತ್ತಡ ಹೇರಿದ್ದರು. ನಂತರ ಪೊಲೀಸರು ಮೂವರು ಕಳ್ಳರನ್ನು ಬಂಧಿಸಿದ್ದರು.
ಪ್ರತಿ ದಿನ ಗುಡ್ಡಗಾಡು ಸೇರಿದಂತೆ ನಾನಾ ಕಡೆ ಕುರಿ ಮೇಯಿಸಲು ತೆರಳುವ ಕುರಿಗಾಹಿಗಳು ಹಲವು ಸಮಸ್ಯೆ ಎದುರಿಸುತ್ತಾರೆ. ಕಳ್ಳರ ಕಣ್ಣು ಲಕ್ಷಾಂತರ ರೂ. ಬೆಲೆಬಾಳುವ ಕುರಿಗಳ ಮೇಲೆ ಬಿದ್ದಿದ್ದು ಕದಿಯಲು ದಾಳಿ ನಡೆಸುತ್ತಿದ್ದಾರೆ. ಒಬ್ಬೊಬ್ಬರೇ ಕುರಿ ಮೇಯಿಸುವಾಗ ದಾಳಿ ನಡೆಸಿದರೆ ಜೀವ ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗುತ್ತದೆ. ಜೀವ ಭಯ ಅವರನ್ನು ಕಾಡುತ್ತಿದೆ.

ಶರಣಪ್ಪ ಪ್ರಕರಣದ ನಂತರ ಕುರಿಗಾಹಿಗಳಿಗೆ ಸ್ವರಕ್ಷಣೆ ಮಾಡಿಕೊಳ್ಳಲು ಕುರಿಗಾಹಿಗಳಿಗೂ ಬಂದೂಕು ತರಬೇತಿ ಕೊಡಬೇಕು ಎಂಬ ಚಿಂತನೆ ಎಸ್ಪಿ ಅಮರನಾಥ ರೆಡ್ಡಿ ಅವರಿಗೆ ಹೊಳೆದಿದೆ. ಅದಕ್ಕಾಗಿ ಅವರು ವರ್ಷಕ್ಕೊಮ್ಮೆ ತರಬೇತಿ ನೀಡಲು ಪಡೆಯಲು ಕುರಿಗಾಹಿಗಳಿಗೆ ಸಲಹೆ ನೀಡಿದ್ದಾರೆ. ಏ.7 ರಿಂದ 13ರವರೆಗೆ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯಲ್ಲಿ ಶುರುವಾಗಲಿದೆ.
‘ಶರಣಪ್ಪ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಕುರಿಗಾಹಿಗಳಿಗೆ ಬಂದೂಕು ತರಬೇತಿ ಶಿಬಿರ ಆಯೋಜಿಸಲಾಗುತ್ತಿದೆ. ಆಸಕ್ತಿಯುಳ್ಳ ಎಲ್ಲರಿಗೂ ತರಬೇತಿ ಕೊಡುತ್ತೇವೆ. ತರಬೇತಿ ಪೂರ್ಣಗೊಂಡ ನಂತರ ಲೈಸೆನ್ಸ್ ಪಡೆದು ಬಂದೂಕು ಖರೀದಿಸಬಹುದುʼ ಎಂದು ಬಾಗಲಕೋಟೆ ಎಸ್ಪಿ ಅಮರನಾಥ ರೆಡ್ಡಿ ತಿಳಿಸಿದ್ದಾರೆ.