
ಹಾಸನ: ಬೇಲೂರು ಸುತ್ತಮುತ್ತ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ಮಾಡಲಾಗಿದ್ದು, ಸತತ ನಾಲ್ಕು ಗಂಟೆಗಳ ಕಾರ್ಯಾಚರಣೆಯ ನಂತರ ಒಂಟಿಸಲಗವನ್ನು ಜಿಲ್ಲೆಯ ಬೇಲೂರು ತಾಲೂಕಿನ ಬಿಕ್ಕೋಡು ಬಳಿಯ ಎಸ್ಟೇಟ್ ನಲ್ಲಿ ಸೆರೆ ಹಿಡಿಯಲಾಗಿದೆ.
ಮಲೆನಾಡು ಭಾಗದಲ್ಲಿ ಕಾಡಾನೆಗಳ ದಾಳಿಯ ಪ್ರಮಾಣ ಹೆಚ್ಚಾದ ಹಿನ್ನಲೆಯಲ್ಲಿ ಸರ್ಕಾರ ಮೂರು ಕಾಡಾನೆಗಳ, ಸೆರೆಗೆ ಅನುಮತಿ ನೀಡಿದೆ. ಈಗಾಗಲೇ ಅಧಿಕೃತ ಕಾರ್ಯಾಚರಣೆ ಪ್ರಾರಂಭವಾಗಿದ್ದು, ಅದರಲ್ಲಿ ಒಂದು ಪುಂಡಾನೆಗೆ ಅರವಳಿಕೆ ಮದ್ದು ನೀಡಿ ಅರಣ್ಯ ಸಿಬ್ಬಂದಿ ಸೆರೆ ಹಿಡಿದಿದ್ದಾರೆ. ಕ್ಯಾಪ್ಟನ್ ಪ್ರಶಾಂತ್ ನೇತೃತ್ವದಲ್ಲಿ ನಡೆದ ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ, ಬೇಲೂರು ತಾಲ್ಲೂಕಿನ ಬಿಟ್ಟೋಡು ಕ್ಯಾಂಪಿಗೆ ಮಾ.15ರಂದು ಮತ್ತಿಗೋಡು ಮತ್ತು ದುಬಾರೆ ಆನೆ ಶಿಬಿರಗಳಿಂದ ಏಳು ಸಾಕಾನೆಗಳು ಆಗಮಿಸಿದ್ದವು. ಅರಣ್ಯ ಇಲಾಖೆಯ ಭೀಮ, ಕಂಜನ್, ಪ್ರಶಾಂತ, ಹರ್ಷ, ಧನಂಜಯ, ಮಹೇಂದ್ರ ಮತ್ತು ಏಕಲವ್ಯ ಭಾಗವಹಿಸಿದ್ದವು. ಕಾರ್ಯಾಚರಣೆಗೂ ಮುನ್ನ, ಸ್ಥಳೀಯ ಶಾಸಕ ಎಚ್.ಕೆ. ಸುರೇಶ್, ತಹಸೀಲ್ದಾರ್ ಮಮತಾ, ಮತ್ತು ಅರಣ್ಯಾಧಿಕಾರಿಗಳ ಉಪಸ್ಥಿತಿಯಲ್ಲಿ ಪೂಜೆ ಸಲ್ಲಿಸಲಾಯಿತು.