
ಬೆಂಗಳೂರು : ಉದ್ಯಾನ ನಗರಿ ಬೆಂಗಳೂರಿನಲ್ಲಿ ಸೈಟು ಕೊಳ್ಳಲು ಆಲೋಚನೆ ನಡೆಸುತ್ತಿರುವ ಜನರಿಗೆ ಸಿಹಿಸುದ್ದಿ ನೀಡಿದೆ. ಪ್ರತಿಷ್ಠಿತ ಬಡಾವಣೆಯೊಂದರ ನಿರ್ಮಾಣ ಕಾರ್ಯ ಅಂತಿಮ ಹಂತಕ್ಕೆ ತಲುಪಿದ್ದು, ಸುಮಾರು 30 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲು ಬಿಡಿಎ ತಯಾರಿ ನಡೆಸಿದೆ. ಬಡಾವಣೆ ಭೂ ಸ್ವಾಧೀನದ ಕುರಿತ ವಿವಾದ ಹೈಕೋರ್ಟ್ನಲ್ಲಿದ್ದು, ಅಂತಿಮ ಆದೇಶಕ್ಕಾಗಿ ಕಾಯಲಾಗುತ್ತಿದೆ.
ಬಿಡಿಎ ಬೆಂಗಳೂರು ನಗರದ ಬಹು ನಿರೀಕ್ಷಿತ ಡಾ. ಶಿವರಾಮ ಕಾರಂತ ಬಡಾವಣೆಯ ಕಾಮಗಾರಿಗಳನ್ನು ಚುರುಕುಗೊಳಿಸಿದೆ. ಶೇ 40ರಷ್ಟು ಕಾಮಗಾರಿ ಬಾಕಿ ಇದ್ದು, ಇನ್ನು ಮೂರು ತಿಂಗಳಿನಲ್ಲಿ ಅಂತ್ಯವಾಗಲಿದೆ. ಕೋರ್ಟ್ ಒಪ್ಪಿಗೆ ನೀಡಿದರೆ ಈ ವರ್ಷವೇ ಶಿವರಾಮ ಕಾರಂತ ಬಡಾವಣೆಯ ನಿವೇಶನಗಳನ್ನು ಬಿಡಿಎ ಹಂಚಿಕೆ ಮಾಡಲಿದೆ.
ಬೆಂಗಳೂರು ನಗರದ ಉತ್ತರ ಭಾಗದಲ್ಲಿ ಬಿಡಿಎ ಡಾ. ಶಿವರಾಮ ಕಾರಂತ ಬಡಾವಣೆಯನ್ನು ನಿರ್ಮಾಣ ಮಾಡಿದೆ. 2024ರ ಆಗಸ್ಟ್ನಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಶಿವರಾಮ ಕಾರಂತ ಬಡಾವಣೆಯ ಕಾಮಗಾರಿಗಳನ್ನು ವೀಕ್ಷಣೆ ಮಾಡಿ, ಅಧಿಕಾರಿಗಳಿಗೆ ಹಲವು ಸೂಚನೆಗಳನ್ನು ನೀಡಿದ್ದರು.

ಡಾ. ಶಿವರಾಮ ಕಾರಂತ ಬಡಾವಣೆಯಲ್ಲಿ ಸೈಟು ಕೊಳ್ಳಬೇಕು ಎಂದು ನಗರದ ಜನರು ಕಾಯುತ್ತಿದ್ದಾರೆ. ಕೆಂಪೇಗೌಡ ಬಡಾವಣೆಯ ಬಳಿಕ ಬಿಡಿಎ ನಗರದಲ್ಲಿ ಯಾವುದೇ ಬಡಾವಣೆಯ ಸೈಟುಗಳನ್ನು ಹಂಚಿಕೆ ಮಾಡಿಲ್ಲ. ಭೂ ಸ್ವಾಧೀನ ಸೇರಿದಂತೆ ಈ ಬಡಾವಣೆಯಲ್ಲಿ ಹಲವಾರು ಸಮಸ್ಯೆಗಳಿವೆ. ಇವುಗಳನ್ನು ಪರಿಹಾರ ಮಾಡಿದ ಬಳಿಕ ಬಿಡಿಎ ನಿವೇಶನಗಳನ್ನು ಹಂಚಿಕೆ ಮಾಡಬೇಕಿದೆ.
ಬಿಡಿಎ ಅಧ್ಯಕ್ಷ ಎನ್. ಎ. ಹ್ಯಾರಿಸ್ ಮಾತನಾಡಿ, “ಶಿವರಾಮ ಕಾರಂತ ಬಡಾವಣೆಯಲ್ಲಿ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿದ್ದು, ಸಣ್ಣಪುಟ್ಟ ಕೆಲಸಗಳು ಮಾತ್ರ ಬಾಕಿ ಇದೆ. ಈಗ ಸೈಟುಗಳನ್ನು ಹಂಚಿಕೆ ಮಾಡಲು ಯಾವುದೇ ಅಡ್ಡಿ ಇಲ್ಲ. ಕೋರ್ಟ್ ಆದೇಶದ ಬಳಿಕ ನಿವೇಶನಗಳ ಹಂಚಿಕೆಗೆ ಅರ್ಜಿ ಕರೆಯಲಾಗುತ್ತದೆ” ಎಂದು ಹೇಳಿದ್ದಾರೆ.
ಡಾ. ಶಿವರಾಮ ಕಾರಂತ ಬಡಾವಣೆಯಲ್ಲಿ ಒಟ್ಟು 30 ಸಾವಿರಕ್ಕೂ ಅಧಿಕ ನಿವೇಶನಗಳಿವೆ. ಆದರೆ ಬಡಾವಣೆಗೆ ಭೂಮಿ ನೀಡಿದ ರೈತರಿಗೆ 17 ರಿಂದ 18 ಸಾವಿರ ಅಭಿವೃದ್ಧಿಗೊಂಡ ಸೈಟುಗಳನ್ನು ಹಂಚಿಕೆ ಮಾಡಬೇಕು. ಇವುಗಳಲ್ಲಿ 4 ಸಾವಿರಕ್ಕೂ ಅಧಿಕ ಮೂಲೆ ನಿವೇಶನಗಳಿವೆ. ಬಿಡಿಎ ಈ ಹಿಂದೆ ನಿರ್ಮಾಣ ಮಾಡಿದ್ದ ಇತರ ಬಡಾವಣೆಗಿಂತ ಈ ಬಡಾವಣೆಯಲ್ಲಿ ಸೈಟುಗಳ ಬೆಲೆಗಳು ಹೆಚ್ಚಾಗಿ ಇರಲಿವೆ ಎಂದು ಅಂದಾಜಿಸಲಾಗಿದೆ.
ಉತ್ತರ ಬೆಂಗಳೂರಿನ ದೊಡ್ಡಬಳ್ಳಾಪುರ ಹೆಸರಘಟ್ಟ ನಡುವಿನ 17 ಹಳ್ಳಿಗಳಲ್ಲಿ ಶಿವರಾಮ ಕಾರಂತ ಬಡಾವಣೆಯು ನಿರ್ಮಾಣವಾಗಿದೆ. ಗಾಣಿಗಾರಹಳ್ಳಿ, ಕಾಳತಮ್ಮನಹಳ್ಳಿ, ಲಕ್ಷ್ಮೀಪುರ, ಸೋಮಶೆಟ್ಟಿಹಳ್ಳಿ, ಕೆಂಪಾಪುರ, ರಾಮಗೊಂಡನಹಳ್ಳಿ, ಹಾರೋಹಳ್ಳಿ, ದೊಡ್ಡಬೆಟ್ಟಹಳ್ಳಿ, ವಡೇರಹಳ್ಳಿ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಈ ಬಡಾವಣೆ ಇದೆ. 2008ರಲ್ಲಿ ಈ ಬಡಾವಣೆ ನಿರ್ಮಾಣಕ್ಕೆ 3,546 ಎಕರೆ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲಾಯಿತು. 2,782 ಎಕರೆ ಭೂಮಿಯನ್ನು ನಿವೇಶನಗಳನ್ನು ನಿರ್ಮಾಣ ಮಾಡಲಾಗಿದೆ. ಬಡಾವಣೆಗೆ ಮೂಲ ಸೌಕರ್ಯ, ಖಾಲಿ ಜಾಗ, ಸಿಎ ನಿವೇಶನಗಳು ಇಲ್ಲಿವೆ. ಈ ಬಡಾವಣೆಯಲ್ಲಿ 30*40, 40*60 ಅಳವತೆಯ ನಿವೇಶನಗಳು ಹೆಚ್ಚಾಗಿರಲಿವೆ. ಕೋರ್ಟ್ ಆದೇಶದ ಬಳಿಕ ಡಾ. ಶಿವರಾಮ ಕಾರಂತ ಬಡಾವಣೆಯ ಸೈಟುಗಳನ್ನು ಹಂಚಿಕೆ ಮಾಡಲಾಗುತ್ತದೆ. ಆದ್ದರಿಂದ ಕಾಮಗಾರಿಯನ್ನು ಪೂರ್ಣಗೊಳಿಸಲು ಬಿಡಿಎ ಇಂಜಿನಿಯರ್ಗಳಿಗೆ ಸೂಚನೆ ನೀಡಿದೆ. ಸುಮಾರು 30 ಸಾವಿರ ನಿವೇಶಗಳನ್ನು ಏಕಕಾಲದಲ್ಲಿ ಹರಾಜು ಹಾಕಲಾಗುತ್ತದೆಯೇ? ಅಥವ ಹಂತ ಹಂತವಾಗಿ ಹಂಚಿಕೆ ಮಾಡಲಾಗುತ್ತದೆಯೇ? ಕಾದು ನೋಡಬೇಕಿದೆ. ಬಡಾವಣೆಯ ನಿವೇಶನಗಳಿಗೆ ಒಂದು ಚದರ ಅಡಿಗೆ 4,900 ರೂ. ದರ ನಿಗದಿ ಮಾಡಲಾಗುತ್ತದೆ ಎಂಬ ಮಾಹಿತಿ ಇದೆ.