
ಶಿವಮೊಗ್ಗ: ನನ್ನ ಮತ್ತು ಯಡಿಯೂರಪ್ಪ ಅವರ ಸಂಬಂಧ ಅಣ್ಣ-ತಮ್ಮರಂತೆ. ಅವರು ನನಗೆ ಹಿರಿಯಣ್ಣನಿದ್ದಂತೆ. ಇಲ್ಲಿ ಸ್ನೇಹ, ವಿಶ್ವಾಸಗಳು ಬೇರೆ ರಾಜಕಾರಣವೇ ಬೇರೆ ಬೇರೆ ಎಂದು ಮಾಜಿ ಡಿ ಸಿ ಎಂ ಕೆ.ಎಸ್.ಈಶ್ವರಪ್ಪ ಹೇಳಿದರು. ಗುಂಡಪ್ಪ ಶೆಡ್ನಲ್ಲಿರುವ ಈಶ್ವರಪ್ಪನವರ ನಿವಾಸದಲ್ಲಿ ಬುಧವಾರ ಆಯೋಜಿಸಿದ್ದ ವಿವಿಧ ಪಕ್ಷಗಳಿಂದ ರಾಷ್ಟ್ರ ಭಕ್ತರ ಬಳಗಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

j3tvkannada.in
ನಾನು ಅನಾರೋಗ್ಯದಲ್ಲಿದ್ದಾಗ ದೂರವಾಣಿ ಕರೆ ಮಾಡಿ ಯಡಿಯೂರಪ್ಪ ಕುಶಲೋಪರಿ ವಿಚಾರಿಸಿದ್ದರು. ಅವರ ಮೊಮ್ಮಗನ ವಿವಾಹಕ್ಕೂ ನಾನು ಹೋಗಿ ಶುಭ ಹಾರೈಸಿದ್ದೇನೆ. ಹಾಗೆಂದ ಮಾತ್ರಕ್ಕೆ ನಾನು ಬಿಜೆಪಿ ಸೇರಿದ್ದೇನೆ ಎಂದರ್ಥವಲ್ಲ. ಒಂದು ಕುಟುಂಬಕ್ಕೆ ಒಂದು ಹುದ್ದೆ ಎಂಬುದು ಮೋದಿ ಅವರ ನಿಯಮ. ಆದರೆ, ರಾಜ್ಯಾಧ್ಯಕ್ಷರು, ಸಂಸದರು, ಶಾಸಕರು ಎಲ್ಲವೂ ಒಂದೇ ಕುಟುಂಬಕ್ಕೆ ನೀಡಿದರೆ ಹೇಗೆ? ಇದರಿಂದ ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿದವರಿಗೆ ನ್ಯಾಯ ಸಿಗುವುದಿಲ್ಲ. ಈ ವಿಚಾರವಾಗಿ ರಾಜ್ಯದಲ್ಲಿರುವ ನೊಂದ ಕಾರ್ಯಕರ್ತರು ನನ್ನೊಂದಿಗೆ ಕೈ ಜೋಡಿಸಲು ಮುಂದಾಗಿದ್ದಾರೆ ಎಂದರು.
ಇವತ್ತು ಬಿಜೆಪಿ ಹಿಂದುತ್ವವನ್ನು ಮರೆತು ಬಿಟ್ಟಿದೆ. ಈ ಪಕ್ಷದ ಸಮಸ್ಯೆ ಕಲುಷಿತ ವ್ಯವಸ್ಥೆಯಾಗಿದ್ದು, ಶುದ್ಧೀಕರಣ ಆದ ಮೇಲೆ ನಾನು ಬಿಜೆಪಿಗೆ ಸೇರುತ್ತೇನೆ. ಯಾರಿಗೂ ನಾನು ಟಿಕೆಟ್ ನೀಡುವ ಭರವಸೆ ನೀಡಿಲ್ಲ. ನಾನು ಶಾಸಕನಾಗಿದ್ದಾಗ, ಪ್ರತಿಯೊಂದು ಸಮಾಜಕ್ಕೂ ಅನುದಾನ ನೀಡಿದ್ದೆ. ಯಾವುದೇ ಒಂದು ಸಮಾಜಕ್ಕೆ ಈಶ್ವರಪ್ಪ ಸಹಾಯ ಮಾಡಿಲ್ಲ ಎನ್ನುವುದಾದರೆ ನಾನು ರಾಜಕೀಯ ನಿವೃತ್ತಿಗೆ ಸಿದ್ಧ ಎಂದು ಹೇಳಿದರು. ಪ್ರಮುಖರಾದ ಕೆ.ಈ. ಕಾಂತೇಶ್, ಎಂ. ಶಂಕರ್, ಇ. ವಿಶ್ವಾಸ್, ಸುವರ್ಣಾ ಶಂಕರ್, ಸುನೀತಾ ನಾಗರಾಜ್ ಇತರರಿದ್ದರು.