
ಕೋಲಾರ: ಜಿಲ್ಲೆಯ ಮಾಲೂರು ತಾಲೂಕಿನಲ್ಲಿ 30ಕ್ಕೂ ಹೆಚ್ಚು ಕ್ರಷರ್ ಗಳು ಕಾರ್ಯ ನಿರ್ವಹಣೆ ಮಾಡುತ್ತಿವೆ. ಸಹಜವಾಗಿ ಕ್ರಷರ್ ಗಳು ಕಾರ್ಯ ನಿರ್ವಹಿಸುವ ಸ್ಥಳದಲ್ಲಿ ಧೂಳಿನ ಸಮಸ್ಯೆ ಉಂಟಾಗುತ್ತೆ. ಅದರಿಂದ ಸಾರ್ವಜನಿಕರಿಗೆ ಬಹಳಷ್ಟು ಕಿರಿಕಿರಿಯಾಗುತ್ತದೆ. ಅದರಲ್ಲೂ ರಸ್ತೆ ಮಾರ್ಗದಲ್ಲಿನ ಧೂಳಿನ ಸಮಸ್ಯೆಯಿಂದಾಗಿ, ವಾಹನ ಸವಾರರು ನಿತ್ಯ ಕಿರಿಕಿರಿ ಎದುರಿಸಬೇಕಾಗಿದೆ. ಹೀಗೆ ರಸ್ತೆಯಲ್ಲಿನ ಧೂಳಿನ ಸಮಸ್ಯೆಗೆ ಶಾಶ್ವತವಾಗಿ ಮುಕ್ತಿ ಕಲ್ಪಿಸುವ ನಿಟ್ಟಿನಲ್ಲಿ ಮಾಲೂರು ತಾಲೂಕಿನ ಮಿಟ್ಟಿಗಾನಹಳ್ಳಿ ಗ್ರಾಮದ ಬಳಿ ಐಶ್ವರ್ಯ ಸ್ಟೋನ್ ಕ್ರಷರ್ ಮಾಲೀಕ ವೆಂಕಟೇಶ್ ಗೌಡ ಅವರು ವಿನೂತನ ಪ್ರಯತ್ನ ಮಾಡಿದ್ದಾರೆ.

j3tvkannada
ಮಿಟ್ಟಗಾನಹಳ್ಳಿ ಸಮೀಪ ಹಲವು ಕ್ರಷರ್ ಗಳು ಕಾರ್ಯ ನಿರ್ವಹಣೆ ಮಾಡುತ್ತಿವೆ. ಆದರೆ ಇತ್ತೀಚಿಗೆ ನಿರ್ಮಾಣ ಮಾಡಿರುವ ಮಣ್ಣಿನ ರಸ್ತೆಯು, ಬಂಗಾರಪೇಟೆ ಹಾಗೂ ಕೋಲಾರ ಮಾರ್ಗದ ರಸ್ತೆಗೆ ಸಂಪರ್ಕ ಕಲ್ಪಿಸಲಿದ್ದು, ಇದೇ ಮಣ್ಣಿನ ರಸ್ತೆಯಲ್ಲಿ ಹೆಚ್ಚಾಗಿ ಟಿಪ್ಪರ್ ಗಳು ಓಡಾಡುವ ಹಿನ್ನೆಲೆಯಲ್ಲಿ, ಧೂಳು ರಸ್ತೆ ಕಡೆಗೆ ಆವರಿಸಿ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಇದಕ್ಕಾಗಿ ಧೂಳಿನ ಸಮಸ್ಯೆ ಮುಕ್ತಿಗೊಳಿಸಲು, ಪ್ರತಿನಿತ್ಯ ಟ್ಯಾಂಕರ್ ನಿಂದ ನೀರನ್ನು ಆಗಾಗ್ಗೆ ಹಾಕುತ್ತಿದ್ದರು. ಆದರೆ ಬಿಸಿಲಿನ ಪ್ರತಾಪಕ್ಕೆ ನೀರು ಕೆಲವೇ ನಿಮಿಷಗಳಲ್ಲಿ ಆವಿಯಾಗುತ್ತಿತ್ತು. ಬಳಿಕ ಮತ್ತದೇ ಧೂಳಿನ ಕಿರಿಕಿರಿ ಕಾಡುತ್ತಿತ್ತು, ಹಾಗಾಗಿ ಇದನ್ನು ಗಮನಿಸಿದ ಐಶ್ವರ್ಯ ಸ್ಟೋನ್ ಕ್ರಷರ್ ಮಾಲಿಕ ವೆಂಕಟೇಶ್ ಗೌಡ ಅವರು ರಸ್ತೆಯ ಎರಡು ಬದಿಯಲ್ಲಿ ಶಾಶ್ವತವಾಗಿ ನೀರನ್ನು ಚುಮುಕಿಸುವ ವಾಟರ್ ಸ್ಪ್ರಿಂಕ್ಲರ್ ಗಳನ್ನು ಅಳವಡಿಸಿದ್ದಾರೆ.
ಇದೀಗ ಟಿಪ್ಪರ್ ಗಳು ಓಡಾಡುವ ಎಲ್ಲಾ ಸಮಯದಲ್ಲೂ ರಸ್ತೆಯ ಮೇಲೆ ನೀರು ಚಿಮುಕಿಸುವ ಕೆಲಸ ಆರಂಭಿಸಿದ್ದಾರೆ. ಇದರಿಂದಾಗಿ ಆ ಭಾಗದ ರಸ್ತೆ ಧೂಳಿನ ಸಮಸ್ಯೆ ಶಾಶ್ವತವಾಗಿ ದೂರವಾದಂತಾಗಿದೆ. ಮಿಟ್ಟಗಾನಹಳ್ಳಿ ಕ್ರಷರ್ ರಸ್ತೆಯಿಂದ ಬಂಗಾರಪೇಟೆ ಮುಖ್ಯ ರಸ್ತೆ ವರೆಗೂ ಧೂಳಿನ ಸಮಸ್ಯೆ ನಿವಾರಿಸಲು, ಸುಮಾರು 20ಕ್ಕೂ ಹೆಚ್ಚು ವಾಟರ್ ಸ್ಪ್ರಿಂಕ್ಲರ್ ಗಳನ್ನು ಹಾಕಲಾಗಿದೆ. ಅದರಿಂದ ರಸ್ತೆಯ ಎಲ್ಲಾ ಭಾಗಕ್ಕೂ ನೀರು ಚಿಮ್ಮುತ್ತಿದೆ, ಇದರಿಂದಾಗಿ ಸದಾಕಾಲ ಮಣ್ಣಿನ ರಸ್ತೆಯು ತೇವಾಂಶದಿಂದ ಕೂಡಿರುವ ಕಾರಣ, ಧೂಳಿನ ಸಮಸ್ಯೆ ಬಗೆ ಹರಿದಿದೆ.