
ರಾಜ್ಯ ಸರ್ಕಾರ ಕರ್ನಾಟಕ ಸಾರಿಗೆ ಬಸ್, ಬಿಎಂಟಿಸಿ ಸೇರಿ ಎಲ್ಲ ಬಸ್ಗಳ ದರ ಏರಿಕೆ ಮಾಡಿತು. ಅದರ ಬಳಿಕ ಬೆಂಗಳೂರು ಜನರ ಜೀವನಾಡಿ ನಮ್ಮ ಮೆಟ್ರೋ ದರ ಏರಿಕೆಗೆ ಅನುಮತಿ ನೀಡಿತು. ಇದೀಗ ಆಟೋ ದರ ಏರಿಕೆ ಮಾಡಲು ಹಲವರು ಸಜ್ಜಾಗಿದ್ದಾರೆ. ಇದಕ್ಕೆ ಕೆಲ ಸಂಘಟನೆಗಳಿಂದ ಪರವಾಗಿ ಅಭಿಪ್ರಾಯ ವ್ಯಕ್ತವಾದರೆ, ಕೆಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ರಾಪಿಡೋ ಬೈಕ್, ಬಹುರಾಷ್ಟ್ರೀಯ ಸಂಸ್ಥೆಗಳ ಸಂಚಾರಿ ಸೇವೆಗಳು ಆಟೋ ಚಾಲಕರ ಜೀವನಕ್ಕೆ ಮಾರಕವಾಗಿ ಪರಿಣಮಿಸಿವೆ. ಇಂತಹ ಸಮಯದ್ಲಲಿ ದರ ಹೆಚ್ಚಳ ಬೇಡ. ಆಟೋಗಳಿಗೆ ಹೆಚ್ಚುವರಿ ಪರ್ಮಿಟ್ ನೀಡುವುದು ಸೂಕ್ತವಲ್ಲ ಎಂದು ಇಂಡಿಯನ್ ವೆಹಿಕಲ್ ಡ್ರೈವರ್ಸ್ ಟ್ರೇಡ್ ಯೂನಿಯನ್ ಮತ್ತು ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ಸಂಘಟನೆ ಪ್ರತಿನಿಧಿಗಳು ಅಭಿಪ್ರಾಯಪಟ್ಟರು.
ಇತ್ತ ಕೆಲವು ಆಟೋ ಸಂಘಟನೆಗಳು ಕಿಲೋಮೀಟರ್ ಗೆ 5 ರಿಂದ 10 ರುಪಾಯಿವರೆಗೆ ದರ ಏರಿಕೆ ಮಾಡಬೇಕೆಂದು ಪಟ್ಟು ಹಿಡಿದ್ದಿದ್ದವು. ಡಿಸಿಪಿ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಚಾಲಕ ಸಂಘಟನೆಗಳ ಸಭೆ ನಡೆಸಲಾಗಿತ್ತು. ಸಾಧಕ ಬಾಧಕಗಳನ್ನು ಪರಿಶೀಲಿಸಿ ಇನ್ನೊಂದು ವಾರದಲ್ಲಿ ಸೂಕ್ತ ತೀರ್ಮಾನ ಹೊರ ಬೀಳುವ ನಿರೀಕ್ಷೆಯಿದೆ.
ಇಂದು ಪೂರ್ವ ಸಂಚಾರಿ ವಿಭಾಗದ ಡಿಸಿಪಿ ಸಾಹಿಲ್ ಬಾಗ್ಲಾ ನೇತೃತ್ವದಲ್ಲಿ ಆಟೋ ಮೀಟರ್ ದರ ಪರಿಷ್ಕರಣೆಗಾಗಿ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳು ಸೇರಿದಂತೆ ನಗರದ ಎಲ್ಲಾ ಚಾಲಕ ಸಂಘಟನೆಗಳು ಭಾಗಿಯಾಗಿದ್ದು, 17 ಸಂಘಟನೆಗಳ ಪೈಕಿ 16 ಸಂಘಟನೆಗಳು ತಮ್ಮ ಅಭಿಪ್ರಾಯ ತಿಳಿಸಿವೆ.

ಈ ವೇಳೆ ಮಾತನಾಡಿದ, ಡಿಸಿಪಿ ಸಾಹಿಲ್ ಬಾಗ್ಲಾ ಅವರು, ಒಂದು ವಾರ ಸಮಯಾವಕಾಶ ನೀಡಿದ್ದೇವೆ. ಶಾಂತಿನಗರ ಆರ್.ಟಿ.ಓಗೆ ದರ ಪರಿಷ್ಕರಣೆಗೆ ಅರ್ಜಿ ಸಲ್ಲಿಸಲು ಸೂಚಿಸಿದೆ. ಅರ್ಜಿ ಸ್ವೀಕೃತಿಯಾದ ಬಳಿಕ ಬೆಂಗಳೂರು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಆಟೋ ಚಾಲಕರು ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಅದನ್ನು ಪರಿಶೀಲಿಸಿ ನಂತರ ನಿರ್ಧರಿಸಲಾಗುವುದು ಎಂದು ಹೇಳಿದರು.
ಎರಡು ಕಿಲೋ ಮೀಟರ್ಗೆ 10 ರೂಪಾಯಿ ಏರಿಕೆ ಮಾಡುವಂತೆ ಕೆಲವು ಸಂಘಟನೆಗಳು ಮನವಿ ಮಾಡಿವೆ. ಬೆಂಗಳೂರಲ್ಲಿ ಕನಿಷ್ಠ ಆಟೋ ಮೀಟರ್ ದರ ಎರಡು ಕಿಲೋ ಮೀಟರ್ ಗೆ 30 ರೂಪಾಯಿ ಇದೆ. ಕನಿಷ್ಠ ದರವನ್ನು 40 ರೂಪಾಯಿಗೆ ಏರಿಕೆ ಮಾಡುವಂತೆ ಪಟ್ಟು ಹಿಡಿದಿವೆ. ದರ ಏರಿಕೆಗೆ ವಿರೋಧವೂ ವ್ಯಕ್ತವಾಗುತ್ತಿದೆ. ಹೀಗಾಗಿ ಈ ಎಲ್ಲಾ ಅಭಿಪ್ರಾಯಗಳನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ, ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರ ಗಮನಕ್ಕೆ ತಂದು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.
ರಾಪಿಡೋ ಬೈಕ್ ನಿಂದಾಗಿ ಆಟೋ ಚಾಲಕರು ಬದುಕು ತೀವ್ರ ಸಂಕಷ್ಟದಲ್ಲಿದೆ. ದರ ಏರಿಕೆ ಮಾಡಿದರೆ ಆಟೋ ಹತ್ತುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದೆ. ಆದ್ದರಿಂದ ದರ ಏರಿಕೆಯೂ ಬೇಡ. ಹೊಸ ಆಟೋಗಳಿಗೆ ಪರವಾನಗಿ ನೀಡುವುದೂ ಬೇಡ. ಸಧ್ಯಕ್ಕೆ ಯಥಾ ಸ್ಥಿತಿ ಕಾಪಾಡಿಕೊಳ್ಳಬೇಕಿದೆ. ಈ ಕುರಿತು ಇಂಡಿಯನ್ ವೆಹಿಕಲ್ ಡ್ರೈವರ್ಸ್ ಟ್ರೇಡ್ ಯೂನಿಯನ್ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ಮತ್ತು ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ಅಧ್ಯಕ್ಷ ಸಂತೋಷ್ ಕುಮಾರ್ ಮನವಿ ಮಾಡಿದರು.