
ಬಾಗಲಕೋಟೆ: ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ ಅವರ ಉಸ್ತುವಾರಿ ಜಿಲ್ಲೆಯಲ್ಲೇ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಎಷ್ಟರ ಮಟ್ಟಿಗೆ ಅಕ್ರಮವಾಗಿ ಮಾಡಲಾಗುತ್ತಿದೆ ಎಂಬುವುದಕ್ಕೆ ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮ ಸೂಕ್ತ ಉದಾಹರಣೆಯಾಗಿದೆ. ಹಲಕುರ್ಕಿ ಗ್ರಾಮದ ಅಂಗಡಿಗಳಲ್ಲಿ ನಿತ್ಯ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ನಸುಕಿನ ಜಾವ ಐದು ಗಂಟೆಗೆ ಹೋಗಿ ಮದ್ಯ ಕೇಳಿದರೂ ಕೊಡುತ್ತಾರೆ. ಇದರಿಂದ ಹದಿಹರೆಯದ ಯುವಕರು ಕುಡಿತಕ್ಕೆ ದಾಸರಾಗಿದ್ದಾರೆ. ದುರಂತ ಅಂದರೆ ಮದ್ಯ ಸೇವನೆಯಿಂದ ಒಂದೇ ತಿಂಗಳಲ್ಲಿ ಐವರು ಮೃತಪಟ್ಟಿದ್ದಾರೆ.

j3tvkannada
ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿ ಅಪಘಾತಕ್ಕೆ ಒಳಗಾಗಿ, ಆತ್ಮಹತ್ಯೆ ಮತ್ತು ಕುಡಿತದಿಂದ ಆರೋಗ್ಯ ಹದಗೆಟ್ಟು ಐವರು ಜೀವ ಕಳೆದು ಕೊಂಡಿದ್ದಾರೆ. ಐವರ ಕುಟುಂಬಗಳು ಕಣ್ಣೀರು ಹಾಕುತ್ತಿವೆ. ಹೇಗಾದರೂ ಮಾಡಿ ಅಕ್ರಮ ಮದ್ಯ ಮಾರಾಟ ಬಂದ್ ಮಾಡಿಸಿ ಎಂದು ಮಹಿಳೆಯರು ಕೈ ಮುಗಿದು ಕಣ್ಣೀರು ಹಾಕಿದ್ದಾರೆ. ಇದೇ ಗ್ರಾಮದ ವೃದ್ಧೆ ನೀಲವ್ವ ಹಡಪದ ಎಂಬುವರ ಪತಿ ಹಾಗೂ ಮಗ ಇಬ್ಬರೂ ಕುಡಿತದ ದಾಸರಾಗಿ ಅನಾರೋಗ್ಯ ತುತ್ತಾಗಿ ಮೃತಪಟ್ಟಿದ್ದಾರೆ. ಇನ್ನೋರ್ವ ವೃದ್ಧೆಯ ಕಥೆಯೂ ಇದೇ ರೀತಿ ಇದೆ. ವೃದ್ಧೆಯ ಅಳಿಯ ಕುಡಿದು ಕುಡಿದು ಮೃತಪಟ್ಟಿದ್ದು, ಈತನ ಮಗ ಹದಿನೆಂಟು ವರ್ಷದವನಾಗಿದ್ದು ಆತನೂ ಕೂಡ ಕುಡಿತಕ್ಕೆ ದಾಸನಾಗಿದ್ದಾನೆ.

j3tvkannada
ಮಕ್ಕಳು ಮತ್ತು ಗಂಡಂದಿರು ನಿತ್ಯ ಕುಡಿದು ಬಂದು ಮನೆಯಲ್ಲಿ ಜಗಳವಾಡುತ್ತಿದ್ದು, ಮಹಿಳೆಯರು ಕಣ್ಣೀರು ಹಾಕುತ್ತಿದ್ದಾರೆ. ಹೆಣ್ಮಕ್ಕಳು ದುಡಿದು ತಂದ ಹಣ ಕಸಿದುಕೊಂಡು ಎಣ್ಣೆ ಹೊಡೆಯೋಕೆ ಹೋಗುತ್ತಾರೆ. ಊರಲ್ಲಿ ಎಣ್ಣೆ ಮಾರಾಟ ಕಡಿಮೆಯಾದರೆ ಊರ ಹೊರಗೆ ಎಮ್ಎಸ್ಐಎಲ್ ಇದ್ದು, ಅದು ಕೂಡ ಕುಡಿತ ಹೆಚ್ಚಾಗುವುದಕ್ಕೆ ಮತ್ತೊಂದು ಕಾರಣವಾಗಿದೆ. ಅಕ್ರಮ ಮದ್ಯ ಮಾರಾಟ ತಡೆಯಲು ಅಬಕಾರಿ ಅಧಿಕಾರಿಗಳಿಗೆ ಹೇಳಿದರೂ ಪ್ರಯೋಜನವಾಗಿಲ್ಲ. ಇದರಿಂದ ಊರ ಜನರು ಗ್ರಾಮ ಪಂಚಾಯಿತಿ ಮೂಲಕ ಅಕ್ರಮವಾಗಿ ಸಾರಾಯಿ ಮಾರಾಟ ಮಾಡಿದರೆ ಪೊಲೀಸರ ವಶಕ್ಕೆ ಕೊಡಲಾಗುವುದು.
ಯಾರು ಸಾರಾಯಿ ಮಾರಾಟ ಮಾಡುವಂತಿಲ್ಲ ಎಂದು ಡಂಗುರ ಸಾರಿಸಿದ್ದಾರೆ. ಅಬಕಾರಿ ಸಚಿವರು ನಮ್ಮ ಜಿಲ್ಲೆಯವರೇ ಆಗಿದ್ದು, ಕೂಡಲೆ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು. ಊರ ಹೊರಗಿನ ಎಮ್ಎಸ್ಐಎಲ್ ಬಂದ್ ಮಾಡಿಸಬೇಕು ಇಲ್ಲದಿದ್ದರೆ ಶೀಘ್ರದಲ್ಲೇ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಒಟ್ಟಿನಲ್ಲಿ ಊರಲ್ಲಿ ಒಂದು ಕಡೆ ಅಕ್ರಮ ಸಾರಾಯಿ ಮಾರಾಟ, ಇನ್ನೊಂದು ಕಡೆ ಎಮ್ಎಸ್ಐಎಲ್ ಎರಡು ಕಡೆ ಕಂಠಪೂರ್ತಿ ಕುಡಿದು ಜನರು ಜೀವ ಬಿಡುತ್ತಿದ್ದಾರೆ. ಇದಕ್ಕೆ ಅಬಕಾರಿ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿ ಸೂಕ್ತ ಕ್ರಮ ಕೈಗೊಳ್ಳಲಿ ಎಂಬುದು ಎಲ್ಲರ ಆಶಯವಾಗಿದೆ.