
ಮಂಡ್ಯ: ಮದುವೆ ಮುಗಿಸಿಕೊಂಡು ವಾಪಸ್ ರಾತ್ರಿ ಮನೆಗೆ ಹೋಗುತ್ತಿದ್ದ ವೇಳೆ ಹಿಂದಿನಿಂದ ಬಂದ ಅಪರಿಚಿತ ವ್ಯಕ್ತಿಯೋರ್ವ ಮಹಿಳೆ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತು ಪರಾರಿಯಾಗಿರುವ ಘಟನೆ ನಗರದ ಸುರಭಿ ಕಲ್ಯಾಣ ಮಂಟಪದ ಬಳಿ ನಡೆದಿದೆ.

j3tvkannada
ಕಲ್ಲಹಳ್ಳಿ ವಿ.ವಿ ನಗರ ಬಡಾವಣೆಯ ಕಮಲ ಎಂಬುವವರು ಸುಮಾರು 2.50 ಲಕ್ಷ ರೂ ಮೌಲ್ಯದ ಮಾಂಗಲ್ಯ ಸರವನ್ನು ಕಳೆದುಕೊಂಡವರಾಗಿದ್ದಾರೆ. ರಾತ್ರಿ ಸುಮಾರು 7.30ರ ಸಮಯದಲ್ಲಿ ಸುರಭಿ ಕಲ್ಯಾಣ ಮಂಟಪದಲ್ಲಿ ಮದುವೆ ಆರತಕ್ಷತೆ ಸಮಾರಂಭವನ್ನು ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ವೇಳೆ ಹಿಂದಿನಿಂದ ಬಂದ ಅಪರಿಚಿತ ವ್ಯಕ್ತಿಯೊಬ್ಬ ಕತ್ತಿನಲ್ಲಿದ್ದ ಮಾಂಗಲ್ಯ ಸರಕ್ಕೆ ಕೈ ಹಾಕಿದ್ದಾನೆ.
ಇದನ್ನು ಅರಿತ ಕಮಲ ತಕ್ಷಣ ಮಾಂಗಲ್ಯ ಸಮೇತ ಸರವನ್ನು ಬಿಗಿಯಾಗಿ ಹಿಡಿದುಕೊಂಡಿದ್ದಾರೆ. ಆದರೂ ಅಪರಿಚಿತ ವ್ಯಕ್ತಿ ಸರವನ್ನು ಬಲವಾಗಿ ಎಳೆದ ಕಾರಣ ಸರ ಕಿತ್ತುಹೋಗಿ ಅರ್ಧ ಆತನ ಕೈಯ್ಯಲ್ಲಿ, ಇನ್ನರ್ದ ಮಹಿಳೆ ಕೈಯಲ್ಲಿ ಉಳಿದುಕೊಂಡಿದೆ. ಸುಮಾರು 30 ಗ್ರಾಂ ತೂಕದ ಚಿನ್ನದ ಸರ ಕಿತ್ತು ಪರಾರಿಯಾಗಿದ್ದಾನೆ ಎಂದು ಮಹಿಳೆ ದೂರು ನೀಡಿದ್ದಾರೆ. ಈ ಸಂಬಂಧ ಪಶ್ಚಿಮ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.