
ಉಡುಪಿ: ಹೆಬ್ರಿ ತಾಲೂಕಿನ ಮಂಡಾಡಿಜೆಡ್ಡು ಎಂಬಲ್ಲಿನ ವ್ಯಕ್ತಿಯೊಬ್ಬರು ಬೆಂಕಿ ತಗುಲಿ ಸಾವನ್ನಪ್ಪಿದ ಪ್ರಕರಣಕ್ಕೆ ಸ್ಫೋಟಕ ಸಂಗತಿ ಬಯಲಾಗಿದೆ.

j3tvkannada
ಮೃತಪಟ್ಟ ಅನೂಪ್ ನಾಯಕ್ ಅವರ ಪತ್ನಿ ಬೆಂಕಿಯ ರಹಸ್ಯ ಬಾಯಿ ಬಿಟ್ಟಿದ್ದು, ಗ್ಯಾಸ್ ರಿಫಿಲ್ಲಿಂಗ್ ಸಂದರ್ಭದಲ್ಲಿ ಬೆಂಕಿ ತಗುಲಿ ತನ್ನ ಗಂಡ ಸಾವನ್ನಪ್ಪಿದ್ದು ಇದಕ್ಕೆ ಅತ್ತೆ ಹಾಗೂ ಮಾವನೇ ಕಾರಣ ಎಂದು ಆರೋಪಿಸಿ ಹೆಬ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣದ ಹಿನ್ನೆಲೆ ಎ.11ರಂದು ಆಕಸ್ಮಿಕವಾಗಿ ಬೆಂಕಿ ತಗುಲಿ ಗಂಭೀರ ಸುಟ್ಟಗಾಯಗಳೊಂದಿಗೆ ಮಣಿಪಾಲ ಎಂ.ಸಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೇ ಎ.17 ರಂದು ಅನೂಪ್ ಅವರು ಮೃತಪಟ್ಟಿರುವ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅನೂಪ್ ಅವರು ಮನೆಯಲ್ಲಿ ಅಕ್ರಮವಾಗಿ ಗೃಹ ಬಳಕೆಯ ಸಿಲಿಂಡರಿನ ಗ್ಯಾಸನ್ನು ವಾಣಿಜ್ಯ ಬಳಕೆಯ ಸಿಲಿಂಡರ್ ಗೆ ರಿಫಿಲ್ಲಿಂಗ್ ಮಾಡುವಾಗ ತಾಯು ಆಶಾ ಅವರು ಬೇಜವಾಬ್ದಾರಿಯಿಂದ ಲೈಟರ್ ಉರಿಸಿದ ಪರಿಣಾಮದಿಂದ ಬೆಂಕಿ ಹೊತ್ತಿಕೊಂಡು ಅನೂಪ್ ಅವರಿಗೆ ಗಂಭೀರ ಸುಟ್ಟಗಾಯದಿಂದ ಮೃತಪಟ್ಟಿದ್ದು ಇದಕ್ಕೆ ಮೃತ ಅನೂಪ್ ಅವರ ತಂದೆ ಅನಂತ ನಾಯಕ್ ಹಾಗೂ ತಾಯಿ ಆಶಾ ಅವರೇ ಕಾರಣವೆಂದು ಸೊಸೆ ರೇಷ್ಮಾ ಆರೋಪಿಸಿದ್ದಾರೆ.
ಗ್ಯಾಸ್ ರಿಫಿಲ್ಲಿಂಗ್ ನಿಂದ ಬೆಂಕಿ ಹೊತ್ತಿಕೊಂಡಿದ್ದು, ಬಳಿಕ ಅದನ್ನು ಮುಚ್ಚಿ ಹಾಕುವ ಸಲುವಾಗಿ ಸಿಲಿಂಡರ್ ಸ್ಫೋಟದ ಸ್ಥಳವನ್ನು ಸ್ವಚ್ಛಗೊಳಿಸಿ ಸಾಕ್ಷ್ಯ ನಾಶ ಮಾಡಿದ್ದಾರೆ. ಎಂದು ಆರೋಪಿಸಿದ್ದು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.