
ಮೈಸೂರು: ರಣಬಿಸಿಲು ತಲೆ ಸುಡುತ್ತಿರುವುದರಿಂದ ಮೈಸೂರಿನ ಪ್ರಸಿದ್ಧ ಚಾಮರಾಜೇಂದ್ರ ಮೃಗಾಲಯದ ಪ್ರಾಣಿ ಪಕ್ಷಿಗಳು ತಂಪನ್ನು ಬಯಸುತ್ತಿದ್ದು, ಅವುಗಳ ಆರೋಗ್ಯದ ಬಗ್ಗೆ ಕಾಳಜಿವಹಿಸುವ ಸಲುವಾಗಿ ಪ್ರತಿ ವರ್ಷ ಏನು ಕ್ರಮ ಕೈಗೊಳ್ಳಲಾಗುತ್ತದೆಯೋ ಅದನ್ನೇ ಈ ಬಾರಿಯೂ ಮಾಡಲಾಗುತ್ತಿದ್ದು, ಈಗಾಗಲೇ ಸ್ಪ್ರಿಂಕ್ಲರ್ ಮೂಲಕ ನೀರು ಹಾಯಿಸುವ ಕಾರ್ಯ ಭರದಿಂದ ಸಾಗುತ್ತಿವೆ. ಇದಕ್ಕಾಗಿ ಮೃಗಾಲಯದಲ್ಲಿ ಒಟ್ಟು 45ಕಡೆ ಜೆಟ್ ಸ್ಪ್ರಿಂಕ್ಲರ್ ಅಳವಡಿಸಿದ್ದು, ಹನಿಹನಿ ನೀರು ಬೀಳುವ ಮೂಲಕ ಪ್ರಾಣಿ ಪಕ್ಷಿಗಳಿಗೆ ತಂಪಾದ ಅನುಭವ ನೀಡುತ್ತಿದೆ.
ಇನ್ನು ಮೃಗಾಲಯದಲ್ಲಿರುವ ಗೋರಿಲ್ಲಾ, ಚಿಂಪಾಜಿ, ಕೋತಿಗಳಿಗೆ ಫ್ಯಾಮ್ ಏರ್ ಕೂಲರ್ಗಳ ಅಳವಡಿಕೆ ಜೊತೆಗೆ ಐಸ್ ಬ್ಲಾಗ್, ಕಲ್ಲಂಗಡಿ ಹಣ್ಣುಗಳಂತಹ ತಂಪಾದ ಹಣ್ಣುಗಳನ್ನು ಕೊಡುವ ಮೂಲಕ ಅವುಗಳ ದೇಹದಲ್ಲಿ ತಾಪಮಾನ ಹೆಚ್ಚಾಗದಂತೆ ನೋಡಿಕೊಳ್ಳಲಾಗುತ್ತಿದೆ. ಇಷ್ಟೇ ಅಲ್ಲದೆ ಜಿಂಕೆ, ಕಡವೆಗಳಿಗೆ ಅಲ್ಲಲ್ಲಿ ನೀರಿನ ಕೊಳ, ಕೆಸರಿನ ಕೊಳಗಳ ನಿರ್ಮಾಣ ಮಾಡಲಾಗಿದೆ. ನೆರಳಿಗೆ ಆಶ್ರಯಕ್ಕೆ ಶೆಡ್ ನಿರ್ಮಾಣ ಕೂಡ ಮಾಡುವುದರೊಂದಿಗೆ ಮೃಗಾಲಯದಲ್ಲಿ ಪ್ರಾಣಿಪಕ್ಷಿಗಳನ್ನು ಬಿಸಿಲಿನಿಂದ ರಕ್ಷಿಸುವ ಕಾರ್ಯವನ್ನು ಸಿಬ್ಬಂದಿ ಚಾಚು ತಪ್ಪದೆ ಮಾಡುತ್ತಿದ್ದಾರೆ.

ಇದೆಲ್ಲದ ನಡುವೆ ರಾಜ್ಯದಲ್ಲಿ ಹಕ್ಕಿ ಜ್ವರದ ಆತಂಕ ಶುರುವಾಗಿದ್ದು, ಕೋಳಿ ಸೇರಿದಂತೆ ಪ್ರಾಣಿ, ಪಕ್ಷಿಗಳನ್ನು ಕಾಪಾಡಿಕೊಳ್ಳುವುದು ಸವಾಲ್ ಆಗಿ ಪರಿಣಮಿಸಿದೆ. ಯಾವಾಗ ವೈರಸ್ ತಗಲಿಕೊಳ್ಳಬಹುದೋ ಎಂಬ ಭಯವಂತು ಇದ್ದೇ ಇದೆ. ಹೀಗಾಗಿಯೇ ಮೃಗಾಲಯದತ್ತ ನಿಗಾವಹಿಸಲಾಗಿದ್ದು, ಪ್ರಾಣಿ ಮತ್ತು ಪಕ್ಷಿಗಳ ಸಂರಕ್ಷಣೆಯತ್ತ ಆದ್ಯತೆ ನೀಡುವುದರೊಂದಿಗೆ ಕಟ್ಟೆಚ್ಚರ ವಹಿಸಲಾಗುತ್ತಿದೆ. ಪ್ರಾಣಿಪಕ್ಷಿಗಳ ವಿಚಾರ ಬಂದಾಗಲೆಲ್ಲ ಮೃಗಾಲಯದತ್ತ ಹೆಚ್ಚಿನ ಆಸಕ್ತಿ ವಹಿಸಲಾಗುತ್ತದೆ.
ಇದೀಗ ಹಕ್ಕಿಜ್ವರ ನಮ್ಮ ಸುತ್ತಮುತ್ತಲ ರಾಜ್ಯಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಗಡಿಪ್ರದೇಶದಲ್ಲಿ ಹಲವು ಕಡೆ ಇದು ಪರಿಣಾಮ ಬೀರಿದೆ. ಮೈಸೂರಿಗೆ ಕೇರಳದಿಂದ ಸಂಪರ್ಕ ಕಲ್ಪಿಸುವ ಬಾವಲಿ ಚೆಕ್ ಪೋಸ್ಟ್ ನಲ್ಲಿ ನಿಗಾ ವಹಿಸಲಾಗಿದೆ. ಇದೆಲ್ಲದರ ನಡುವೆ ಮೃಗಾಲಯದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಪ್ರಾಣಿ ಮತ್ತು ಪಕ್ಷಗಳ ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಲಾಗುತ್ತಿದೆ.
ಬಳ್ಳಾರಿ, ರಾಯಚೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದು, ಹಲವು ಕೋಳಿಗಳು ಮೃತಪಟ್ಟಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಕೋಳಿ ಆಮದು ಮಾಡಿಕೊಳ್ಳುತ್ತಿರುವುದರ ಮೇಲೆ ನಿಗಾ ಇರಿಸಿದೆ. ಜತೆಗೆ ತಪಾಸಣೆ ನಡೆಸಿ, ಹಕ್ಕಿ ಜ್ವರವನ್ನು ಖಾತ್ರಿ ಪಡಿಸಿಕೊಳ್ಳುತ್ತಿದೆ. ಈ ನಡುವೆ ಮೃಗಾಲಯದಲ್ಲಿರುವ ಪ್ರಾಣಿ ಪಕ್ಷಿಗಳಿಗೆ ಯಾವುದೇ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
ಹಾಗಾದರೆ ಮೈಸೂರು ಮೃಗಾಲಯದಲ್ಲಿ ಯಾವ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂಬುದರ ಕುರಿತಂತೆ ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕ ರಂಗಸ್ವಾಮಿ ಅವರು ಮಾಹಿತಿ ನೀಡಿದ್ದು ಅವರು ಹೇಳುವಂತೆ ಮೃಗಾಲಯದಲ್ಲಿರುವ ಪಕ್ಷಿ ಸಂಕುಲಕ್ಕೆ ಯಾವುದೇ ತೊಂದರೆ ಆಗದಂತೆ ತೀವ್ರ ನಿಗಾ ವಹಿಸಲಾಗಿದೆ. ಪ್ರಾಣಿ ಪಾಲಕರು ಒಂದು ಪಕ್ಷಿ ಮನೆಯಿಂದ ಇನ್ನೊಂದು ಮನೆಗೆ ಹೋಗುವಂತಿಲ್ಲ. ಪ್ರವೇಶ ದ್ವಾರದಲ್ಲೇ ಫುಟ್ ಟಿಬ್ಸ್ ಅಳವಡಿಸಿದ್ದೇವೆ. ಅದರಲ್ಲಿ ಕಾಲನ್ನು ಅದ್ದಿ ಜನ ಬರುವಂತೆ ಕ್ರಮ ಕೈಗೊಳ್ಳಲಾಗಿದೆ.
ಮೃಗಾಲಯದಲ್ಲಿ ಕೆಲಸ ಮಾಡುವವರು ಕಡ್ಡಾಯವಾಗಿ ಮಾಸ್ಕ್ ಹ್ಯಾಂಡ್ ಗ್ಲೌಸ್ ಹಾಕಿಕೊಳ್ಳಲು ಸೂಚಿಸಿದ್ದೇವೆ. ಪಕ್ಷಿಗಳ ರೆಕ್ಕೆಗಳನ್ನು ಸಂಗ್ರಹಿಸಿ ಪ್ರಯೋಗ ಶಾಲೆಗೆ ಕಳಿಸಿಕೊಡಲಾಗಿದೆ. ನಮ್ಮಲ್ಲಿ ಅಂತಹ ಪ್ರಕರಣಗಳು ಇಲ್ಲಿವರೆಗೂ ಕಂಡು ಬಂದಿಲ್ಲ. ಮಾಂಸಾಹಾರಿ ಪ್ರಾಣಿಗಳಿಗೆ ತರುವ ಚಿಕನ್ ಮಾಂಸವನ್ನು ಪೊಟಾಷಿಯಂ ಪರಮೋನೈಟ್ ನಿಂದ ತೊಳೆದು ಕೊಡಲಾಗುತ್ತದೆ. ರೋಗಗ್ರಸ್ತ ಕೋಳಿ ಮಾಂಸವನ್ನು ಪ್ರಾಣಿಗಳಿಗೆ ಕೊಡುವುದಿಲ್ಲ. ನಮ್ಮಲ್ಲಿರುವ ಪಕ್ಷಿಗಳಿಗೆ ಯಾವುದೇ ರೋಗ ರುಜಿನಗಳು ಕಂಡು ಬಂದಿಲ್ಲ ಎಂದು ಅವರು ಹೇಳಿದ್ದಾರೆ.

ಇದೆಲ್ಲದರ ನಡುವೆ ಹಕ್ಕಿಜ್ವರ ತಡೆಗಟ್ಟಲು ಮುಂಜಾಗೃತಾ ಕ್ರಮವಾಗಿ ಪಶು ಸಂಗೋಪನಾ ಇಲಾಖೆ ವತಿಯಿಂದ ಜಾಗೃತ ತಂಡ ರಚನೆ ಮಾಡಲಾಗಿದ್ದು, ಕೋಳಿ ಸಾಕಣೆದಾರರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ಪ್ರತಿ ಕೋಳಿ ಸಾಕಣೆ ಕೇಂದ್ರಗಳು, ರೈತರ ಮನೆಗಳು, ಗ್ರಾಮಗಳಿಗೆ ಭೇಟಿ ನೀಡಿ ಕರಪತ್ರ ಹಂಚಿಕೆ ಮಾಡಿ ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಹಕ್ಕಿಗಳು ಅಥವಾ ಕೋಳಿಗಳು ಶಂಕಾಸ್ಪದವಾಗಿ ಸಾವಿಗೀಡಾಗಿರುವುದು ಕಂಡುಬಂದರೆ ತಕ್ಷಣ ಪಶುಸಂಗೋಪನಾ ಇಲಾಖೆಯ ಗಮನಕ್ಕೆ ತರಬೇಕು ಎಂದು ರೈತರಿಗೆ ಮನವಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ಹಕ್ಕಿಜ್ವರ ಹರಡುವುದರ ಕುರಿತು ಮತ್ತು ಅದನ್ನು ತಡೆಯುವ ಕ್ರಮಗಳ ಬಗ್ಗೆ ಪಶುವೈದ್ಯರು ರೈತರಿಗೆ ಮಾಹಿತಿ ನೀಡುತ್ತಾರೆ. ಕೋಳಿ ಸಾಕಣೆ ಕೇಂದ್ರ ಮತ್ತು ಮಾಂಸ ಸಂಸ್ಕರಣೆ ಘಟಕಗಳಲ್ಲಿ ಕೆಲಸ ಮಾಡುವವರಿಗೆ ಹಕ್ಕಿಜ್ವರದ ಸೋಂಕು ತಗಲುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದಿರುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಜೊತೆಗೆ ಕೋಳಿ ಸಾಗಣೆ ಮಾಡುವ ವಾಹನಗಳಿಗೆ ನಂಜುನಾಶಕಗಳಿಂದ ಶುಚಿಗೊಳಿಸಲು ಸೂಚನೆ ನೀಡಲಾಗಿದೆ. ಈ ಬಗ್ಗೆ ವರದಿ ನೀಡಲು ಸೂಚಿಸಿರುವುದಾಗಿ ತಿಳಿಸಿದ್ದಾರೆ. ಹಕ್ಕಿಜ್ವರ ಇದ್ದರೂ ಕೋಳಿ ಮಾಂಸ ಸೇವನೆಯಿಂದ ಹರಡುವುದಿಲ್ಲ.
ಸೋಂಕು ಕಾಲಿಟ್ಟರೂ ಕೋಳಿ ಸಾಕಣೆ ಕೇಂದ್ರ ಮತ್ತು ಮಾಂಸ ಸಂಸ್ಕರಣೆ ಮಾಡುವವರಿಗೆ ಮಾತ್ರ ತಗಲುತ್ತದೆ. ಈ ಸೋಂಕು ಮನುಷ್ಯನಿಂದ ಮನುಷ್ಯನಿಗೆ ಹರಡುವುದಿಲ್ಲ. ಹಕ್ಕಿಗಳಿಂದ ಮಾತ್ರ ಹರಡುತ್ತದೆ. ಆದ್ದರಿಂದ ಯಾರೂ ಗಾಬರಿಯಾಗಬೇಕಾದ ಅಗತ್ಯವಿಲ್ಲ ಎಂದು ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಕೋಳಿ ಮಾಂಸ ವ್ಯಾಪಾರ ಕಡಿಮೆಯಾಗಿದ್ದು, ಹಕ್ಕಿ ಜ್ವರದ ಹಿನ್ನಲೆಯಲ್ಲಿ ಕೋಳಿ ಮಾಂಸ ಸೇವಿಸುವುದನ್ನು ಬಹಳಷ್ಟು ಜನ ನಿಲ್ಲಿಸಿದ್ದಾರೆ. ಹೀಗಾಗಿ ಕೋಳಿ ಮಾಂಸ ಸೇವನೆಯಿಂದ ರೋಗ ತಗುಲಲ್ಲ ಎಂಬ ಅರಿವು ಮೂಡಿಸುವ ಕೆಲಸ ನಡೆಯುತ್ತಿದೆ.