
ಮಡಿಕೇರಿ: ಮಲ್ಲಳ್ಳಿ ಜಲಪಾತ, ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿದ್ದು, ಭಾರಿ ಮಳೆಯಿಂದ ಜಲಪಾತದ ಸೌಂದರ್ಯ ದ್ವಿಗುಣಗೊಂಡಿದೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ.
ಎಲ್ಲೆಲ್ಲೂ ಹಚ್ಚಹಸಿರು ಪ್ರಕೃತಿ ಮನಸೆಳೆಯುವ ಸೊಬಗು ಮಂಜಿನಿಂದ ಮುಸುಕಿ ಕಾಣೆಯಾಗುವ ಜಲಧಾರೆ, ಭೋರ್ಗರೆಯುವ ನೀರಿನ ಶಬ್ದ, ಇದು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿ ಜಲಪಾತ.

ದಕ್ಷಿಣದ ಕಾಶ್ಮೀರ, ಭಾರತದ ಸ್ಕಾಟ್ಲ್ಯಾಂಡ್ ಎಂದೆಣೆಸಿಕೊಂಡಿರುವ ಜಿಲ್ಲೆಯ ಈ ಜಲಪಾತಗಳಿಗೆ ಈಗ ಜೀವಂತಕಳೆ ಬಂದಿದೆ. ಅದರಲ್ಲಿಯೂ ಹಚ್ಚಹಸಿರಿನ ಪರಿಸರದ ನಡುವೆ ಭೋರ್ಗರೆಯುತ್ತಿರುವ ಮಲ್ಲಳ್ಳಿ ಜಲಪಾತ, ನೋಡುಗರ ಕಣ್ಮನ ಸೆಳೆಯುತ್ತಿದೆ.
ಪುಷ್ಪಗಿರಿಯಿಂದ ಧುಮುಕುವ ಕುಮಾರಧಾರಾ ನದಿಯ ಸೊಬಗು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿ, ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶಗಳಲ್ಲಿ ಕಳೆದ ಒಂದು ವಾರದಿಂದ ವರುಣನ ಆರ್ಭಟದಿಂದ, ಮಲ್ಲಳ್ಳಿ ಜಲಪಾತದ ಸೌಂದರ್ಯ ದ್ವಿಗುಣಗೊಂಡಿದೆ.
ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ, ಈ ಪ್ರಕೃತಿ ಸೌಂದರ್ಯವನ್ನು ಆನಂದಿಸುತ್ತಿದ್ದಾರೆ. ಪುಷ್ಪಗಿರಿ ಬೆಟ್ಟ ತಪ್ಪಲಿನಿಂದ ಹುಟ್ಟುವ ಕುಮಾರಧಾರಾ ನದಿ, ಮಲ್ಲಳ್ಳಿ ಗ್ರಾಮದ ಬೃಹತ್ ಕಲ್ಲು ಬಂಡೆಯಿಂದ ಕೆಳಗೆ ಧುಮುಕುವ ದೃಶ್ಯ ಮನಮೋಹಕವಾಗಿದೆ.

ಎತ್ತರದಿಂದ ನೀರು ಧುಮುಕುವ ಮನಮೋಹಕ ದೃಶ್ಯ ಜಲಪಾತದಲ್ಲಿ ನಡೆಯುವ ಅವಘಡಗಳನ್ನು ತಪ್ಪಿಸಲು ಪ್ರವಾಸೋದ್ಯಮ ಇಲಾಖೆಯು ನೀರಿನೊಳಗೆ ಯಾರೂ ಇಳಿಯದಂತೆ ಬ್ಯಾರಿಕೇಡ್ ಹಾಕಿದೆ. ಬೃಹತ್ ಗಾತ್ರದ ಕಲ್ಲುಗಳ ಮೇಲೆ ನಿಂತು, ಜಲಪಾತದ ಸೌಂದರ್ಯವನ್ನು ಆನಂದಿಸುತ್ತಾ, ಪ್ರವಾಸಿಗರು ತಮ್ಮ ಮೊಬೈಲ್ ಕ್ಯಾಮರದಲ್ಲಿ ಸೆರೆಹಿಡಿಯುತ್ತಿದ್ದಾರೆ.
ಪ್ರವಾಸಿಗರು ತಮ್ಮ ಗೆಳೆಯ – ಗೆಳತಿಯರೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಾ, ಪ್ರಕೃತಿ ಸೌಂದರ್ಯದಲ್ಲಿ ತಲ್ಲೀನರಾಗುತ್ತಿದ್ದಾರೆ. ಕೊಡಗು ಹೊರ ಜಿಲ್ಲೆಗಳ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಇದರಲ್ಲಿ ಬೆಂಗಳೂರಿನಿಂದ ಹೆಚ್ಚಿನ ಪ್ರವಾಸಿಗರಿದ್ದಾರೆ.
ಮಲ್ಲಳ್ಳಿ ಜಲಪಾತದವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣದಿಂದ, ಪ್ರವಾಸಿಗರಿಗೆ ಸುಗಮವಾಗಿದೆ. ಹಾಲಿನೋರೆಯಂತ ನೀರಿನ ವೈಭವ, ಜುಳುಜುಳು ನಾದದೊಂದಿಗೆ ಹೃನ್ಮನ ತಣಿಸುವ ಮಲ್ಲಳ್ಳಿ ಜಲಪಾತವನ್ನು ವೀಕ್ಷಿಸಲು ಇದು ಸುಸಂದರ್ಭವಾಗಿದೆ. ವಾರಾಂತ್ಯದ ದಿನಗಳಲ್ಲಿ ಸಾವಿರಾರು ಮಂದಿ ಭೇಟಿ ನೀಡುತ್ತಿದ್ದಾರೆ. ಭಾರಿ ಮಳೆಯ ಸಮಯದಲ್ಲಿ ಜಲಪಾತದ ಬುಡದಲ್ಲಿ ನಿಂತು ನೋಡುವುದು ಕಷ್ಟ, ಆದರೆ 400 ಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಇಳಿದು, ಸಮೀಪಕ್ಕೆ ಹೋಗಬಹುದು.