
ಶಿವಮೊಗ್ಗ: ವಿದ್ಯುತ್ ಸಂಪರ್ಕಕ್ಕೆ ಅಗತ್ಯವಾಗಿರುವ ಪ್ರಮುಖ ದಾಖಲೆ ಎನ್ಒಸಿ ( ನಿರಾಕ್ಷೇಪಣಾ ಪತ್ರ) ಪಡೆಯುವುದು ಸಾರ್ವಜನಿಕರಿಗೆ ಇದೀಗ ಸುಲಭವಲ್ಲ. ವಿವಿಧ ಮಾಹಿತಿಯುಳ್ಳ ಕ್ರಮಬದ್ಧ ಎನ್ಒಸಿ ದಾಖಲೆ ಇಲ್ಲದಿದ್ದರೆ ವಿದ್ಯುತ್ ಸಂಪರ್ಕ ಸಿಗುವುದಿಲ್ಲ. ಎನ್ಒಸಿ ಸಾರ್ವಜನಿಕ ವಲಯದಲ್ಲಿ ಭಾರೀ ಗದ್ದಲ ಎಬ್ಬಿಸಿದ್ದು, ಆಡಳಿತದಲ್ಲಿ ಕಿರಿಕಿರಿ ಉಂಟುಮಾಡಿದೆ.

j3tvkannada
ಮನೆ, ವಾಣಿಜ್ಯ ಕಟ್ಟಡ, ಮಳಿಗೆಗೆ ವಿದ್ಯುತ್ ಸಂಪರ್ಕ ನೀಡಲು ಸ್ಥಳೀಯವಾಗಿ ಮೆಸ್ಕಾಂ ಎನ್.ಒ.ಸಿ ದಾಖಲೆ ಕ್ರಮಬದ್ಧತೆ ಅಂಶಗಳ ಕುರಿತು ಸೂಚನೆ ಪತ್ರ ನೀಡಿದೆ. ಈ ಪತ್ರದಲ್ಲಿರುವ ಅಂಶಗಳನ್ನು ಉಲ್ಲೇಖಿಸಿ ಎನ್.ಒ.ಸಿ ನೀಡಲು ಗ್ರಾಮ ಪಂಚಾಯಿತಿ ಆಡಳಿತ ಸಿದ್ಧವಾಗಿಲ್ಲ. ಈ ರೀತಿಯಲ್ಲಿ ಎನ್.ಒ.ಸಿ ನೀಡುವ ಅಧಿಕಾರ ಗ್ರಾಮ ಪಂಚಾಯತ್ ಗಿಲ್ಲ ಎಂದು ಸ್ಪಷ್ಟನೆ ನೀಡಿ ಸಾರ್ವಜನಿಕರ ಅರ್ಜಿ ತಿರಸ್ಕರಿಸುತ್ತಿರುವುದು ಬಿಕ್ಕಟ್ಟಿಗೆ ಕಾರಣವಾಗಿದೆ.
ಮೆಸ್ಕಾಂ, ಗ್ರಾಮ ಪಂಚಾಯತ್ ಆಡಳಿತದ ಜಂಗೀಕುಸ್ತಿಯ ನಡುವೆ ಸಿಕ್ಕಿಕೊಂಡಿರುವ ವಿದ್ಯುತ್ ಸಂಪರ್ಕ ಕೋರಿದ ಅರ್ಜಿದಾರ ಸುಸ್ತಾಗುವಂತಾಗಿದೆ. ವರ್ಷದಿಂದೀಚೆ ಈ ಸಮಸ್ಯೆ ಉಲ್ಬಣ ಹಂತಕ್ಕೆ ತಲುಪಿದ್ದು ಸರಕಾರ, ಜನಪ್ರತಿನಿಧಿಗಳ ಗಮನದಲ್ಲಿದ್ದರೂ ಬಗೆಹರಿದಿಲ್ಲ. ಕೆಲ ದಿನಗಳಿಂದ ಮೆಸ್ಕಾಂ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿ ಮಾಡಿದ್ದು, ವಿದ್ಯುತ್ ಸಂಪರ್ಕ ಪಡೆಯುವುದು ಸಾರ್ವಜನಿಕರಿಗೆ ಕಿರಿಕಿರಿ ಎನ್ನಿಸುವಂತಾಗಿದೆ. ಗೃಹ ಮತ್ತು ವಾಣಿಜ್ಯ ಉದ್ದೇಶದ ವಿದ್ಯುತ್ ಸಂಪರ್ಕ ಪಡೆಯಲು ಸೂಕ್ತ ಮಾಹಿತಿಯುಳ್ಳ ಎನ್ಒಸಿ ನೀಡುವ ಕ್ರಮವನ್ನು ಮೆಸ್ಕಾಂ ಜಾರಿ ಮಾಡಿದೆ.
2024 ಡಿಸೆಂಬರ್ 17ರಂದು ಸುಪ್ರೀಂಕೋರ್ಟ್ ನೀಡಿದ ಆದೇಶದ ಅನ್ವಯ ಎನ್ಒಸಿ ಪಡೆಯಲು ಮೆಸ್ಕಾಂ ಕ್ರಮ ವಹಿಸಿದೆ. ಇದರನ್ವಯ ಗ್ರಾಮ ಪಂಚಾಯತ್ ಆಡಳಿತದಲ್ಲಿ ಮನೆ, ಕಟ್ಟಡ, ಮಳಿಗೆ ಹೊಂದಿರುವ ಖಾತೆ ನಂಬರ್ ವಿವರ ನಮೂದಿಸಿ ವಾಸಕ್ಕೆ ಯೋಗ್ಯವಾಗಿದೆ. ಪೂರ್ವ, ಪಶ್ಚಿಮ,ಉತ್ತರ, ದಕ್ಷಿಣ ಚೆಕ್ಬಂದಿ ನಮೂದಿಸಿ ಕಟ್ಟಡ, ಮನೆ ಜಾಗ ಗ್ರಾಮ ಠಾಣ ಪ್ರದೇಶ ವ್ಯಾಪ್ತಿಯಲ್ಲಿದೆ, ಇಲ್ಲಎಂದು ದೃಢೀಕರಿಸಿ ಗ್ರಾ.ಪಂ. ಪಿಡಿಒ ಎನ್.ಒ.ಸಿ ನೀಡ ಬೇಕಿದೆ. ವಿದ್ಯುತ್ ಸಂಪರ್ಕ ಪಡೆಯಲು ಹೊಸ ಮಾದರಿಯಲ್ಲಿ ಎನ್.ಒ.ಸಿ ಸಲ್ಲಿಸಬೇಕು ಎಂಬ ಕಡ್ಡಾಯ ಸೂಚನೆ ಸಾರ್ವಜನಿಕರನ್ನು ಇಕ್ಕಟ್ಟಿಗೆ ಸಿಕ್ಕಿಸಿದೆ.

j3tvkannada
ವಿದ್ಯುತ್ ಸಂಪರ್ಕಕ್ಕೆ ಎನ್.ಒ.ಸಿ ದಾಖಲೆ ನೀಡಲು ಗ್ರಾಮ ಪಂಚಾಯತ್ ಆಡಳಿತ ಮಾದರಿಯೊಂದನ್ನು ಪಾಲಿಸುತ್ತಿದೆ. ಕಟ್ಟಡ, ಮನೆ ಖಾತೆ ನಂಬರ್ ದಾಖಲಿಸಿ ಕೆಲವು ಷರತ್ತು ವಿಧಿಸಿ ಎನ್.ಒ.ಸಿ ನೀಡುತ್ತಿದೆ. ಎನ್.ಒ.ಸಿ ಆಸ್ತಿ ಮಾಲೀಕತ್ವ ಹಕ್ಕು ದೃಢೀಕರಿಸುವುದಿಲ್ಲ, ಸಿವಿಲ್ ವ್ಯಾಜ್ಯಕ್ಕೆ ಹೊರತಾಗಿರುತ್ತದೆ. ಕಂದಾಯ, ಅರಣ್ಯ ಇಲಾಖೆಯಿಂದ ಎನ್ಒಸಿ ಪಡೆಯ ಬೇಕಿದ್ದರೆ ಅದನ್ನು ಪಡೆದ ನಂತರ ವಿದ್ಯುತ್ ಸಂಪರ್ಕದ ಎನ್.ಒ.ಸಿ ಪರಿಗಣಿಸಬೇಕು. ಸಿವಿಲ್ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಎನ್.ಒ.ಸಿಗೆ ಸಹಿ ಮಾಡಿದ ವ್ಯಕ್ತಿ ಹೊಣೆಯಲ್ಲ ಎಂದು ಗ್ರಾಮ ಪಂಚಾಯತ್ ಪಿ.ಡಿ.ಒ ಎನ್.ಒ.ಸಿ ದಾಖಲೆ ನೀಡುತ್ತಿರುವುದು ಸಮಸ್ಯೆ ತಾರಕಕ್ಕೇರುವಂತೆ ಮಾಡಿದೆ. ಕಟ್ಟಡ, ಮನೆಗಿರುವ ಚೆಕ್ಬಂದಿ ಮಾಹಿತಿ ನಮೂದಿಸುವ ಅಧಿಕಾರ ಸರ್ವೆಯರ್ ಇಲಾಖೆಗೆ ಸಂಬಂಧ ಪಟ್ಟಿದೆ. ವಾಸಕ್ಕೆ ಯೋಗ್ಯ ಎಂಬ ಮಾಹಿತಿ ದೃಢೀಕರಿಸುವ ಅಧಿಕಾರ ಪಿಡಿಒ ಗಿಲ್ಲ.
ಈ ರೀತಿಯ ಮಾಹಿತಿಯುಳ್ಳ ಎನ್ಒಸಿ ನೀಡಲು ಸಾಧ್ಯವಿಲ್ಲಎಂಬ ಆಕ್ಷೇಪಣೆ ಜಟಾಪಟಿಗೆ ಆಸ್ಪದ ಒದಗಿಸಿದೆ. ಕುಡಿಯುವ ನೀರು, ವಿದ್ಯುತ್ ಸಾರ್ವಜನಿಕರಿಗೆ ಕಡ್ಡಾಯವಾಗಿ ನೀಡಬೇಕಿರುವ ಮೂಲ ಸೌಕರ್ಯಗಳ ಪಟ್ಟಿಯಲ್ಲಿದೆ. ಎನ್ಒಸಿ ವಿಷಯ ಮುಂದಿಟ್ಟು ವಿದ್ಯುತ್ ಸಂಪರ್ಕ ನಿರಾಕರಣೆ ಪ್ರಜಾಪ್ರಭುತ್ವ ಆಡಳಿತಕ್ಕೆ ನಾಚಿಕೆಗೇಡಿನ ಸಂಗತಿಯಂತಿದೆ. ಭೂಮಿ ದಾಖಲೆ ನಕ್ಷೆ ಒಡೆತನ ಇಲ್ಲದೆ ಸಂಪರ್ಕ ಬೇಡ ಎಂಬ ನಿರ್ಧಾರ ಸರಿಯೇ ಎಂಬ ಸಾರ್ವಜನಿಕರ ಪ್ರಶ್ನೆಗೆ ಸರಕಾರ ಉತ್ತರಿಸಬೇಕಿದೆ.
ವಿದ್ಯುತ್ ಸಂಪರ್ಕ ನೀಡಲು ಕಡ್ಡಾಯ ನಿಯಮ ಪಾಲಿಸುವ ಮುನ್ನ ಸಾರ್ವಜನಿಕರ ಅವಶ್ಯಕತೆ ಏನಿದೆ ಎಂಬುದನ್ನು ಮೆಸ್ಕಾಂ, ಗ್ರಾಮ ಪಂಚಾಯಿತ್ ಪಿ.ಡಿ.ಒ ಗಮನಿಸಬೇಕು. ಮೆಸ್ಕಾಂ ಗ್ರಾಮ ಪಂಚಾಯಿತಿ ಸಾರ್ವಜನಿಕರ ಪರವಾಗಿ ಕೆಲಸ ಮಾಡುವುದು ಮುಖ್ಯ. ಗ್ರಾಮ ಪಂಚಾಯಿತಿ ನೀಡಿದ ಎನ್ಒಸಿ ದಾಖಲೆಯನ್ನು ಮೆಸ್ಕಾಂ ಪರಿಗಣಿಸುವುದು ಅವಶ್ಯಕ. ಸಾರ್ವಜನಿಕರ ಹಿತದೃಷ್ಟಿಯಿಂದ ಸಮಸ್ಯೆಯನ್ನು ಸರಕಾರದ ಗಮನಕ್ಕೆ ತರುತ್ತೇನೆ.

j3tvkannada
ರಾಜ್ಯಾದ್ಯಂತ ಹೊಸ ವಿದ್ಯುತ್ ಸಂಪರ್ಕ ಪಡೆಯಲು ಸ್ವಾಧೀನಾನುಭವ ಪತ್ರವನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ ಕಟ್ಟಡ ನಿರ್ಮಾಣ ಹಾಗೂ ಕೈಗಾರಿಕೆಗಳಿಗೆ ತೊಂದರೆಯಾಗಿದೆ. ಒಸಿ ಪ್ರಮಾಣ ಪತ್ರ ಇಲ್ಲದ ಕಾರಣಕ್ಕೆ ವಿದ್ಯುತ್ ವಿತರಣಾ ಕಂಪನಿಗಳು ವಿದ್ಯುತ್ ಸಂಪರ್ಕಕ್ಕಾಗಿ ಸಲ್ಲಿಸಲಾಗಿರುವ ಮನವಿಯನ್ನು ನಿರಾಕರಿಸುತ್ತಿವೆ. ಇದರಿಂದಾಗಿ ಕಟ್ಟಡ ಮಾಲೀಕರು ಹಾಗೂ ಇಂಧನ ಇಲಾಖೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸ್ವಾಧೀನಾನುಭವ ದಾಖಲೆ ಇಲ್ಲದ ಯಾವುದೇ ಕಟ್ಟಡಗಳ ವಿದ್ಯುತ್ ಸಂಪರ್ಕ ನೀಡದಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಆದೇಶಿಸಿದೆ.
ಈ ಆದೇಶವನ್ನು ಬೆಸ್ಕಾಂ ಸೇರಿ ಎಲ್ಲಾ 6 ಎಸ್ಕಾಂಗಳಿಗೂ ಈಗಾಗಲೇ ರವಾನಿಸಲಾಗಿದೆ. ಈ ಮೂಲಕ ಹೊಸ ಆದೇಶದಿಂದಾಗಿ ಒಸಿ ಇಲ್ಲದ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳ್ಳುವ ಆತಂಕ ಎದುರಾಗಿದೆ. ರಾಜ್ಯದಲ್ಲಿ ಹೊಸ ಮತ್ತು ತಾತ್ಕಾಲಿಕ ವಿದ್ಯುತ್ ಸಂಪರ್ಕಗಳಿಗೆ ಸ್ಮಾರ್ಟ್ ಮೀಟರ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಈಗಿರುವ ವಿದ್ಯುತ್ ಸಂಪರ್ಕಗಳಿಗೆ ಸ್ಮಾರ್ಟ್ ವಿದ್ಯುತ್ ಮೀಟರ್ ಅಳವಡಿಕೆ ಕಡ್ಡಾಯವೇನಲ್ಲ ಎಂದು ವಿದ್ಯುತ್ ಇಲಾಖೆ ಸ್ಪಷ್ಟಪಡಿಸಿದೆ. ಸದ್ಯ ಬೆಸ್ಕಾಂ ವ್ಯಾಪ್ತಿಯಲ್ಲಿ ಹಂತಹಂತವಾಗಿ ಸ್ಮಾರ್ಟ್ ಮೀಟರ್ ಅಳವಡಿಕೆ ಮತ್ತು ಬದಲಾವಣೆ ಕಾರ್ಯ ಕೈಗೊಳ್ಳಲಾಗಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.