
ಉತ್ತರ ಕನ್ನಡ: ಗಂಗಾವಳಿ-ಮಂಜುಗುಣಿ ಸಂಪರ್ಕ ಕಲ್ಪಿಸುವ ಗಂಗಾವಳಿ ನದಿಯ ಸೇತುವೆಯ ಕಟ್ಟೆ ಮೇಲೆ ನಡೆದ ಘಟನೆಯೊಂದರಲ್ಲಿ, ಪ್ರವಾಸಿ ದಂಪತಿಗಳ ಅಪಾಯಕಾರಿ ಕೃತ್ಯದಿಂದ ಪುಟ್ಟ ಮಗುವೊಂದು ಜೀವಾಪಾಯದಿಂದ ಪಾರಾಗಿದೆ. ಗೋಕರ್ಣದಿಂದ ಅಂಕೋಲಾಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಈ ದಂಪತಿಗಳು, ಸೇತುವೆಯ ಬಳಿ ವಾಹನವನ್ನು ನಿಲ್ಲಿಸಿ, ಫೋಟೋ ತೆಗೆಯಲು ಕಟ್ಟೆಯ ಬಳಿಗೆ ತೆರಳಿದ್ದರು. ಈ ವೇಳೆ, ತಮ್ಮ ಕೈಯಲ್ಲಿದ್ದ ಎರಡು ವರ್ಷದ ಮಗುವನ್ನು ಸೇತುವೆಯ ಕಟ್ಟೆಯ ಮೇಲೆ ಅಪಾಯಕಾರಿಯಾಗಿ ಇರಿಸಿದ್ದರು. ಸ್ವಲ್ಪ ಯಾಮಾರಿದರೂ ಮಗು ನದಿಗೆ ಬೀಳುವ ಭೀತಿಯಿತ್ತು.

j3tvkannada
ಈ ದೃಶ್ಯವನ್ನು ಸೇತುವೆಯ ಮೇಲೆ ಅಳವಡಿಸಿದ್ದ ಸಿ.ಸಿ.ಟಿ.ವಿ ಕ್ಯಾಮರಾದ ಮೂಲಕ ಗಮನಿಸಿದ ಗಂಗಾವಳಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ತಕ್ಷಣ ಕಾರ್ಯ ಪ್ರವೃತ್ತರಾದರು. ಠಾಣೆಯಿಂದಲೇ ಸೈರನ್ ಮೊಳಗಿಸಿ, ಪಿ.ಎ ಸಿಸ್ಟಮ್ ಮೂಲಕ ಎಚ್ಚರಿಕೆ ನೀಡಿದ ಪೊಲೀಸ್ ಇನ್ಸ್ಪೆಕ್ಟರ್ ಶ್ರೀಧರ್ ಎಸ್.ಆರ್. ದಂಪತಿಗಳಿಗೆ ಮಗುವನ್ನು ತಕ್ಷಣ ರಕ್ಷಿಸಿಕೊಳ್ಳುವಂತೆ ಸೂಚಿಸಿದರು.
ಏಕಾಏಕಿ ಕೇಳಿದ ಧ್ವನಿಯಿಂದ ದಿಗಿಲುಗೊಂಡ ದಂಪತಿಗಳು, ಮಗುವನ್ನು ತಬ್ಬಿಕೊಂಡು ಸುರಕ್ಷಿತ ಸ್ಥಳಕ್ಕೆ ತೆರಳಿದರು. ಈ ರೀತಿಯಾಗಿ, ಪೊಲೀಸರ ಸಮಯಪ್ರಜ್ಞೆಯಿಂದ ಮಗುವಿನ ಜೀವ ಉಳಿಯಿತು. ಇತ್ತೀಚೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಮಾಹಿತಿ ಕೇಂದ್ರವನ್ನು ಪುನರಾರಂಭಿಸಲಾಗಿದ್ದು, ಗಂಗಾವಳಿ ಸೇತುವೆ ಸೇರಿದಂತೆ ಹಲವು ಕಡೆ ಸಿ.ಸಿ.ಟಿ.ವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ಗೋಕರ್ಣದಿಂದ ಸುಮಾರು ಐದು ಕಿಲೋಮೀಟರ್ ದೂರದಲ್ಲಿರುವ ಈ ನೂತನ ಸೇತುವೆಯ ಮೇಲಿನ ಕ್ಯಾಮರ ಈ ಘಟನೆಯಲ್ಲಿ ಮಗುವಿನ ರಕ್ಷಣೆಗೆ ನೆರವಾಯಿತು. ಸ್ಥಳೀಯ ಸಾರ್ವಜನಿಕರು ಪೊಲೀಸರ ಈ ಕಾರ್ಯವನ್ನು ಶ್ಲಾಘಿಸಿದ್ದಾರೆ. ಈ ಘಟನೆ, ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷತಾ ಕ್ರಮಗಳ ಮಹತ್ವವನ್ನು ಮತ್ತು ತಂತ್ರಜ್ಞಾನದ ಸಮರ್ಪಕ ಬಳಕೆಯನ್ನು ಒತ್ತಿ ಹೇಳುತ್ತದೆ.