
ಬೆಂಗಳೂರು: ಮೊಹಮ್ಮದ್ ಸಿದ್ಧಿಕ್ (55) ಎಂಬಾತ 2006ರಲ್ಲಿ ಅಕ್ರಮವಾಗಿ ಭಾರತಕ್ಕೆ ಬಂದಿದ್ದ. ಬಳಿಕ, ಮೊಹಮ್ಮದ್ ಸಿದ್ಧಿಕ್ ಬೆಂಗಳೂರಿನ ಕಾಡುಗೋಡಿಯ ದೊಡ್ಡಬನಹಳ್ಳಿ ಬಳಿ ವಾಸವಿದ್ದನು. ಪಶ್ಚಿಮ ಬಂಗಾಳದ ಮೆಲ್ಪಾ ಜಿಲ್ಲೆಯ ಶಾಲೆಯೊಂದರಲ್ಲಿ ನಕಲಿ ವರ್ಗಾವಣೆ ಪ್ರಮಾಣ ಪತ್ರ ಪಡೆದಿದ್ದು, ಬೆಂಗಳೂರು ಮಹಾ ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ. ಬಾಂಗ್ಲಾದೇಶ ಪ್ರಜೆಯನ್ನು ಇದೀಗ ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

j3tvkannada.in
ನಕಲಿ ವರ್ಗಾವಣೆ ಪತ್ರದ ಮೂಲಕ ಭಾರತದ ಪಾಸ್ಪೋರ್ಟ್, ವೋಟರ್ ಐಡಿ, ಪಾನ್ ಕಾರ್ಡ್ ಪಡೆದಿದ್ದಾಗಿ ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾನೆ. ಮೊಹಮ್ಮದ್ ಸಿದ್ಧಿಕ್ ವಿರುದ್ಧ ಕಾಡುಗೋಡಿ ಠಾಣೆಯಲ್ಲಿ ಫಾರಿನರ್ಸ್ ಆಕ್ಟ್, BNS 336(3), 340(2), 339ರಡಿಯಲ್ಲಿ ಪ್ರಕರಣ ದಾಖಲಾಗಿದೆ.
ಮೊಹಮ್ಮದ್ ಸಿದ್ದಿಕ್ ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸವಿರುವ ಬಾಂಗ್ಲಾ ವಲಸಿಗರಿಂದ ಹಣ ಪಡೆದುಕೊಂಡು, ಭಾರತೀಯ ದಾಖಲಾತಿಗಳಾದ ಪಾಸ್ಪೋರ್ಟ್, ಪ್ಯಾನ್ ಕಾರ್ಡ್ಗಳನ್ನು ಮಾಡಿಸಿಕೊಂಡಿದ್ದಾನೆ. ಈತನ ಜೊತೆಗೆ ಇನ್ನೂ 15 – 20 ಜನ ಬಾಂಗ್ಲಾ ವಲಸಿಗರು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ ಎಂದು ಎಫ್.ಐ.ಆರ್.ನಲ್ಲಿ ದಾಖಲಾಗಿದೆ.
ಮೊಹಮ್ಮದ್ ಸಿದ್ದಿಕ್ನನ್ನು ಪೊಲೀಸರು ವಿಚಾರಣೆ ನಡೆಸಿದಾಗ, ಬೆಂಗಳೂರು ನಗರದ ಥಣಿಸಂದ್ರದ ವ್ಯಕ್ತಿಯೊಬ್ಬರು ಪ್ಯಾನ್ ಕಾರ್ಡ್, ವೋಟರ್ ಐಡಿ ಮಾಡಿಸಿಕೊಟ್ಟಿದ್ದಾರೆ. ಮತ್ತು ಶಾಲೆಯ ವರ್ಗಾವಣೆ ಪತ್ರದ ಆಧಾರದ ಮೇಲೆ ಭಾರತದ ಪಾಸ್ಪೋರ್ಟ್ ಅನ್ನು ಏಜೆಂಟ್ ಮಾಡಿಸಿಕೊಟ್ಟಿದ್ದಾರೆ ಎಂದು ಬಾಯಿ ಬಿಟ್ಟಿದ್ದಾನೆ.