
ಬಾಗಲಕೋಟೆ:ಗ್ರಾಮೀಣ ಭಾಗದ ಜನರಿಗೆ ಪ್ರತಿಯೊಂದು ಮನೆಗೂ ಶುದ್ದವಾದ ಕುಡಿಯುವ ನೀರನ್ನು ಸರಬರಾಜು ಮಾಡಲು ಸರಕಾರ ಯೋಜನೆಯನ್ನು ಹಮ್ಮಿಕೊಂಡಿದೆ. ಸರಕಾರದ ಜಲಜೀವನ ಮಿಷನ್ ಯೋಜನೆಡಿಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಪಟ್ಟಣದ ಓಣಿಗಳಲ್ಲಿ ತಿಂಗಳ ಹಿಂದೆ ಎಲ್ಲೆಂದರಲ್ಲಿ ರಸ್ತೆ, ಮನೆಯ ಅಂಗಳವನ್ನು ಬಿಡದೆ ನಳ್ಳಿ ನೀರಿನ ಪೂರೈಕೆಗಾಗಿ ಕಾಂಕ್ರೀಟ್ ರಸ್ತೆಗಳನ್ನು ಅಗೆದು ಹಾಕಿದ್ದಾರೆ. ಇದರಿಂದ ರಾತ್ರಿ ಸಮಯದಲ್ಲಿ ಸಾರ್ವಜನಿಕರಿಗೆ ಓಡಾಡಲು ಅನಾನುಕೂಲವಾಗಿದೆ.

ಪಟ್ಟಣದ ಕೆಲವು ಕಡೆಗಳಲ್ಲಿ ಪೈಪ್ ಅಳವಡಿಕೆಗಾಗಿ ಅಗೆದ ಜಾಗಗಳನ್ನು ಹಲವು ದಿನಗಳಾದರೂ ಮುಚ್ಚದೆ ನಿರ್ಲಕ್ಷ್ಯ ತೋರಿದ್ದಾರೆ. ಇದರಿಂದಾಗಿ ಜನರು ನಡೆದಾಡಲು ಹರಸಾಹಸ ಪಡುವಂತಾಗಿದೆ. ವಾಹನ ಸವಾರರು, ವೃದ್ಧರು, ಮಕ್ಕಳು ಬಿದ್ದು ಗಾಯಗೊಂಡಿದ್ದಾರೆ ಎಂದು ಸಾರ್ವಜನಿಕರು ಈ ಬಗ್ಗೆ ದೂರಿದ್ದಾರೆ.
ಮನೆಯ ಮುಂದೆ ಪೈಪ್ ಲೈನ್ಗಾಗಿ ಅಗೆದಿರುವ ತಗ್ಗಾದ ಗುಂಡಿಗಳಲ್ಲಿ ನೀರು ನಿಂತು ದುರ್ವಾಸನೆ ಬೀರುತ್ತದೆ. ಸೊಳ್ಳೆಗಳ ಕಾಟ ವಿಪರೀತವಾಗಿ ಹಲವು ಸಾಂಕಾಮಿಕ ಕಾಯಿಲೆಗಳು ಬರುವ ಸಂಭವವಿದೆ. ಇದರಿಂದಾಗಿ ಸ್ಥಳೀಯರಲ್ಲಿ ಆತಂಕ ಮೂಡಿದೆ. ಜಲಜೀವನ ಮಿಷನ್ ಯೋಜನೆಯ ಈ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ. ಆದಷ್ಟು ಬೇಗ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲವನ್ನು ಮಾಡಿಕೊಡಬೇಕಾಗಿದೆ.