
ತುಮಕೂರು: ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರು ಬೆಂಗಳೂರಿಗೆ ನಿತ್ಯ ಪ್ರಯಾಣಿಸುವ ಉದ್ಯೋಗಿಗಳಿಗೆ ಅನುಕೂಲವಾಗುವಂತೆ ಹೊಸ ಯೋಜನೆಯೊಂದನ್ನು ರೂಪಿಸಿದ್ದಾರೆ. ತುಮಕೂರಿನಿಂದಲೇ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ, ಬೆಂಗಳೂರಿನ ಐಟಿ-ಬಿಟಿ ಕಂಪನಿಗಳ ಶಾಖೆಗಳನ್ನು ತುಮಕೂರಿನಲ್ಲಿ ತೆರೆಯಲು ಪ್ರೋತ್ಸಾಹಿಸಲಾಗುವುದು. ಈ ಸಂಬಂಧ, ಉದ್ಯೋಗಿಗಳು ತಮ್ಮ ಸಂಸ್ಥೆಯ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ನೀಡುವಂತೆ ಕೋರಲಾಗಿದೆ.

j3tvkannada
ಇಂತಹದ್ದೊಂದು ಪ್ರಯತ್ನದ ಮೂಲಕ ಬೆಂಗಳೂರಿಗೆ ನಿತ್ಯ ಓಡಾಟ ತಪ್ಪಿಸಿ ಜಿಲ್ಲಾ ಕೇಂದ್ರ ತುಮಕೂರಿನಿಂದಲೇ ಉದ್ಯೋಗಿಗಳು ತಮ್ಮ ಸಂಸ್ಥೆಯ ಕೆಲಸ ಮಾಡುವಂತಹ ಅವಕಾಶ ಕಲ್ಪಿಸಲು ತುಮಕೂರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಪ್ರಯತ್ನಿಸುತ್ತಿದ್ದಾರೆ. ಜಿಲ್ಲಾಧಿಕಾರಿ ಕನಸು ಸಾಕಾರಕ್ಕೆ ಉದ್ಯೋಗಿಗಳು ಸ್ಪಷ್ಟ ಮಾಹಿತಿ ನೀಡಬೇಕಷ್ಟೇ.
ಹೌದು, ಬೆಂಗಳೂರಿನಲ್ಲಿರುವ ಐಟಿ-ಬಿಟಿ ಕಂಪನಿಗಳಿಗೆ ಪ್ರತಿನಿತ್ಯ ಸಾವಿರಾರು ಉದ್ಯೋಗಿಗಳು ಓಡಾಡುತ್ತಿದ್ದಾರೆ. ಅಂತಹವರಿಗೆ ಸಾಧ್ಯವಾದಷ್ಟು ತುಮಕೂರಿನಿಂದಲೇ ಕೆಲಸ ಮಾಡುವಂತಹ ಅವಕಾಶ ಕಲ್ಪಿಸಲು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಹೊಸ ಯೋಜನೆ ರೂಪಿಸಿದ್ದಾರೆ. ಉದ್ಯೋಗಿಗಳು ಮತ್ತು ಅವರು ಕೆಲಸ ಮಾಡುತ್ತಿರುವ ಸಂಸ್ಥೆಯ ದತ್ತಾಂಶ ಸಂಗ್ರಹಿಸಿ, ಹೆಚ್ಚಿನ ಸಂಖ್ಯೆಯಲ್ಲಿ ತುಮಕೂರು ಉದ್ಯೋಗಿಗಳಿರುವ ಕಂಪನಿಗಳ ಜತೆ ಖುದ್ದು ಮಾತನಾಡಿ, ಆ ಕಂಪನಿಗಳ ಶಾಖೆಯನ್ನು ತುಮಕೂರಲ್ಲಿ ಆರಂಭಿಸಲು ಉತ್ತೇಜಿಸುವುದು ಡಿ.ಸಿ ಅವರ ಕನಸಿನ ಯೋಜನೆ.
ಶಾಖೆಗೆ ಜಾಗ:-
ಉದ್ಯೋಗಿಗಳು ಮತ್ತು ಅವರು ಕೆಲಸ ಮಾಡುತ್ತಿರುವ ಕಂಪನಿ ಮಾಹಿತಿ ಪಡೆದ ಬಳಿಕ ಜಿಲ್ಲಾಡಳಿತವು ಕಂಪನಿಗಳ ಜತೆ ಮಾತನಾಡಿ, ತುಮಕೂರಲ್ಲಿ ಜಾಗ ನೀಡಿ ಕಂಪನಿಯ ಶಾಖೆ ತೆರೆಯಲು ಉತ್ತೇಜಿಸಲಿದೆ.
ಉದ್ಯೋಗ ಸೃಷ್ಟಿ:-
ಜಿಲ್ಲಾಧಿಕಾರಿ ಚಿಂತನೆ ಕಾರ್ಯರೂಪಕ್ಕೆ ಬಂದರೆ ಹಾಲಿ ಉದ್ಯೋಗಿಗಳು ಬೆಂಗಳೂರಿಗೆ ಓಡಾಡುವುದನ್ನು ತಪ್ಪಿಸುವುದು ಮಾತ್ರವಲ್ಲದೆ ಹೊಸ ಉದ್ಯೋಗ ಸೃಷ್ಟಿಯೂ ಆಗಲಿದೆ.