
ರಾಮನಗರ: ಬೆಂಗಳೂರಿನಿಂದ – ದಿಂಡಿಗಲ್ವರೆಗೆ ನಿರ್ಮಾಣವಾಗಿರುವ ನೂತನ ಹೆದ್ದಾರಿಯಲ್ಲಿ ನಿರ್ಮಾಣಗೊಂಡಿರುವ ಟೋಲ್ ವಿರೋಧಿಸಿ ನಡೆದ ಹೋರಾಟದಲ್ಲಿ ಮೈಮೇಲೆ ಇಂಜಿನ್ ಆಯಿಲ್ ಸುರಿದುಕೊಂಡ ಹೋರಾಟಗಾರರ ಮೇಲೆ ಕಗ್ಗಲೀಪುರ ಪೊಲೀಸರು ಎಫ್.ಐ.ಆರ್ ದಾಖಲಿಸಿದ್ದಾರೆ.

j3tvkannada
ರಾಷ್ಟ್ರೀಯ ಹೆದ್ದಾರಿಯ ಸೋಮನಹಳ್ಳಿ ಬಳಿ ನಿರ್ಮಾಣಗೊಂಡಿರುವ ಟೋಲ್ ಬಳಿ ರೈತ ಸಂಘ ಮತ್ತು ಸ್ಥಳೀಯರು ಬೃಹತ್ ಸಂಖ್ಯೆಯಲ್ಲಿ ಸೇರಿ ಹೋರಾಟ ನಡೆಸಿದ್ದರು. ಅಲ್ಲದೇ ಮೈಮೇಲೆ ಇಂಜಿನ್ ಆಯಿಲ್ ಸುರಿದುಕೊಂಡು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದರು.
ಸೋಮನಹಳ್ಳಿ ಟೋಲ್ ಬಳಿ ನಡೆದ ಹೋರಾಟದಲ್ಲಿ ಅಧ್ಯಕ್ಷತೆ ವಹಿಸಿದ್ದ ನದೀಂ ಪಾಷಾ, ಪ್ರಶಾಂತ್ ಹೊಸದುರ್ಗ, ವೆಂಕಟೇಶ್, ಮಂಜುನಾಥ್, ಆರೋಗ್ಯ ಸ್ವಾಮಿ, ನೂರುಲ್ಲಾ, ಚೆಲುವ, ಮಂಜುನಾಥ, ಗೋವಿಂದ, ಲೋಕೇಶ್, ನಾಗಭೂಷಣ್, ಗೋಪಾಲ್, ರಾಜೇಶ್, ತಬಸುಮ್, ಪವಿತ್ರ ಅವರ ವಿರುದ್ಧ ಪೊಲೀಸರು ಎಫ್.ಐ.ಆರ್ ದಾಖಲಿಸಿದ್ದು, ಪ್ರತಿಭಟನೆಯಲ್ಲಿ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರಲಿಲ್ಲವೆಂದು ಕೋಪಗೊಂಡು ಹೀಗೆಲ್ಲಾ ಮಾಡಿದರೆ ಸರಕಾರಕ್ಕೆ ಬಿಸಿ ಮುಟ್ಟುವುದಿಲ್ಲ. ನಡೆಯಿರಿ ರಸ್ತೆ ತಡೆಯೋಣ ಎಂದು ಪ್ರಚೋದಿಸಿದ್ದಾರೆ. ಅಲ್ಲದೇ ರಸ್ತೆ ಬಂದ್ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡಿದ್ದಾರೆ ಎಂದು ಸ್ವಯಂ ದೂರು ದಾಖಲಿಸಿಕೊಂಡಿರುವ ಪೊಲೀಸರು ಎಫ್.ಐ.ಆರ್ನಲ್ಲಿ ಉಲ್ಲೇಖಿಸಿದ್ದಾರೆ.
ಹೋರಾಟಗಾರರ ಆಕ್ರೋಶ:-
ಎಫ್.ಐ.ಆರ್ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪ್ರತಿಭಟನಾಕಾರರು, ಪೊಲೀಸರು ಮೊದಲು ಹೋರಾಟವನ್ನು ಹತ್ತಿಕ್ಕುವ ಕೆಲಸ ಬಿಡಬೇಕು. ಸಾರ್ವಜನಿಕರಿಗೆ ತೊಂದರೆ ಕೊಡುವ ಉದ್ದೇಶದಿಂದಾಗಲೀ ಅಥವಾ ಬೇರೆ ಉದ್ದೇಶದಿಂದಾಗಲೀ ಟೋಲ್ ವಿರುದ್ಧ ಹೋರಾಟವನ್ನು ರೂಪಿಸಿಲ್ಲ. ಸಾರ್ವಜನಿಕರಿಗೆ ಒಳ್ಳೆಯದಾಗಲೀ ಎಂಬ ಉದ್ದೇಶದಿಂದಲೇ ಹೋರಾಟವನ್ನು ರೂಪಿಸಿದ್ದು, ಹೀಗಿರುವಾಗ ಪೊಲೀಸರು ಎಫ್.ಐ.ಆರ್ ದಾಖಲಿಸಿರುವುದು ತಪ್ಪು ಎಂದು ಅವರು ಹೇಳಿದರು.
ರಾಜಕೀಯ ಪಕ್ಷಗಳು ನಡೆಸುವ ಹೋರಾಟಗಳಿಗೆ ಯಾವುದೇ ರೀತಿಯ ಕಾನೂನು ಪಾಲನೆಯಾಗುವುದಿಲ್ಲ. ಆದರೆ ಅಲ್ಲಿ ಪೊಲೀಸರು ಮೂಕ ಪ್ರೇಕ್ಷಕರಾಗಿರುತ್ತಾರೆ. ಹೋರಾಟಗಾರರು ನಡೆಸುವ ಹೋರಾಟಗಳಿಗೆ ಮಾತ್ರ ಸಾರ್ವಜನಿಕರಿಗೆ ತೊಂದರೆ ಎಂಬ ದೊಡ್ಡ ದೊಡ್ಡ ಮಾತುಗಳನ್ನಾಡುತ್ತಾರೆ. ಇನ್ನೊಂದು ಕಡೆ ಸರಕಾರಿ ಕಾರ್ಯಕ್ರಮದಲ್ಲಿ ತಾವೇ (ಪೊಲೀಸರೇ) ಮುಂದೆ ನಿಂತು ಸೀರೆ ಹಂಚುತ್ತಾರೆ ಎಂದು ಹೇಳಿದ್ದರು.
ಎಲ್ಲಿಗೆ ಬಂತು ನಮ್ಮ ಆಡಳಿತ ಶಾಹಿ ಎಂಬುದೇ ತಿಳಿಯುತ್ತಿಲ್ಲ. ಸ್ಥಳೀಯ ಜನರಿಗೆ ಟೋಲ್ ವಿನಾಯಿತಿ ನೀಡಿ ಎಂದಿದ್ದು ತಪ್ಪೇ ಅದನ್ನು ಪತಿಭಟಿಸುವ ಹಕ್ಕನ್ನು ಕಸಿದರೆ ಹೇಗೆ ಎಂದು ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಯ ಕಾರಣಕ್ಕಾಗಿ ನಮ್ಮ ಮೇಲೆ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ. ಆದರೆ ಇದೇ ಪೋಲೀಸ್ ಇಲಾಖೆಯ ಪೌರುಷ ರಾಜಕಾರಣಿಗಳು ಪ್ರತಿಭಟನೆಯ ಹೆಸರಿನಲ್ಲಿ ತೊಂದರೆ ಕೊಡುವಾಗ ಎಲ್ಲಿ ಹೋಗಿರುತ್ತದೆ. ರಾಜಕಾರಣಿಗಳು ಬರುವ ಮಾರ್ಗದಲ್ಲಿ ಜನಸಾಮಾನ್ಯರನ್ನು ಅಡ್ಡ ಹಾಕಿ ಟ್ರಾಫಿಕ್ ಜಾಮ್ ಮಾಡುವ ಸಂದರ್ಭದಲ್ಲಿ ಈ ಕಾನೂನು ನೆನಪಾಗುವುದಿಲ್ಲವೇ ಇದು ಆತ್ಮ ಸ್ಥೈರ್ಯದ ಮೇಲೆ ಎಸಗಿದ ದಾಳಿಯಾಗಿದ್ದು, ನಾವು ಎದೆಗುಂದುವುದಿಲ್ಲ ಎಂದು ಹೇಳಿದ್ದಾರೆ.