
ಉತ್ತರ ಕನ್ನಡ(ಕಾರವಾರ):ಅವೈಜ್ಞಾನಿಕವಾಗಿ ಗುಡ್ಡ ಕತ್ತರಿಸಿದ್ದರ ಪರಿಣಾಮ ಉತ್ತರ ಕನ್ನಡ ಜಿಲ್ಲೆಯ ಗುಡ್ಡದಂಚಿನ ಊರುಗಳಲ್ಲಿ ಮುಂಗಾರಿಗೂ ಮುನ್ನವೇ ಜನ ಮನೆ ಖಾಲಿ ಮಾಡುವ ಒತ್ತಡಕ್ಕೆ ಸಿಲುಕಿದ್ದಾರೆ. ತಕ್ಷಣವೇ ಮನೆ ತೊರೆಯುವಂತೆ ಜಿಲ್ಲಾಡಳಿತ ಎಲ್ಲರಿಗೂ ನೋಟಿಸ್ ಜಾರಿ ಮಾಡುತ್ತಿದೆ. ಈ ರೀತಿಯ ನೋಟಿಸ್ ಒಬ್ಬಿಬ್ಬರಿಗಲ್ಲ.

j3tvkannada.in
ಕಾರವಾರದಲ್ಲಿ 35, ಅಂಕೋಲಾದಲ್ಲಿ 39 ಜನವಸತಿ ಪ್ರದೇಶ, ಹೀಗೆ ಪ್ರತಿ ತಾಲೂಕಿನಲ್ಲಿ ಕತ್ತರಿಸಿದ ಗುಡ್ಡಗಳ ಅಂಚಿನ ಮನೆಗಳನ್ನು ಖಾಲಿ ಮಾಡಿ ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ತಿಳಿಸಲಾಗುತ್ತಿದೆ. ಕುಮಟಾ ತಾಲೂಕು ಒಂದರಲ್ಲಿ 12 ಊರುಗಳ 79 ಮನೆಗಳಿಗೆ ನೋಟಿಸ್ ಕೊಡಲು ಗುರುತಿಸಲಾಗಿದೆ.
ಕಳೆದ ವರ್ಷ ಶಿರೂರು ಸೇರಿದಂತೆ ಅನೇಕ ಕಡೆ ಗುಡ್ಡ ಕುಸಿತ ಆಗಿದೆ. ಅದರ ನಂತರ ನಡೆದ ಅಧ್ಯಯನದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ 439 ಗುಡ್ಡ ಕುಸಿತ ಆಗಬಹುದಾದ ಸ್ಥಳಗಳಿವೆ ಎಂದು ಭಾರತ ಭೂವೈಜ್ಞಾನಿಕ ಸಮೀಕ್ಷೆ (ಜಿಎಸ್ಐ) ತಂಡ ತಿಳಿಸಿದೆ. ಆ ಸ್ಥಳಗಳೂ ಸೇರಿದಂತೆ ವರದಿಯಲ್ಲಿ ಇಲ್ಲದ ಊರುಗಳಲ್ಲಿಯೂ ಅಲ್ಲಿನ ಪರಿಸರ ಸನ್ನಿವೇಶ ನೋಡಿ ಮನೆ ಖಾಲಿ ಮಾಡಿ, ಕಾಳಜಿ ಕೇಂದ್ರಕ್ಕೆ ತೆರಳುವಂತೆ ತಹಸೀಲ್ದಾರ್ ಮೂಲಕ ನೋಟಿಸ್ ಜಾರಿ ಮಾಡಲಾಗಿದೆ.
ಅಸಲಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ. 80 ರಷ್ಟು ಅರಣ್ಯ ಪ್ರದೇಶವೇ ಇದೆ. ತೋಟ, ಗಣಿಗಾರಿಕೆ, ರಸ್ತೆ, ಮನೆ ಕಟ್ಟಲು ನಾನಾ ಕಾರಣಕ್ಕೆ ಗುಡ್ಡಗಳನ್ನು ಕತ್ತರಿಸಲಾಗಿದೆ. ಅದರಲ್ಲಿ ರಸ್ತೆಗಾಗಿ ಕತ್ತರಿಸಿದ ಗುಡ್ಡಗಳು ತೀರಾ ಅಪಾಯಕಾರಿಯಾಗಿವೆ. ಸದ್ಯ ರಸ್ತೆಗಳ ಅಂಚಿನಲ್ಲಿಯೇ ಗುಡ್ಡ ಕುಸಿಯುತ್ತಿವೆ. ಆದರೆ, ಈ ವರ್ಷ ಗ್ರಾಮೀಣ ಭಾಗದಲ್ಲೂ ಗುಡ್ಡ ಕುಸಿಯುವ ಅಪಾಯ ಇದೆ ಎಂದು ತಜ್ಞರು ತಿಳಿಸಿದ್ದಾಗಿ ಜಿಲ್ಲಾಡಳಿತವು ನೋಟಿಸ್ನಲ್ಲಿ ತಿಳಿಸಿದೆ. ಇದು ಜನರಲ್ಲಿ ಗಾಬರಿ ಮೂಡಿಸುತ್ತಿದೆ.
ಪ್ರಕೃತಿ ವಿಕೋಪ ಎದುರಾದಾಗಲೆಲ್ಲ ಸರಕಾರವು ಸರಕಾರಿ ಶಾಲೆಗಳನ್ನೇ ಕಾಳಜಿ ಕೇಂದ್ರವನ್ನಾಗಿ ಪರಿವರ್ತಿಸುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳು ಕೂಡ ಗುಡ್ಡಗಳ ಅಂಚಿನಲ್ಲಿಯೇ ಇವೆ. ಎಷ್ಟೋ ಶಾಲೆಗಳ ಪಕ್ಕದಲ್ಲಿಯೇ ಕಳೆದ ವರ್ಷ ಗುಡ್ಡದ ಮಣ್ಣು ಸರಿದಿವೆ. ಈಗ ಗುಡ್ಡದ ಅಂಚಿನಲ್ಲಿರುವ ಎಲ್ಲರೂ ಕಾಳಜಿ ಕೇಂದ್ರಕ್ಕೆ ತೆರಳಬೇಕು ಎಂದರೆ ಅಷ್ಟೊಂದು ವ್ಯವಸ್ಥೆಯಾದರೂ ಎಲ್ಲಿದೆ ಎನ್ನುವುದು ಜನರ ಪ್ರಶ್ನೆ. ಗುಡ್ಡ ಕುಸಿಯಬಹುದಾದ ಸ್ಥಳಗಳಲ್ಲಿನ ನಿವಾಸಿಗಳಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ನೋಟಿಸ್ ಕೊಡುತ್ತಿದ್ದೇವೆ. ಎಷ್ಟು ಊರಿಗೆ, ಮನೆಗಳಿಗೆ ನೋಟಿಸ್ ಕೊಡಬೇಕು ಎನ್ನುವುದನ್ನು ತಹಸೀಲ್ದಾರ್ ಅವರೇ ನಿರ್ಧರಿಸುತ್ತಾರೆ, ಎಂದು ಕಾರವಾರ ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ತಿಳಿಸಿದ್ದಾರೆ.