
ಮೈಸೂರು: ನಗರದಲ್ಲಿ ಪೊಲೀಸರು ವಾಹನ ತಪಾಸಣೆಗಾಗಿ ಅವೈಜ್ಞಾನಿಕವಾದ ತಪಾಸಣಾ ಕ್ರಮಗಳನ್ನು ಮುಂದುವರೆಸಿದ್ದು, ಈ ದಿಢೀರ್ ತಪಾಸಣೆಗಳಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಡಿಜಿಪಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಹಳೆಯ ಪದ್ಧತಿಗಳನ್ನು ಬಿಟ್ಟು, ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

j3tvkannada.in
ತಪಾಸಣೆಯ ನೆಪದಲ್ಲಿ ಅಕ್ರಮ ವಸೂಲಿ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಇದಕ್ಕೆ ನಿರಂತರವಾಗಿ ಅಮಾಯಕರು ಬಲಿಯಾಗುತ್ತಿದ್ದಾರೆ. ಸೋಮವಾರ ಮಂಡ್ಯದಲ್ಲಿ ಮಗುವೊಂದು ದಾರುಣವಾಗಿ ಸಾವಿಗೀಡಾಗಿರುವುದು ಇದಕ್ಕೆ ತಾಜಾ ಉದಾಹರಣೆಯಾಗಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕರು ಈ ಕುರಿತು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯ ಕೇಳಿ ಬರುತ್ತಿದೆ.
ಅವೈಜ್ಞಾನಿಕ ಕ್ರಮ
ಹೆದ್ದಾರಿಯಲ್ಲಿ ಬ್ಯಾರಿಕೇಡ್ ಹಾಕಿ ವಾಹನಗಳನ್ನು ತಡೆಯುವುದು, ರಸ್ತೆಯಲ್ಲಿ ದಿಢೀರ್ ಅಡ್ಡ ಬಂದು ವಾಹನ ನಿಲ್ಲಿಸುವಂತೆ ಹೇಳುವುದು, ಮರದ ಹಿಂಬದಿಯಲ್ಲಿ ಅಡಗಿ ನಿಂತು ವಾಹನ ಬರುವಾಗ ದಿಢೀರ್ ಪ್ರತ್ಯಕ್ಷರಾಗಿ ಅಡ್ಡಗಟ್ಟುವುದು, ಸವಾರರು ದೂರದಿಂದಲೇ ತಪಾಸಣೆ ನಡೆಯುತ್ತಿರುವುದನ್ನು ಗಮನಿಸಿ ಹಿಂತಿರುಗುವಾಗ ಪೊಲೀಸರು ಅಟ್ಟಿಸಿಕೊಂಡು ಹೋಗುವುದು, ವೇಗ ತಗ್ಗಿಸಿದರೂ ನಿಲ್ಲಿಸದೆ ತಪ್ಪಿಸಿಕೊಂಡು ಹೋಗುವಾಗ ಲಾಠಿಯನ್ನು ಚಕ್ರದೊಳಗೆ ತೂರಿಸಿ ಬೀಳಿಸುವುದು, ಬೈಕ್ನ ಹಿಂಬದಿಯ ಸವಾರನನ್ನು ಹಿಡಿದು ಎಳೆಯುವುದು ಮುಂತಾದ ಕ್ರಮಗಳಿಂದ ಜನರಷ್ಟೇ ಅಲ್ಲ ಪೊಲೀಸರೂ ಜೀವ ಕಳೆದುಕೊಳ್ಳುತ್ತಿದ್ದಾರೆ.
ವಿದೇಶಗಳಲ್ಲಿ ಹಾಗೂ ನಮ್ಮ ಕೆಲವು ರಾಜ್ಯಗಳಲ್ಲಿ ಸಂಚಾರ ನಿಯಮ ಉಲ್ಲಂಘನೆ ತಡೆಗೆ ಹಲವು ಆಧುನಿಕ ತಂತ್ರಜ್ಞಾನಗಳನ್ನು ಬಳಸಲಾಗುತ್ತಿದೆ. ಎಐ ಬಳಕೆಯಂತೂ ಪರಿಣಾಮಕಾರಿಯಾಗಿದೆ. ಅತ್ಯಾಧುನಿಕ ಕ್ಯಾಮೆರಾಗಳು ಬಂದಿದ್ದು, ರಾತ್ರಿ ವೇಳೆಯೂ ವಾಹನಗಳ ನಿಖರ ಫೋಟೊ ತೆಗೆಯುತ್ತವೆ. ಈ ಫೋಟೊಗಳು ಕಂಟ್ರೋಲ್ ರೂಂಗೆ ರವಾನೆಯಾಗುತ್ತಿದ್ದಂತೆ ಅವುಗಳ ನಂಬರ್ ಆಧಾರದಲ್ಲಿ ಮಾಲೀಕರನ್ನು ಪತ್ತೆ ಹಚ್ಚಿ ದಂಡ ವಿಧಿಸುವ ಸ್ವಯಂ ನಿಯಂತ್ರಿತ ವ್ಯವಸ್ಥೆ ಇದೆ.
ರಿಂಗ್ರಸ್ತೆ, ಹೆದ್ದಾರಿ ಸೇರಿದಂತೆ ಹಲವು ರಸ್ತೆಗಳಲ್ಲಿ ಪೊಲೀಸರು ಜಿಗ್ಜಾಗ್ ಆಗಿ ಬ್ಯಾರಿಕೇಡ್ಗಳನ್ನು ಅಳವಡಿಸಿದ್ದಾರೆ. ರಾತ್ರಿ ವೇಳೆ ದಿಢೀರಾಗಿ ಈ ಜಿಗ್ಜ್ಯಾಗ್ ತಡೆ ಎದುರಾಗುವಾಗ ವಾಹನಗಳು ದಿಢೀರಾಗಿ ಬ್ರೇಕ್ ಹಾಕುತ್ತಿದ್ದು, ಹಿಂದಿನಿಂದ ಬರುವ ವಾಹನಗಳು ಡಿಕ್ಕಿ ಹೊಡೆದು ಸಾಕಷ್ಟು ಅಪಘಾತಗಳಾಗುತ್ತಿವೆ. ದ್ವಿಚಕ್ರ ವಾಹನಗಳು ಕೂಡ ಇದರಲ್ಲಿ ಸಿಲುಕಿ ಅಪಘಾತಗಳಾಗುತ್ತಿವೆ. ಈ ರೀತಿ ಅವೈಜ್ಞಾನಿಕವಾಗಿ ತಡೆ ಹಾಕದಂತೆ ಸೂಚನೆ ಇದ್ದರೂ ಸ್ಥಳೀಯ ಪೊಲೀಸರು ತಲೆಕೆಡಿಸಿಕೊಳ್ಳುತ್ತಿಲ್ಲ. ತಮಗೆ ಇಷ್ಟು ಸಂಗ್ರಹ ಮಾಡಬೇಕು ಎನ್ನುವ ಟಾರ್ಗೆಟ್ ಇದೆ ಎನ್ನುವ ಒತ್ತಡದಲ್ಲಿ ತಪಾಸಣೆ ನಡೆಸಲಾಗುತ್ತಿದೆ ಎನ್ನುವ ಅಸಮಾಧಾನ ಇಲಾಖೆಯಲ್ಲಿದೆ.
ತಮ್ಮ ವೈಯಕ್ತಿಕ ಕ್ಯೂಆರ್ ಕೋಡ್ಗೆ ದಂಡವೆಂದು ರಶೀದಿ ಇಲ್ಲದ ಮೊತ್ತವನ್ನು ವರ್ಗಾಯಿಸಿ ಕೊಂಡಿರುವ ಪ್ರಕರಣಗಳೂ ಇವೆ. ಅಲ್ಲದೆ ಹಲವು ತಪಾಸಣೆ ಸಂದರ್ಭ ನಗದು ನೀಡುವಂತೆ ಒತ್ತಾಯಿಸುತ್ತಿದ್ದು, ಯಾವುದೇ ದಾಖಲೆ ನೀಡುವುದಿಲ್ಲ ಎನ್ನುವ ಆರೋಪಗಳೂ ಇವೆ. ವಿಡಿಯೋ ಹಾಗೂ ಫೋಟೊ ತೆಗೆದು ಅವುಗಳ ಮೂಲಕ ಸವಾರರು ಹಾಗೂ ಚಾಲಕರ ಮನೆ ಬಾಗಿಲಿಗೆ ದಂಡ ಕಳುಹಿಸುವ ಅವಕಾಶ ಇದ್ದರೂ ಹೆಚ್ಚಿನವರು ಇತ್ತ ಗಮನ ಹರಿಸುವುದಿಲ್ಲ. ತಡೆದು ನಗದು ವಸೂಲಿ ಮಾಡುವ ಸಂಪ್ರದಾಯದಲ್ಲಿಯೇ ಇನ್ನೂ ಇದ್ದಾರೆ. ಇದರಿಂದಾಗಿ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ.
ಸಂಚಾರ ನಿಯಮ ಉಲ್ಲಂಘನೆ ಸಂಬಂಧ ಪೊಲೀಸರು ರಸ್ತೆಯಲ್ಲಿಯೇ ವಾಹನಗಳನ್ನು ತಡೆದು ತಪಾಸಣೆ ಮಾಡದೇ ವೈಜ್ಞಾನಿಕ ತಪಾಸಣೆ ಮಾಡಬೇಕು. ಇಲ್ಲದೇ ಹೋದರೆ ಪೊಲೀಸರ ತಪಾಸಣೆ ಭಯಕ್ಕೆ ಸಾಕಷ್ಟು ಮಂದಿ ಜೀವ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಸುಧಾರಣೆ ಅಗತ್ಯ. ವಾಹನ ಸವಾರರರು ಕೂಡ ನಿಯಮ ಪಾಲನೆ ಮಾಡುವ ಮೂಲಕ ವಾಹನ ಚಾಲನೆ ಮಾಡಬೇಕಿದೆ ಎನ್ನುತ್ತಾರೆ ಶಂಕರೇಗೌಡ, ನಿವೃತ್ತ ಎಸ್ಪಿ.