
ಬೆಂಗಳೂರು: ಕೆ.ಜಿ.ಹಳ್ಳಿ ಠಾಣೆ ಸಬ್ ಇನ್ಸ್ಪೆಕ್ಟರ್ ನಾಗರಾಜು ಪತ್ನಿ ಶಾಲಿನಿ (೩೫) ಎಚ್.ಬಿ.ಆರ್ ಲೇಔಟ್ನ ನಿವಾಸದಲ್ಲಿ ಸೋಮವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಶಾಲಿನಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿರುವ ಗೋವಿಂದಪುರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

j3tvkannada
ಇಳಕಲ್ ಮೂಲದ ಶಾಲಿನಿ ಹಾಗೂ ಪಿ.ಎಸ್.ಐ ನಾಗರಾಜ್ ಕಾಲೇಜು ದಿನಗಳಲ್ಲಿಯೇ ಆತ್ಮೀಯರಾಗಿದ್ದರು. ಈ ಹಿಂದೆ ಬೇರೊಬ್ಬ ವ್ಯಕ್ತಿ ಜತೆ ಶಾಲಿನಿಗೆ ಮದುವೆಯಾಗಿ ದಂಪತಿಗೆ ಎಂಟು ವರ್ಷದ ಗಂಡು ಮಗುವಿದೆ. ಎಂ.ಎಸ್ಸಿ ಪದವೀಧರೆಯಾಗಿದ್ದ ಶಾಲಿನಿ ನಗರದ ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದರು. ಕೆಲ ವರ್ಷಗಳ ಹಿಂದೆ ಪುನಃ ಗೆಳೆಯ ನಾಗರಾಜ್ ಜತೆ ಸ್ನೇಹ ವೃದ್ಧಿಯಾಗಿತ್ತು. ೨೦೨೦ರಲ್ಲಿ ನಾಗರಾಜ್ ಪಿ.ಎಸ್.ಐ ಆಗಿ ಇಲಾಖೆಗೆ ಸೇರಿದ್ದರು.
ಮೊದಲ ಪತಿಗೆ ವಿಚ್ಛೇದನ ನೀಡಿದ್ದ ಶಾಲಿನಿ, ನಾಗರಾಜ್ ಜತೆ ೨೦೨೪ರ ಆಗಸ್ಟ್ನಲ್ಲಿ ಮದುವೆಯಾಗಿದ್ದರು. ದಂಪತಿ ಎಚ್.ಬಿ.ಆರ್ ಲೇಔಟ್ನ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು. ಸೋಮವಾರ ರಾತ್ರಿ ಶಾಲಿನಿ ತಮ್ಮ ಮನೆಯಲ್ಲಿಯೇ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರೆ.

j3tvkannada
ಮಂಗಳವಾರ ಬೆಳಗ್ಗೆ ಪಿ.ಎಸ್.ಐ ನಾಗರಾಜ್ ಸ್ವತಃ ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿತ್ತು. ಶಾಲಿನಿ ಅವರ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿತ್ತು. ಶಾಲಿನಿ ಅವರ ತಂದೆ ಶಿವಲಿಂಗಪ್ಪ ಶೆಟ್ಟರ್ ಹಾಗೂ ಪತ್ನಿ ಬಂದ ಬಳಿಕ ಶಾಲಿನಿ ಮೃತದೇಹ ಇಳಿಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಶಾಲಿನಿ ಆತ್ಮಹತ್ಯೆ ಸಂಬಂಧ ಅವರ ತಂದೆ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಪೂರ್ವ ವಿಭಾಗದ ಡಿಸಿಪಿ ದೇವರಾಜ್ ತಿಳಿಸಿದರು. ಪಿ.ಎಸ್.ಐ ಹುದ್ದೆ ಪಡೆದ ಬಳಿಕ ನಾಗರಾಜ್, ಶಾಲಿನಿ ಅವರಿಂದ ಅಂತರ ಕಾಯ್ದುಕೊಂಡಿದ್ದರು. ಈ ನಿಟ್ಟಿನಲ್ಲಿ ಶಾಲಿನಿ ಕೋಣನಕುಂಟೆ ಠಾಣೆಯಲ್ಲಿ ನಾಗರಾಜ್ ವಿರುದ್ಧ ಅತ್ಯಾಚಾರ ಆರೋಪದಡಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ರಾಜಿ ಮಾಡಿಕೊಂಡ ಬಳಿಕ ಕಳೆದ ವರ್ಷ ಮದುವೆಯಾಗಿದ್ದರು.

j3tvkannada
ಇತ್ತೀಚೆಗೆ ಪುನಃ ದಾಂಪತ್ಯದಲ್ಲಿ ಬಿರುಕು ಉಂಟಾಗಿತ್ತು. ಸೋಮವಾರ ರಾತ್ರಿ ಕೂಡ ನಾಗರಾಜ್ಗೆ ಕರೆ ಮಾಡಿದ್ದ ಶಾಲಿನಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿ ಗೋವಿಂದಪುರ ರೈಲ್ವೆ ಹಳಿ ಬಳಿ ತೆರಳಿದ್ದರು. ಈ ಮಾಹಿತಿ ಪಡೆದಿದ್ದ ಹೊಯ್ಸಳ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ತೆರಳಿ ಅವರ ಮನವೊಲಿಸಿ ಮನೆಗೆ ಬಿಟ್ಟಿದ್ದರು. ಆದರೆ, ಸೋಮವಾರ ತಡರಾತ್ರಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.
ಶಾಲಿನಿಯನ್ನು ಅಳಿಯನೇ ಕೊಲೆ ಮಾಡಿದ್ದಾರೆ. ಮದುವೆ ನಂತರ ಎರಡು ತಿಂಗಳು ಮಾತ್ರ ಅಳಿಯ ಮಗಳು ಚೆನ್ನಾಗಿದರು. ಗಂಡ ನಾಗರಾಜ್ ಹಲ್ಲೆ ಮಾಡ್ತಾನೆಂದು ಮಗಳು ಹೇಳಿಕೊಂಡಿದ್ದಳು. ಅವನಿಗೆ ನನ್ನ ಮಗಳ ಹಣ ಬೇಕಿತ್ತು, ಅವಳ ಜತೆ ಜೀವನ ಬೇಕಿರಲಿಲ್ಲ. ಡೈಮಂಡ್ ರಿಂಗ್ ಕೊಡಿಸುವಂತೆ ಪುತ್ರಿ ಬಳಿ ಡಿಮ್ಯಾಂಡ್ ಮಾಡ್ತಿದ್ದ. ಪತಿ ಮನೆ ಬಿಟ್ಟು ಹೋಗಿದ್ದಾರೆಂದು ದೂರು ಕೊಡಲು ಹೋಗಿದ್ದಳು.ಶಿವಾಜಿನಗರ ಮಹಿಳಾ ಠಾಣೆಗೆ ಮಗಳನ್ನು ಕೌನ್ಸೆಲಿಂಗ್ಗೆ ಕರೆದಿದ್ದರು. ಠಾಣೆಗೆ ನನ್ನ ಮಗಳು ಶಾಲಿನಿ ಹೋದಾಗ ಸಿಬ್ಬಂದಿ ಬೈದು ಕಳಿಸಿದ್ದಾರೆ. ನಿನಗೆ ಬುದ್ಧಿ ಇರಲಿಲ್ವಾ ಎಂದು ಪೊಲೀಸರೇ ಬೈದಿದ್ದಾರೆ. ನನ್ನ ಮಗಳ ಸಾವಿಗೆ ನ್ಯಾಯ ಸಿಗಬೇಕು ಎಂದು ಮೃತ ಶಾಲಿನಿ ತಂದೆ ಶಿವಲಿಂಗಪ್ಪ, ತಾಯಿ ಭಾರತಿ ಆಗ್ರಹಿಸಿದ್ದಾರೆ.