
ಕೊಪ್ಪಳ: ಎರಡು ಕುಟುಂಬಗಳ ನಡುವಿನ ಆಸ್ತಿ ಕಲಹ ಯುವಕನ ಕೊಲೆಯಲ್ಲಿ ಅಂತ್ಯವಾದ ಘಟನೆ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ನಡೆದಿದೆ.

j3tvkannada
ಚೆನ್ನಪ್ಪ ನಾರಿನಾಳ(35) ಕೊಲೆಯಾದ ದುರ್ದೈವಿ. ಶನಿವಾರ ಮಧ್ಯರಾತ್ರಿ ರವಿ ನಾರಿನಾಳ ಹಾಗೂ ಚೆನ್ನಪ್ಪ ನಾರಿನಾಳ ಕುಟುಂಬಗಳ ನಡುವೆ ಆಸ್ತಿ ವಿಚಾರವಾಗಿ ಜಗಳ ನಡೆದಿತ್ತು. ಈ ಜಗಳ ಅತಿರೇಕಕ್ಕೆ ತಿರುಗಿ ರವಿ ನಾರಿನಾಳ ಹಾಗೂ ಸಹಚರರು, ಚೆನ್ನಪ್ಪ ನಾರಿನಾಳರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದರು ಎಂದು ಆರೋಪಿಸಲಾಗಿದೆ.
ಪ್ರಕರಣದ ಕುರಿತು ಎಸ್ಪಿ ಡಾ. ರಾಮ್ ಅರಸಿದ್ದಿ ಮಾತನಾಡಿ, ಶನಿವಾರ ಮಧ್ಯರಾತ್ರಿ ತಾವರಗೇರಾ ಪಟ್ಟಣದಲ್ಲಿ ಚೆನ್ನಪ್ಪ ಎಂಬ ವ್ಯಕ್ತಿಯ ಕೊಲೆಯಾಗಿದೆ. 4 ಜನ ಯುವಕರು ಸೇರಿ ಕೊಲೆ ಮಾಡಿದ್ದಾರೆ. ಕಳೆದ ಹಲವು ವರ್ಷಗಳಿಂದ ರವಿ ಮತ್ತು ಚನ್ನಪ್ಪ ಕುಟುಂಬದ ನಡುವೆ ಹಗೆತನ ಇತ್ತು. ಆಸ್ತಿ ವಿಚಾರವಾಗಿ ಎರಡೂ ಕುಟುಂಬಗಳ ನಡುವೆ ಕಲಹವಿತ್ತು ಎಂದಿದ್ದಾರೆ.
ಈ ಎರಡೂ ಕುಟುಂಬಗಳ ಕುರಿತು ಈ ಹಿಂದೆಯೇ ತಾವರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕುಟುಂಬದ ಹಲವರ ಮೇಲೆ ರೌಡಿಶೀಟರ್ ಸಹ ತೆರೆಯಲಾಗಿದೆ ಎಂದು ತಿಳಿಸಿದ್ದಾರೆ. ಕೊಲೆ ಪ್ರಕರಣ ಸಂಬಂಧ 10 ಜನರ ವಿರುದ್ಧ ಎಫ್.ಐ.ಆರ್ ದಾಖಲಾಗಿದ್ದು, ಸದ್ಯ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಇನ್ನುಳಿದ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.