
ಬೆಂಗಳೂರು: ನಗರದಲ್ಲಿ ಧಾರಾಕಾರ ಮಳೆಯಾಗಿದ್ದು, ಹಲವು ಕಡೆ ಅವಾಂತರ ಸೃಷ್ಟಿಸಿತು. ವೃಷಭಾವತಿ ಕಾಲುವೆ ಉಕ್ಕಿ ಹರಿದಿದ್ದ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿಯಿತು. ಸಿಲ್ಕ್ ಬೋರ್ಡ್ ಸುತ್ತ ಮುತ್ತಲಿನ ರಸ್ತೆಗಳು ನದಿಯಂತಾಗಿದ್ದು ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಯಿತು.

j3tvkannada
ರಾಜಕಾಲುವೆ ಮತ್ತು ಮೆಟ್ರೋ ಕಾಮಗಾರಿಯಿಂದಾಗಿ ಸಿಲ್ಕ್ ಬೋರ್ಡ್ ಜಂಕ್ಷನ್ನಲ್ಲಿ ನೀರಿನ ಹರಿವಿಗೆ ಜಾಗವೇ ಇಲ್ಲದಂತಾಗಿದೆ. ಇದರ ಪರಿಣಾಮ ರಾಜಕಾಲುವೆಯಲ್ಲಿ ನೀರಿನ ಹರಿವಿನ ಮಟ್ಟ ಜಾಸ್ತಿಯಾಗಿ ಸಿಲ್ಕ್ ಬೋರ್ಡ್ ಜಂಕ್ಷನ್ ಜಲಾವೃತಗೊಂಡಿತು. ಬೆಳಗ್ಗೆ 10 ಗಂಟೆಯವರೆಗೂ ಮಡಿವಾಳ ಫ್ಲೈಓವರ್ನಿಂದ ಬೊಮ್ಮನಹಳ್ಳಿ ಜಂಕ್ಷನ್ವರೆಗೆ 1 ಕಿ.ಮೀ. ಉದ್ದಕ್ಕೂ ನೀರು ನಿಂತಿತ್ತು. ಇದರಿಂದಾಗಿ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಯಿತು. ಫ್ಲೈಓವರ್ ಮೇಲೆ 2.5 ಕಿ.ಮೀ.ನಷ್ಟು, ಫ್ಲೈಓವರ್ ಕೆಳಗಡೆ 1 ಕಿ.ಮೀ.ನಷ್ಟು ಉದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತವು. ಮಧ್ಯಾಹ್ನದವರೆಗೂ ಟ್ರಾಫಿಕ್ ಜಂಜಾಟ ಮುಂದುವರಿಯಿತು.
ಸಾಯಿ ಬಡಾವಣೆಯಲ್ಲಿ ಕರೆಂಟಿಲ್ಲ ಕುಡಿಯಲು ನೀರಿಲ್ಲ:-
ಕೆ.ಆರ್.ಪುರ: ಸಾಯಿ ಬಡಾವಣೆಯಲ್ಲಿ ನೆರೆ ಪೂರ್ಣ ಪ್ರಮಾಣದಲ್ಲಿ ಇಳಿದಿಲ್ಲ. ನಿವಾಸಿಗಳು ವಿದ್ಯುತ್ ಮತ್ತು ನೀರಿನಂತಹ ಮೂಲಸೌಕರ್ಯಗಳು ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಯಿ ಬಡಾವಣೆ ಜಲಾವೃತಗೊಂಡು ಬುಧವಾರಕ್ಕೆ ನಾಲ್ಕು ದಿನ ಕಳೆದಿದೆ. ಸದ್ಯ ವಿದ್ಯುತ್ ಅವಘಡ ತಪ್ಪಿಸುವ ನಿಟ್ಟಿನಲ್ಲಿ ಭಾನುವಾರವೇ ನೆರೆ ಬಂದಿರುವ ಪ್ರದೇಶದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಯು.ಪಿ.ಎಸ್ ಹೊಂದಿರುವ ಮನೆಗಳಲ್ಲಿ ಒಂದೆರಡು ದಿನ ವಿದ್ಯುತ್ ಇತ್ತು. ಈ ಸೌಲಭ್ಯ ಹೊಂದದಿರುವ ಮನೆಗಳು ಅಂದಿನಿಂದಲು ಕತ್ತಲೆಯಲ್ಲಿ ಮುಳುಗಿವೆ. ಈಗ ಬಹುತೇಕ ಮನೆಗಳಲ್ಲಿ ಯು.ಪಿ.ಎಸ್ ಚಾರ್ಜ್ ಮುಗಿದಿದ್ದು, ಬಡಾವಣೆಯಲ್ಲಿ ಕತ್ತಲು ಆವರಿಸಿದೆ. ಮೊಬೈಲ್ ಚಾರ್ಜ್ ಮಾಡಲೂ ಪರದಾಡುವಂತಾಗಿದೆ. ಬೈಕ್, ಕಾರುಗಳು ನೆರೆಗೆ ಸಿಲುಕಿ ಚಾಲು ಆಗುತ್ತಿಲ್ಲ. ಆಟೋ, ಕಾರು ಇತ್ಯಾದಿ ವಾಹನಗಳು ಬರುತ್ತಿಲ್ಲ. ಹೀಗಾಗಿ ಇಲ್ಲಿನ ನಿವಾಸಿಗಳಿಗೆ ದ್ವೀಪದಲ್ಲಿ ಬದುಕುತ್ತಿರುವ ಅನುಭವವಾಗುತ್ತಿದೆ.
ಸಚಿವ ರಾಮಲಿಂಗಾರೆಡ್ಡಿ ಹಾಗೂ ಬಿ.ಬಿ.ಎಂ.ಪಿ ಮುಖ್ಯ ಆಯುಕ್ತ ಮಹೇಶ್ವರ ರಾವ್ ಅವರು ಸ್ಥಳಕ್ಕೆ ಭೇಟಿ ಪರಿಶೀಲಿಸಿ, ಸಿಲ್ಕ್ ಬೋರ್ಡ್ ಜಂಕ್ಷನ್ನಲ್ಲಿ ರಾಜಕಾಲುವೆ ಪುನರ್ ನವೀಕರಣ ಕಾಮಗಾರಿ ಕೈಗೆತ್ತಿಕೊಳ್ಳಬೇಕಿದ್ದು, ಬಿ.ಎಂ.ಆರ್.ಸಿ.ಎಲ್ ನಿಂದ ಅಗತ್ಯ ಕ್ರಮ ಕೈಗೊಂಡು ಜಲಾವೃತಗೊಳ್ಳುವುದನ್ನು ತಪ್ಪಿಸಲು ಅಧಿಕಾರಿಗಳಿಗೆ ಸೂಚಿಸಿದರು.
75 ಕೆರೆಗಳು ಭರ್ತಿ:-
ಬಿ.ಬಿ.ಎಂ.ಪಿ ವ್ಯಾಪ್ತಿಯಲ್ಲಿ 183 ಕೆರೆಗಳಿದ್ದು, ಈ ಪೈಕಿ ಧಾರಾಕಾರ ಮಳೆಯಿಂದಾಗಿ 75 ಕೆರೆಗಳು ಸಂಪೂರ್ಣ ಭರ್ತಿಯಾಗಿವೆ. ಈ ಕೆರೆಗಳ ತೂಬುಗಳ ಬಳಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ. ಕಾಲುವೆಗಳಲ್ಲಿ ತುಂಬಿರುವ ತ್ಯಾಜ್ಯವನ್ನು ತೆರವುಗೊಳಿಸಲಾಗುತ್ತಿದೆ. ನಗರದಲ್ಲಿನ ಎಲ್ಲ ಕೆರೆಗಳಿಗೆ ತೂಬು ಕಾಲುವೆಗಳನ್ನು ಅಳವಡಿಸಿ, ಪ್ರವಾಹ ನಿಯಂತ್ರಣವನ್ನು ತಡೆಯಲಾಗಿದೆ.
25 ಮರಗಳು ಮತ್ತು 44 ಕೊಂಬೆಗಳು ಧರೆಗೆ:-
ನಗರದಲ್ಲಿ ಸುರಿದ ಮಳೆಗೆ 25 ಮರಗಳು ಹಾಗೂ 44 ಮರದ ರೆಂಬೆ-ಕೊಂಬೆಗಳು ನೆಲಕ್ಕುರುಳಿವೆ. ಈ ಪೈಕಿ ಇದುವರೆಗೆ 10 ಮರಗಳು ಹಾಗೂ 25 ಮರದ ರೆಂಬೆಗಳನ್ನು ಪಾಲಿಕೆಯ ಅರಣ್ಯ ವಿಭಾಗದ ಸಿಬ್ಬಂದಿ ತೆರವುಗೊಳಿಸಿದ್ದಾರೆ. ಹಲವೆಡೆ ಧರೆಗುರುಳಿದ ಮರಗಳು ಹಾಗೂ ಮುರಿದು ಬಿದ್ದ ರೆಂಬೆ-ಕೊಂಬೆಗಳನ್ನು ತೆರವು ಮಾಡದ ಕಾರಣ, ಸ್ಥಳೀಯ ನಿವಾಸಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಮಳೆಯ ದೂರುಗಳಿಗೆ ತಕ್ಷಣ ಸ್ಪಂದಿಸಿ:-
ಮಳೆ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಮಂಗಳವಾರ ವರ್ಚುವಲ್ ಸಭೆ ನಡೆಸಿದ ಮುಖ್ಯ ಆಯುಕ್ತ ಮಹೇಶ್ವರರಾವ್, ನಾಗರಿಕರಿಂದ ನಿಯಂತ್ರಣ ಕೊಠಡಿಗಳಿಗೆ ಬರುವ ದೂರುಗಳಿಗೆ ಕೂಡಲೇ ಸ್ಪಂದಿಸಿ ಸಮಸ್ಯೆ ಬಗೆಹರಿಸಬೇಕು. ಜನರಿಗೆ ತ್ವರಿತವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಸದಾ ಕಾರ್ಯ ಪ್ರವೃತ್ತರಾಗಿರಬೇಕು, ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮೇ 22ರವರೆಗೆ ಯೆಲ್ಲೋ ಅಲರ್ಟ್:-
ನಗರದಲ್ಲಿ ಮೇ 22 ರವರೆಗೆ ಗಾಳಿ ಸಹಿತ ಭಾರಿ ಮಳೆ ಬೀಳುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.