
ವಿಜಯನಗರ: ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆ, ಜೀವನಾಡಿ ತುಂಗಭದ್ರಾ ಜಲಾಶಯದ ಒಳಹರಿವು ಗಣನೀಯ ಹೆಚ್ಚಳವನ್ನು ಕಂಡಿದೆ. ಬೇಸಿಗೆ ವೇಳೆ ಬರಿದಾಗಿದ್ದ ಜಲಾಶಯಕ್ಕೆ ಹೊಸ ನೀರು ಹರಿದು ಬಂದಿದ್ದು, ಅಚ್ಚುಕಟ್ಟು ವ್ಯಾಪ್ತಿಯ ಲಕ್ಷಾಂತರ ರೈತರಿಗೆ ಅಭಿವೃದ್ದಿಯ ಭರವಸೆಯನ್ನು ಮೂಡಿಸಿದೆ.

j3tvkannada.in
ಮೇ 1 ರಂದು ಜಲಾಶಯದಲ್ಲಿ 6.85 ಟಿ.ಎಂ. ಸಿ ನೀರಿನ ಸಂಗ್ರಹವಿತ್ತು. ಅಷ್ಟೊತ್ತಿಗಾಗಲೇ 372 ಕ್ಯೂಸೆಕ್ ಒಳಹರಿವು ದಾಖಲಾಗಿತ್ತು. ಇದು ಕ್ರಮೇಣ ಹೆಚ್ಚುತ್ತ ಸಾಗಿದ್ದು, ಮೇ 31ರ ವೇಳೆಗೆ 17,453 ಕ್ಯೂಸೆಕ್ ಒಳಹರಿವಿದೆ. ಸದ್ಯ 15.16 ಟಿ.ಎಂ.ಸಿ ನೀರಿನ ಸಂಗ್ರಹವಿದೆ.
105.788 ಟಿ.ಎಂ.ಸಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಕಳೆದ ವರ್ಷ ಈ ವೇಳೆ ಕೇವಲ 3.60 ಟಿ.ಎಂ.ಸಿ ನೀರಿತ್ತು. ಸದ್ಯ ನೀರಿನ ಪ್ರಮಾಣ ಕಳೆದ ವರ್ಷ ಜುಲೈ 7 ರ ವೇಳೆಗೆ ಬಂದಿತ್ತು. ಆ ಬಳಿಕ ಎರಡೇ ವಾರಗಳಲ್ಲಿ ಟಿಬಿ ಡ್ಯಾಂ ಜಲಾಶಯ ಭರ್ತಿಯಾಗಿತ್ತು. ಈ ಸಲ ಇನ್ನೂ ಬೇಗನೆ ಭರ್ತಿಯಾಗುವ ನಿರೀಕ್ಷೆಯಿದೆ.
2024 ರಂದು ಜೂನ್ 1ರಂದು 270 ಕ್ಯೂಸೆಕ್ ಒಳಹರಿವು ಆರಂಭವಾಗಿತ್ತು. 2023 ರಂದು ಮೇ 5 ರಂದು 366 ಕ್ಯೂಸೆಕ್, 2022 ರಲ್ಲಿ ಏಪ್ರಿಲ್ 4 ರಿಂದಲೇ ಅವಧಿಗೂ ಮುನ್ನವೇ ಒಳಹರಿವು 3,572 ರೊಂದಿಗೆ ಆರಂಭವಾಗಿ ಒಟ್ಟು ಅತ್ಯಧಿಕ 604 ಟಿಎಂಸಿ ನೀರು ಬಂದಿತ್ತು. 2021ರಲ್ಲಿ ಮೇ 1 ರಿಂದ 981ಕ್ಯೂಸೆಕ್ ಒಳಹರಿವಿನೊಂದಿಗೆ ಒಟ್ಟು 377 ಟಿಎಂಸಿ ಹಾಗೂ 2020 ರಲ್ಲಿ ಮೇ 8 ರಿಂದ 2,408 ಕ್ಯೂಸೆಕ್ನಿಂದ ಆರಂಭವಾಗಿ ಒಟ್ಟು 298 ಟಿಎಂಸಿ ಹಾಗೂ 2019 ರಲ್ಲಿ 415 ಟಿಎಂಸಿ ನೀರು ಹರಿದು ಬಂದಿತ್ತು.
ರಾಜ್ಯದ ವಿಜಯನಗರ, ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳು ಮತ್ತು ನೆರೆಯ ರಾಜ್ಯಗಳು ಸೇರಿ ತುಂಗಭದ್ರಾ ಜಲಾಶಯವನ್ನು ನೆಚ್ಚಿಕೊಂಡು ಲಕ್ಷಾಂತರ ಹೆಕ್ಟೆರ್ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದಾರೆ. ಕೃಷಿಯನ್ನೇ ನೆಚ್ಚಿಕೊಂಡಿರುವ ಅಚ್ಚುಕಟ್ಟು ಪ್ರದೇಶದ ರೈತರ ಬದುಕು ಹಸನು ಮಾಡುತ್ತಿರುವ ಜಲಾಶಯದ 19ನೇ ಕ್ರಸ್ಟ್ಗೇಟ್ ಕಳೆದ ವರ್ಷ ಆಗಸ್ಟ್ನಲ್ಲಿ ಕಳಚಿ ಬಿದ್ದ ಬಳಿಕ ರೈತರಲ್ಲಿ ಆತಂಕ ಮನೆ ಮಾಡಿತ್ತು. ಆದರೂ ಒಂದೇ ವಾರದಲ್ಲಿ ಸಮಸ್ಯೆಗೆ ಪರಿಹಾರ ಕಂಡು ತಾತ್ಕಾಲಿಕ ಸ್ಟಾಪ್ಲಾಗ್ ಅಳವಡಿಸಿ ಎರಡೂ ಬೆಳೆಗಳಿಗೆ ನೀರು ಪೂರೈಸಲಾಗಿತ್ತು.