
ತುಮಕೂರು: ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಿಲ್ಲೆಯಲ್ಲಿ ಮೇ 20 ರವರೆಗೆ ಭಾರಿ ಪ್ರಮಾಣದ ಗುಡುಗು ಸಿಡಿಲು ಸಹಿತ ಗಾಳಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೊಅಲರ್ಟ್ ಘೋಷಿಸಿ ಜಿಲ್ಲಾ, ತಾಲೂಕು ಮತ್ತು ಗ್ರಾಮ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆ ಶುಭಾ ಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಸಹ ಶಿರಾ ತಾಲೂಕು ಆಡಳಿತದ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ.

j3tvkannada
ಶಿರಾ ತಾಲೂಕಿನಲ್ಲಿ ರಾತ್ರಿ ಗುಡುಗು ಸಹಿತ ಮಳೆಯಾಗಿ ತಾಲೂಕಿನಲ್ಲಿ ಹಲವು ಕಡೆ ಅವಘಡಗಳು ಸಂಭವಿಸಿವೆ. ಆದರೆ ತಹಸೀಲ್ದಾರ್ ಅವರು ಅವಘಡಗಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವ ಬದಲು ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಜನರನ್ನು ಕರೆದುಕೊಂಡು ಹೋಗುವ ಸಿದ್ಧತೆಯಲ್ಲಿರುವುದು ಕಂಡುಬಂದಿದೆ.
ಮಳೆ ಹಾನಿ ಬಗ್ಗೆ ನಮ್ಮ ವರದಿಗಾರರು ಮಾಹಿತಿ ಕೇಳಲು ಹೋದಾಗ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಜನರನ್ನು ಕರೆದುಕೊಂಡು ಹೋಗಬೇಕು ಇದರ ಸಿದ್ಧತೆಯಲ್ಲಿದ್ದೇನೆ ಈ ಬಗ್ಗೆ ವಿಷಯ ನಿರ್ವಾಹಕರ ಬಳಿ ವಿಚಾರಿಸಿ ಎಂದು ದೂರವಾಣಿ ಕೊಟ್ಟು ಕೈ ತೊಳೆದುಕೊಂಡಿದ್ದಾರೆ. ಈ ಬಗ್ಗೆ ವಿಷಯ ನಿರ್ವಾಹಕರ ಬಳಿ ಮಾಹಿತಿ ಕೇಳಿದರೆ, ನಾನು ಬೆಂಗಳೂರಿನಲ್ಲಿಇಲಾಖೆ ಪರೀಕ್ಷೆಗೆ ಆಗಮಿಸಿದ್ದು, ಮಾಹಿತಿಯನ್ನು ನಾಳೆ ಬಂದು ಕೊಡುತ್ತೇನೆ ಎಂದು ಉತ್ತರ ನೀಡಿದ್ದಾರೆ. ಆ ನಂತರ ವಾಟ್ಸ್ಆಪ್ನಲ್ಲಿ ಕೆಲವು ಮಾಹಿತಿ ಹಾಕಿ ಕೈ ತೊಳೆದುಕೊಂಡಿದ್ದಾರೆ.
2.7 ಹೆಕ್ಟೇರ್ ತೋಟಗಾರಿಕಾ ಬೆಳೆಗಳು ಹಾನಿ: –
ಶಿರಾ ತಾಲೂಕಿನಲ್ಲಿ ಕಳೆದ ಒಂದು ತಿಂಗಳಿನಿಂದ ಸುರಿದ ಬಿರುಗಾಳಿ ಸಹಿತ ಮಳೆಗೆ ಸುಮಾರು 2.70 ಹೆಕ್ಟೇರ್ ತೋಟಗಾರಿಕಾ ಬೆಳೆ ಹಾನಿಯಾಗಿದೆ. ತಾಲೂಕಿನ ಬುಕ್ಕಾಪಟ್ಟಣ ಹೋಬಳಿಯ ಮಂಗನಹಳ್ಳಿ, ದೊಡ್ಡ ಆಲದಮಡು, ಗಿಡ್ಡನಹಳ್ಳಿ, ಕಸಬಾ ಹೋಬಳಿಯ ಕಲ್ಲುಕೋಟೆ, ಲಕ್ಷಿಸಾಗರ, ಗೌಡಗೆರೆ ಹೋಬಳಿಯ ತಾವರೆಕೆರೆ ಗ್ರಾಮದಲ್ಲಿ ಸುಮಾರು 11 ರೈತರ ಅಡಕೆ ಮತ್ತು ತೆಂಗಿನ ಮರಗಳು ಮಳೆ ಗಾಳಿಗೆ ಹಾನಿಯಾಗಿದ್ದು ಒಟ್ಟು 2.70 ಹೆಕ್ಟೇರ್ ಪ್ರದೇಶ ಹಾನಿಯಾಗಿದೆ.
ಮಳೆಗೆ ಕುಸಿದ ಚಾವಣಿ:-
ಶಿರಾ ತಾಲೂಕು ಬುಕ್ಕಾಪಟ್ಟಣದಲ್ಲಿ ರಾತ್ರಿ 19.2 ಮಿಲಿ ಮೀಟರ್ ಮಳೆ ಆಗಿದ್ದು ಬುಕ್ಕಾಪಟ್ಟಣ ಹೋಬಳಿಯ ಮೇಣಿಗನಹಟ್ಟಿ ಗ್ರಾಮದ ಮಂಜುನಾಥ ಎಂಬುವರ ವಾಸದ ಮನೆಯ ಚಾವಣಿ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಗ್ರಾಮದ ಲೆಕ್ಕಾಧಿಕಾರಿ ಲತಾ ಹಾಗೂ ಕುರುಬರಹಳ್ಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆದರೆ ಮನೆ ಚಾವಣಿ ಕುಸಿದು ಹಾನಿಯಾಗಿರುವುದು ತಾಲೂಕು ಆಡಳಿತಕ್ಕೆ ಮಾಹಿತಿಯೇ ಇಲ್ಲಎಂಬುದೇ ವಿಪರ್ಯಾಸ.