
ಕೊಡಗು: ಹಲವೆಡೆ ಮಂಗಳವಾರ ಬೆಳಗ್ಗಿನಿಂದಲೇ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆಯಿಂದ ಬುಧವಾರ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಕೊಡಗಿನಲ್ಲಿ ಮಂಗಳವಾರದಿಂದ ಮಳೆಗಾಲದ ವಾತಾವರಣ ಸೃಷ್ಟಿಯಾಗಿದೆ. ಮಡಿಕೇರಿ ಸೇರಿದಂತೆ ಹಲವೆಡೆ ಬೆಳಗಿನ ಜಾವದಿಂದಲೇ ಮಳೆ ಸುರಿಯುತ್ತಿದ್ದು, ದಟ್ಟ ಮಂಜು ಮತ್ತು ಮೋಡಕವಿದ ವಾತಾವರಣ, ಚಳಿ ಆವರಿಸಿದೆ.

j3tvkannada
ಮಡಿಕೇರಿಯಲ್ಲಿ ಕೆಲವೊಮ್ಮೆ ಸಾಧಾರಣ ಮಳೆಯಾದರೆ ದಿನ ವಿಡೀ ತುಂತುರು ಮಳೆಯಾಗುತ್ತಲಿತ್ತು. ಇದ್ದಕ್ಕಿದ್ದಂತೆ ಸಂಪೂರ್ಣ ಮಳೆಗಾಲದ ವಾತಾವರಣ ಸೃಷ್ಟಿಯಾದ ಹಿನ್ನೆಲೆ ಜನಜೀವನ ಅಲ್ಪ ಮಟ್ಟಿಗೆ ಅಸ್ತವ್ಯಸ್ತವಾಗಿದೆ.
ಬುಧವಾರವೂ ರೆಡ್ ಅಲರ್ಟ್:-
ಜಿಲ್ಲೆಯಲ್ಲಿ ಸೋಮವಾರದಿಂದಲೇ ರೆಡ್ ಅಲರ್ಟ್ ಘೋಷಣೆಯಾಗಿದೆ. ಆದರೆ ಸೋಮವಾರ ಸಂಜೆ ವೇಳೆಗೆ ಅಲ್ಲಲ್ಲಿ ಸಾಧಾರಣ ಮಳೆಯಾಗಿದ್ದು ಬಿಟ್ಟರೆ ಎಲ್ಲಿಯೂ ದೊಡ್ಡ ಪ್ರಮಾಣದ ಮಳೆ ಸುರಿದಿಲ್ಲ. ಮಂಗಳವಾರ ಬೆಳಗ್ಗಿನಿಂದಲೇ ಮಡಿಕೇರಿ ನಗರ, ಹೊರವಲಯದ ಹಲವು ಗ್ರಾಮಗಳು ಸೇರಿದಂತೆ ಜಿಲ್ಲೆಯ ನಾನಾ ಕಡೆ ಮಳೆ ವರದಿಯಾಗಿದೆ. ಮಂಗಳವಾರ ಸಂಜೆ ಭಾರತೀಯ ಹವಾಮಾನ ಇಲಾಖೆಯಿಂದ ಮತ್ತೆ ಜಿಲ್ಲೆಗೆ ರೆಡ್ ಅಲರ್ಟ್ ಘೋಷಣೆಯಾಗಿದ್ದು, ಮಳೆ ಹೆಚ್ಚಾಗುವ ಮುನ್ಸೂಚನೆ ನೀಡಲಾಗಿದೆ. ಇನ್ನೂ ಕೊಡಗಿನಲ್ಲಿ ಸಾಮಾನ್ಯವಾಗಿ ಜೂನ್ ಆರಂಭದಿಂದ ಮುಂಗಾರು ಮಳೆ ಶುರುವಾಗುತ್ತದೆ.
ಮೊದಲ ವಾರ ಬಿಸಿಲಿನ ವಾತಾವರಣ ಕಂಡು ಬಂದಿತ್ತು. ಹೀಗಾಗಿ ಈ ಬಾರಿಯೂ ಮಳೆಗಾಲಕ್ಕೆ ಜನ ಇನ್ನೂ ಸಿದ್ಧರಾಗಿಲ್ಲ. ಮಳೆಗಾಲಕ್ಕೆ ಬೇಕಾದ ಛತ್ರಿ, ಗಂಬೂಟು, ರೈನ್ಕೋಟ್ಗಳ ಖರೀದಿ ಇನ್ನೂ ಚುರುಕುಗೊಂಡಿಲ್ಲ. ಮಳೆಗಾಲಕ್ಕೆ ಮೊದಲು ಮನೆಗಳ ರಿಪೇರಿ ಕೆಲಸಗಳು, ಬಾಕಿ ಇರುವ ಕಟ್ಟಡ ಕಾಮಗಾರಿಗಳನ್ನು ಮುಗಿಸುವುದು ವಾಡಿಕೆಯಾಗಿದ್ದು, ಆ ಕೆಲಸಗಳೂ ಹಲವೆಡೆ ಇನ್ನೂ ಪ್ರಗತಿಯಲ್ಲಿರುವಾಗಲೇ ಮಳೆಗಾಲದ ವಾತಾವರಣ ಸೃಷ್ಟಿಯಾಗಿರುವುದು ಜನರಿಗೆ ಸಂಕಷ್ಟ ತಂದೊಡ್ಡಿದೆ.
ಹವಾಮಾನ ಇಲಾಖೆ ಈ ಬಾರಿ ಅವಧಿಗೂ ಮೊದಲೇ ಮುಂಗಾರು ಪ್ರವೇಶವಾಗುವ ಬಗ್ಗೆ ಸೂಚನೆ ನೀಡಿದೆ. ಪೂರ್ವ ಮುಂಗಾರು ಮೇ ಎರಡು- ಮೂರನೇ ವಾರವೂ ಮುಂದುವರಿದರೇ ಅಷ್ಟರಲ್ಲಿ ಮಾನ್ಸೂನ್ ಕೂಡಾ ಆರಂಭವಾಗಿ ನಿರಂತರ ಮಳೆಯಾಗುವ ಸಾಧ್ಯತೆ ಹೆಚ್ಚಿದ್ದು, ಹಿಂದೆಯೂ ಹಲವು ಬಾರಿ ಇದೇ ರೀತಿ ಆಗಿದೆ ಎಂದು ಹೇಳಿದೆ.