ಬೀದರ್: ಶಿವಪುರದ ಸಿದ್ದೇಶ್ವರ ದೇವಾಲಯವು ಕಲಾವೈಭವಕ್ಕೆ ಹೆಸರುವಾಸಿಯಾಗಿದೆ. ಅನೇಕ ಜನರು ಇಲ್ಲಿಗೆ ಆಗಮಿಸುತಿದ್ದಾರೆ. ದೇವಾಲಯದ ಮುಂದೆ ಇರುವ ಪುಷ್ಕರಣೆಯಲ್ಲಿ ಹೂಳು ತುಂಬಿದ್ದು ಕಸ ಕಡ್ಡಿಗಳನ್ನು ಎಸೆದು ಗಲೀಜು ಮಾಡಿದ್ದಾರೆ. ತಡೆಗೋಡೆಯೇ ಇಲ್ಲದೆ ಹಂದಿ ನಾಯಿಗಳು ಬಿದ್ದು ಪುಷ್ಕರಣೆ ಗಬ್ಬು ನಾರುತ್ತಿದೆ. ಆದರೆ ಇದಕ್ಕೆ ಸಂಬಂಧಿಸಿದವರು ಯಾರೂ ಇದರ ಬಗ್ಗೆ ತಲೇನೇ ಕೆಡಿಸಿಕೊಳ್ಳುವುದಿಲ್ಲ.

ದೇವಸ್ಥಾನಕ್ಕೆ ಬರುವ ಭಕ್ತರಿಗೆ ತ್ರಿಪುರಾಂತದ ಮಡಿವಾಳ ಮಾಚಿದೇವ ಚೌಕದಿಂದ ದೇವಾಲಯಕ್ಕೆ ಹೋಗಲು ರಸ್ತೆಯಿದೆ. ಇಲ್ಲಿಂದ ನಾರಾಯಣಪುರ ಮಾರ್ಗವಾಗಿ ಬಸವಕಲ್ಯಾಣವನ್ನು ಸೇರುವ ರಸ್ತೆಯು ಅಗಲೀಕರಣವಾಗಬೇಕಾಗಿದೆ ,ಯಾಕೆಂದರೆ ಈ ರಸ್ತೆಯು ಇಕ್ಕಟ್ಟಾಗಿದ್ದು ಜನ ಸಂಚಾರಕ್ಕೆ ಇದರಿಂದ ತೊಡಕಾಗಿದೆ.
ಇದನ್ನು ಕುಂಡಲೇಶ್ವರ ದೇವಸ್ಥಾನ ಎಂದೂ ಕರಯಲಾಗುತ್ತದೆ. 12ನೇ ಶತಮಾನದ ಬಸವಣ್ಣನವರ ಸಮಕಾಲೀನರಾದ ಸಿದ್ದರಾಮೇಶ್ವರರ ದೇಗುಲವೂ ಇದಾಗಿತ್ತು ಎಂಬ ದಾಖಲೆಗಳಿವೆ. ಸಿದ್ದರಾಮೇಶ್ವರರು ನಾಡಿನಾದ್ಯಂತ ಅನೇಕ , ಕೆರೆ ಕಟ್ಟೆಗಳನ್ನು, ಕಟ್ಟಡಗಳನ್ನು ಕಟ್ಟಿಸಿದ್ದರು. ಅಂದಿನ ಕೆಲವು ಕೆರೆಗಳು ಇಂದಿಗೂ ಇಲ್ಲಿವೆ. ದೇವಾಲಯದ ಎದುರಿನ ಕೆರೆಯೂ ಆಗಿನ ಕಾಲದ ಕೆರೆಯೇ ಆಗಿದೆ.
ಈ ಪುಷ್ಕರಣೆಯಲ್ಲಿ ಅಂದಿನ ಕಾಲದ ಕಟ್ಟಡಗಳ ಅವಶೇಷಗಳು ಇವೆ. ಆದರೆ ಇಂದು ಈ ಪುಷ್ಕರಣೆ ಇದೆಯೋ ಇಲ್ಲವೋ ಎಂಬಂತಿದೆ. ಹೂಳು ತುಂಬಿ ಗುರುತು ಸಿಗದಂತೆ ಆಗಿದೆ. ಮೊದಲೆಲ್ಲಾ ಈ ಪುಷ್ಕರಣೆಯಲ್ಲಿ ತಿಳಿ ನೀರು ತುಂಬಿರುತ್ತಿತ್ತು, ಸುಂದರವಾದ ಕಮಲದ ಹೂವುಗಳು ಅರಳಿ ನಳನಳಿಸುತ್ತಿದ್ದವು ಎಂದು ಊರಿನ ಹಿರಿಯರು ಹೇಳುತ್ತಾರೆ.
ಗತಕಾಲದ ವೈಭವವನ್ನು ಮರಳಿ ತರಬೇಕಾಗಿದೆ. ಅದಕ್ಕೆ ಬೇಕಾಗುವ ಕೆಲಸ ಕಾರ್ಯಗಳನ್ನು ಹಮ್ಮಿಕೊಳ್ಳಬೇಕಾಗಿದೆ ಎಂಬುದು ಊರಿನ ಜನರ ಅಪೇಕ್ಷೆಯಾಗಿದೆ. ವಿಪರೀತವಾಗಿ ಹೂಳು ತುಂಬಿ ಜಮೀನಿನಂತೆ ಕಾಣುವ ಈ ಪುಷ್ಕರಣೆಯ ಅಭಿವೃದ್ದಿ ಕಾರ್ಯಗಳನ್ನು ಸಂಬಂಧ ಪಟ್ಟ ಅಧಿಕಾರಿಗಳು ಮುಂದೆ ನಿಂತು ಮಾಡಬೇಕಾಗಿದೆ.
ಶ್ರಾವಣ ಮಾಸದಲ್ಲಿ ಇಲ್ಲಿಗೆ ಪ್ರವಾಸಿಗರ ದಂಡೇ ಆಗಮಿಸುತ್ತಿದೆ. ಮದುವೆ ಮುಂತಾದ ಶುಭ ಕಾರ್ಯಗಳೂ ನಡೆಯುತ್ತಿರುತ್ತವೆ. ದಾಸೋಹಕ್ಕೆ ಯೋಗ್ಯವಾದ ಕೊಠಡಿಗಳನ್ನು ನಿರ್ಮಿಸಬೇಕಾಗಿದೆ. ಸಭಾಭವನ ಕಟ್ಟಬೇಕು
ಬಸವಕಲ್ಯಾಣ ಅಭಿವೃದ್ಧಿಯ ಮಂಡಳಿಯಿಂದ ಇತರೇ ಶರಣ ಸ್ಮಾರಕಗಳ ಸ್ಥಳದಲ್ಲಿ ನಿರ್ಮಿಸಿರುವಂತೆ ಇಲ್ಲಿಆವರಣಗೋಡೆ ಮತ್ತು ಎದುರಲ್ಲಿ ಉದ್ಯಾನದ ವ್ಯವಸ್ಥೆಯನ್ನು ಮಾಡಬೇಕಾಗಿದೆ. .